Monday 24 August 2015

ಇರುಳ ದಾಟುವಂತೆ

ನಾಚಿ ಬೆಳಗು ಬಳುಕುತಿರಲು
ಸಣ್ಣ ಗಾಳಿ ಸುಳಿಯಿತು
ಇರುಳ ರಾಯಭಾರಿಯಂತೆ
ಕತ್ತಲನ್ನು ಬಡಿಸಿತು


ದೀಪ ಎತ್ತಲಿತ್ತೋ ಪಾಪ
ದೀಪವೇ ಹುಡುಕಾಡಿತು
ಬೆಂಕಿ ಕಡ್ಡಿ ಕಿಡಿಗೆ ಕಾದು
ಗೌಣವೊಂದೇ ಗುನುಗಿತು


ಅತ್ತ ಬಾನಿನಾಚೆ ಚಂದ್ರ
ಕುಡಿದು ಅಮಲನೇರಿಸಿ
ಇತ್ತ ಭೂಮಿಯನ್ನೇ ಮರೆತ
ಸುಳ್ಳು ಚುಕ್ಕಿ ತೋರಿಸಿ


ಬಿಕ್ಕಿ ಅತ್ತ ಕಣ್ಣುಗಳಲಿ
ಹೆಕ್ಕಿ ತಂದ ಕಂಬನಿ
ತನ್ನ ಪಾಡು ಪಾಡಿಕೊಂತು
ಕೆನ್ನೆ ಮೇಲೆ ಲೇಖನಿ


ಬೆತ್ತಲಾದ ಸತ್ಯಗಳಿಗೂ
ತುಂಬು ಹೊದಿಕೆ ಕತ್ತಲು
ಏರಲೆತ್ತರಕ್ಕೆ ಕನಸು
ಕಟ್ಟಬೇಕು ಮೆಟ್ಟಿಲು


ಬಿಟ್ಟ ಮುನಿಸು, ಕೊಟ್ಟ ಮುತ್ತು
ಸಾಕ್ಷಿಗಳೂ ಸುಂದರ
ಮನದ ತೆರೆದ ಮೊಗಸಾಲೆಗೆ
ಆನಿ ತೆಂಗು ಚಪ್ಪರ


ಎಲ್ಲ ಇದ್ದೂ ಕಾಣಲಿಲ್ಲ
ಕಳೆಯಲಿಲ್ಲ ಏನನೂ
ಸಾಕುಮಾಡಿ ಬರಮಾಡಿ-
-ಕೊಳ್ಳೋಣವೇ ಬೆಳಕನು?!!


                        -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...