Wednesday 23 December 2020

ನುಡಿಸುವವರಿರದೆ ಕೊಳಲೊಳಗೆ ಉಳಿದ ನಾದ ನಾನು

ನುಡಿಸುವವರಿರದೆ ಕೊಳಲೊಳಗೆ ಉಳಿದ ನಾದ ನಾನು

ಬಿಡಿಸಕೊಳ್ಳಲು ಬರದ ನನ್ನೊಳಗ ಬಿಗಿ ಮೌನ ನೀನು
ಬಿಡಿ ನುಡಿಗಳ ನೆಪದ ಆಸರೆ ಬೇಕೆಮಗೆ ಮಾತಾಗಲು 
ಗಡಿಬಿಡಿ ಇಲ್ಲದೆ ಸಮಯ ಜರುಗಲಿ ಚಂದ ಹಾಡಾಗಲು 

ತಾಳ ತಂಬೂರಿ. ಮೇಳ ತುತ್ತೂರಿ ಯಾವೂ ಇಲ್ಲಿಲ್ಲ  
ಉಸಿರ ಏರಿಳಿತಕ್ಕೆ ಸರಿಯಾಗಿ ಸಿಗಬಹುದೇ ರಾಗ?
ಭಾವ ಸಾಗರದಲ್ಲಿ ಅಲೆಗಳಿಗೆ ಇಂದೇಕೋ ಆಲಸ್ಯ 
ತೀರದಲಿ ಗೀಚಿದವು ದಾಖಲಾಗಲು ಒಳ್ಳೆ ಯೋಗ!

ನಗು ಒಂದು ತಂತಿ, ಅಳುವಿಗೆ ನೂರಾರು ಜೋಪಾನ 
ಯಾವುದೇ ಆದರೂ ಮಿಡಿತಕ್ಕೆ ಕೊಂಡಿಯಾಗುವುದು
ಸಭೆ ತುಂಬ ಕಿವುಡರೇ ಹಾಡೆಂತು ಕೇಳೀತು? ಹಾಡುವ 
ಹಿಂದೆಂದೋ ಸತ್ತ ನೆರಳಿಗಾದರೂ ಜೀವ ಬಂದೀತು 

ಭಿನ್ನ ಅಭಿರುಚಿಗಳು ಬೆರೆತಾಗ ಹೊಸ ರುಚಿ ಹುಟ್ಟುವುದು 
ನಾನು ನೀನು ಕೂಡಿದ ಕ್ಷಣವೂ ಕೂಡ ಹಾಗೇನೇ 
ಒಪ್ಪೊತ್ತಿಗಾದರೂ ಕೊರಳಿಂದ ಹರಿಯಲಿ ಮೆಲ್ಲುಲಿ
ಕಾಲ ಮಿತಿಯ ವಿಸ್ತರಿಸಿಕೊಳ್ಳುವೆ ಬಡಿದು ಸಾವನ್ನೇ 

ಹೊಳ್ಳೆಯನು ಮುಚ್ಚಿ ಮೆಲ್ಲ ತೆರೆಯುತ್ತಾ ಮತ್ತೆಲ್ಲೋ 
ಮತ್ತಾವುದೋ ಹೊಳ್ಳೆಯ ಕಣ್ಣಿಗೆ ಬಟ್ಟೆ ಕಟ್ಟಿ 
ಆಟವಾಡುವ ನಿನ್ನ ಬೆರಳುಗಳ ಬೆರಗಿಗೆ ಸೋತು 
ಅನುರಾಗವೆಂಬ ಹೊಸ ರಾಗಮಾಲಿಕೆ ಹೊಸೆದೆ 

ನಾ ನುಡಿದರೆ ಸಾಲದು ನೀನೂ ಮಣಿದು ಮಾತಾಗು 
ನನ್ನ ಪಯಣಕೆ ದಿಕ್ಕು ತೋರುವ ಒಲವೆಂಬ ಶೃತಿಯಾಗು 
ಗೌಣವಾಗುವೆ ನಿನ್ನ ಹೊರತಾಗಿ ಸ್ಥಾಯಿ ತಲುಪದೆಲೆ 
ಉದ್ಭವಿಸುವೆಲ್ಲ ಅದ್ಭುತಗಳ ತದ್ಭವ ನೀನಾಗು 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...