Wednesday 23 December 2020

ಕಲಾವಿದ ನಿರ್ಲಕ್ಷಕ್ಕೊಳಗಾದಷ್ಟೂ ಪ್ರಬಲನಾಗುತ್ತಿದ್ದಾನೆ


ಇವನಿಗೆ ಮಂಜು ಪರದೆಯ ಮೇಲೆ
ಚಿತ್ರ ಬಿಡಿಸುವುದೆಂದರೆ ಪಂಚ ಪ್ರಾಣ
ತಾನು ಎಳೆದ ಗೀಟು ಎಲ್ಲೂ ಕೂಡದೆ 
ತನ್ನಷ್ಟಕ್ಕೆ ತಾನು ಇದ್ದು ಬಿಡಬಹುದು 
ಅಥವ ಒಂದನೊಂದು ಕೂಡಿ 
ಪೂರ್ಣಾಕೃತಿ ಪಡೆದುಕೊಳ್ಳಬಹುದು 

ಯಾರೂ ಇವನ ಕಲಾವಂತಿಕೆಯ ಮೆಚ್ಚಿ 
ಅಥವ ತೆಗಳಿ ಮಾತನಾಡುವವರಿಲ್ಲ 
ಇವನಲ್ಲಿ ಮೂಡುವ ಭಾವಕ್ಕೆ ತಕ್ಕಂತೆ 
ಓರೆಕೋರೆಗಳು ಬಾಗಿ ಬೀಗುತ್ತವೆ 
ಮತ್ತು ಅವವುಗಳೊಳಗೇ ಸುಪ್ತವಾಗುತ್ತವೆ 
ಮೂಡಿದಷ್ಟೇ ಅವಸರದಲ್ಲಿ ನೇಪಥ್ಯಕ್ಕೆ ಸರಿದು 

ಇವನಲ್ಲಿ ಪ್ರದರ್ಶನಕ್ಕೂ ಸರಕಿಲ್ಲ 
ಆ ಕ್ಷಣ, ಆ ಗಳಿಗೆಗೆ ತಕ್ಕಂತೆ ಬಿಡಿಸಬಲ್ಲ;
ನೀರ ಮೇಲೋ, ಗಾಳಿಯಲ್ಲೋ 
ಕ್ಷಿತಿಜವನ್ನು ಎಳೆತಂದು ಇಬ್ಬನಿಗೆ 
ಮಳೆಬಿಲ್ಲನ್ನು ಒಲೆಯ ಮಸಿಗೆ ಸೇರಿಸುವ
ನಿರೂಪಮಾನ ಕಲೆ ಇವನದು 

ಯಾರೋ ಕದ್ದಿರಬಹುದಾದ ಗುಮಾನಿ 
ಅಥವ ಎರವಲು ಪಡೆದ ಸಬೂಬು
ಯಾವುದೂ ಇವನನ್ನು ಬಾಧಿಸುವುದಿಲ್ಲ;
ಬಿಡಿಸಿದ ಒಗಟನ್ನು ಮತ್ತೆ ಇವನೇ 
ಗೋಜಲಾಗಿಸಿಕೊಂಡು ಬಿಡಿಸಿ ಕೂರಬಹುದು  
ಅಥವ ಏನೂ ಅರಿಯದವನಂತೆ 
ನಿರ್ಲಿಪ್ತನಾಗಿ ಉಳಿದುಬಿಡಬಹುದು 

ಘೋಷ, ಜೈಕಾರಗಳು ಕೇಳುವುದಿಲ್ಲ 
ಪಾರಿತೋಷಕ, ಬಿರುದು ಕಾಣುವುದಿಲ್ಲ 
ಬೆರಳಂಚಲಿ ಬಣ್ಣದ ಕಲೆಯೂ 
ಕಣ್ಣಂಚಲಿ ಸಾರ್ಥಕತೆಯೂ ಗೋಚರಿಸುವುದಿಲ್ಲ;
ಒಳಗೇನೋ ಮಾರ್ಮಿಕ ತುಡಿತ 
ಸದಾ ಎಚ್ಚರಿಸಿದಂತೆ ತೊಳಲಾಡುತ್ತಾನೆ 
ಮೇಲ್ನೋಟಕ್ಕೆ ಶಾಂತ ರೂಪಿಯಾಗಿ 

ಯಾರಲ್ಲೂ ಹೇಳಿಕೊಳ್ಳಲಾಗದ ನೋವು
ಎಲ್ಲರಲ್ಲೂ ಹಂಚಿಕೊಳ್ಳಬಲ್ಲ ಖುಷಿ
ಎಲ್ಲವನ್ನೂ ಏಕ ಸ್ವರೂಪದಲ್ಲಿ 
ಅರ್ಥಾತ್ ನಿರ್ಭಾವುಕವಾಗಿ ವ್ಯಕ್ತಪಡಿಸುವ 
ಖಾಲಿತನದ ಅನಾವರಣ ಪ್ರತಿ ಸಲವೂ;
ಇದು ಕಲೆ ಎಂದವರಿಗೆ ಕಲೆ, ಇಲ್ಲವೆಂದವರಿಗೆ ಇಲ್ಲ 
ಕಲಾವಿದ ನಿರ್ಲಕ್ಷಕ್ಕೊಳಗಾದಷ್ಟೂ ಪ್ರಬಲನಾಗುತ್ತಿದ್ದಾನೆ... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...