Monday 24 August 2015

ಹೊಸ ಕವಿತೆ

ಒಂದೇ ಕವಿತೆಯನ್ನ ಬಾರಿ ಬಾರಿ ಓದುತಿರುವೆ
ಅರ್ಥವಾಗುತ್ತಿದ್ದಂತೆ ಮತ್ತೆ ಒಗಟಿನ ಸಂತೆ


ಮೊದಲಾಗಿ ಅರ್ಧಕ್ಕೆ ನಿಲ್ಲಿಸಿ
ಅರ್ಥವ ಕಂಡುಕೊಳ್ಳುವವನಿದ್ದೆ
ಏನೂ ತೋಚದಂತೆ ಸೋತು ಬಿದ್ದೆ
ಮತ್ತೆ ಮೊದಲಾಗಿಸಿಕೊಂಡೆ


ಒಮ್ಮೊಮ್ಮೆ ಅನಿಸಿದ್ದೂ ಉಂಟು
"ತಿರುಳಿಲ್ಲದ ಸಾಲುಗಳ ಓದಿ ಏನು ಪ್ರಯೋಜನ?"
ದಾಟಿ ಮುಂದಕ್ಕೆ ಸಾಗಿದೆ
ಮರು ಸಾಲು ಬಿಟ್ಟ ಸಾಲ ಕೊಂಡಿ ಬಯಸಿತು
ಹೀಗೇ ಅದೆಷ್ಟೋ ಬಾರಿ ಎಡವಿದ್ದೇನೆ!!


ಕವಿತೆ ನನ್ನದೇ,
ಆದರೆ ನಾ ಬರೆದದ್ದಲ್ಲ
ನಾ ಮಾತ್ರ ಓದಬೇಕಾದದ್ದು!!


ಪ್ರತಿ ಸಲ ಓದಿದಾಗ
ಹೊಸ ಅರ್ಥಗಳು ತೆರೆದುಕೊಳ್ಳುವಷ್ಟರಲ್ಲೇ
ಹಳೆ ಅರ್ಥಗಳು ಸಮರಕ್ಕಿಳಿಯುತ್ತವೆ,
ಯಾವುದನ್ನ ಗೆಲ್ಲಿಸಬೇಕೋ ಅರ್ಥವಾಗದಂತೆ!!


ಕವಿತೆಯ ಕೊನೆಯ ಸಾಲಿನ್ನೂ ನಿಗೂಢ
ಯಾವುದೋ ಹೊಸ ಹುಟ್ಟಿನ ಸೂಚನೆ ನೀಡುತ್ತದೆ,
ಅರ್ಥವಾಗಬೇಕಾದರೆ ಪೂರ್ತಿ ಓದಬೇಕು
ಪೂರ್ತಿಯಾಗಲು ಅರ್ಥವಾಗಬೇಕು!!


                                                      -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...