Tuesday 17 November 2020

ಕಿವಿಗೊಡು ಪಿಸು ಮಾತಿಗೆ

ಕಿವಿಗೊಡು ಪಿಸು ಮಾತಿಗೆ 

ತುಸು ಕರೆದರೂ ಬಳಿಗೆ ಬಾ  
ಹಸಿ ಗಾಯಕೆ ನಿನ್ನ ನೆರಳ ಉಪಶಮನದ ನೆವವು 
ನಸುಕಲ್ಲಿಯ ಪಯಣದಲಿ
ಮಿಟುಕಿಸದಿರು ಕಣ್ಣುಗಳ 
ಅರೆ ಕ್ಷಣವೂ ನಿನ್ನ ಬಿಟ್ಟಿರಲಾರದು ಮನವು 

ನಶೆಯೊಳಗಿಂದೀಚೆಗೆ 
ಬಂದೆದುರಿಗೆ ನಿಂತ ನಿಲುವು-
-ಗನ್ನಡಿಯಲಿ ಕಾಣಿಸಿತ್ತು ಕೆನ್ನೆಗಂಟಿ ಪಸೆಯು 
ದೆಸೆಯೆಂಬುದು ಕಾಣದಾಗಿ
ಹುಸಿ ಬದುಕನು ನಡೆಸುವಲ್ಲಿ 
ಗಡಿಯಾರದ ಮುಳ್ಳು ಇರಿದಂತೆ ಪ್ರತಿ ಸಲವೂ 

ಹೇರಳವಾಗಿವೆ ನೆನಪು 
ಕಣ್ಣ ಕಾವಲು ದಾಟಿ 
ಹೊಮ್ಮುವಂತೆ ಮಾಡಿವೆ ಕಂಬನಿ ಸಾಲನ್ನು 
ಚೂರೇ ಅಂತರವಿದ್ದೂ 
ಅಂಧಕಾರ ಕವಿದಂತೆ 
ಇದ್ದಲ್ಲೇ ಉಳಿದು ನಾ ಕುರುಡು ಗಾವಿಲನು

ಸೋಲನು ಗೆದ್ದು ಬರಲು 
ಯಾವುದೇ ಸುಲಭಗಳಿಲ್ಲ 
ಕಠಿಣ ದಾರಿ ಹಿಡಿಯುವುದ ಯಾಕೆ ಕಲಿಸದಾದೆ?
ಬಿದ್ದಷ್ಟೇ ಸುಲಭಕ್ಕೆ 
ಮುಂದೂಡಿಸಲಾಗದೇ?
ಪ್ರೀತಿಯ ಬಲೆ ಮತ್ತಷ್ಟು ಗೋಜಲಾಗಿ ಹೋಗಿದೆ

ಮುಟ್ಟಿ ಹೋಗು, ತಟ್ಟಿ ಹೋಗು 
ಬಿಟ್ಟು ಹೊರಡುವ ಮುನ್ನ 
ಎಚ್ಚರದಲ್ಲುಳಿದಾಗ ಖಚಿತವೆನಿಸಲಿ ಎಲ್ಲ 
ಹಾಗಲ್ಲದೆ ದೂರಾದರೆ 
ದೇವರಾದರೂ ಸರಿಯೇ 
ನಂಬಿಕೆ ಮೂಡಿಸಿದರೂ ನಾ ನಂಬುವವನಲ್ಲ... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...