Monday 2 May 2016

ಕವಿತೆ ಕಟ್ಟುತ...

ಅವಳು ಕಿಟಕಿ ತೆರೆದಳು
ಒಂದೊಂದೇ ಹನಿ
ಗಾಜಿಗಂಟಿದ ಧೂಳನ್ನು ತೊಳೆದು
ಸದ್ದು ಬದಲಿಸುತ್ತಲೇ ಇತ್ತು


ಅವಳು ನನ್ನ ಕೈ ಹಿಡಿದಳು
ಗುಡುಗಬಹುದಾದ ಸಾಧ್ಯತೆಗೆ,
ಮಿಂಚಷ್ಟೇ ಕಂಡದ್ದು
ಗುಡುಗೂ ಸದ್ದಿಲ್ಲದಂತೆ ದೂರುಳಿದು
ಹತ್ತಿರವಾಗಿಸಿತು ಎದೆಗಳ


"ಹೃದಯಗಳು ಮಾತನಾಡಿಕೊಳಲಿ ಬಿಡಿ
ತುಟಿಗಳಿಗೆ ತ್ರಾಸು ಕೊಡದೆ
ಮೌನವಾಗಿಸಲಿದು ಸಮಯ" ಅಂದಳು
ನನಗೆಲ್ಲ ಅರ್ಥವಾದಂತೆ ನಕ್ಕೆ
ಒಗಟು-ಒಗಟಾಗಿ


ಮಳೆ ಜೋರಾಗಿ, ನಿಂತು
ನಿಂತಷ್ಟೇ ಜೋರಾಯಿತು
ಹೃದಯಗಳು ಚೂರಾಯಿತು
ಅಲ್ಲಲ್ಲ ಪ್ರಾಸಕ್ಕಾಗಿ ಚೂರಾದದ್ದಲ್ಲ
ಚೂರಾದದ್ದು ಖರೆ
ಒಂದು ನೂರು ಬಾರಿಯಾದರೂ
ಆದರೂ ಸ್ಥಿಮಿತದಲ್ಲಿದದ್ದು ಅಚ್ಚರಿ!!


"ಹೇರಿದ ಕವಿತೆ ರಾಡಿಯಂತೆ
ಆವರಿಸಬೇಕು ಮೋಡದಂತೆ"
ಹೀಗಂದೊಡನೆ ನಿಮಿರಿತು ಆಕೆಯ ಕಿವಿ
ಅಲ್ಲವೇ ನಾನೂ ಒಬ್ಬ ಕವಿ?
ಆಚೆ ಮಳೆ ಜೋರಾಯಿತು
ಒಂದು ಅಮೋಘ ವರ್ಷಧಾರೆ
ಆಕೆಯ ಗಮನವೆಲ್ಲ ಕಡೆಗೆ
ನನ್ನದೂ...


                                     - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...