Thursday 6 October 2016

ಇಷ್ಟು ದಿನದ ಪ್ರೇಮಕ್ಕೆ

ಜೀವ ಸೋಲಬೇಕು
ಇರುವಾಗ ನೀ ಜೊತೆ
ಅನುಮಾನ ಈಗ ನನಗೆ
ನನದೇನು ಈ ಕಥೆ?
ಇನ್ನಷ್ಟು ಸೋಲಬಲ್ಲೆ
ಗೆಲುವಾಗಿ ನೀನಿರೆ
ನಿನ್ನಲ್ಲೇ ನೆಲೆಸುವಾಸೆ
ನಾ ಕೊಚ್ಚಿಹೋದರೆ
 
ಬಲಹೀನನಾದೆ ಚೂರು
ನಿನ್ನೆಲ್ಲ ನೆನಪನು
ಹೊರಲಾಗುತಿಲ್ಲ ಹೃದಯ
ನೀ ನಂಬು ನನ್ನನು
ನೆಪಗಳಿಗೆ ಸಾಲುತಿಲ್ಲ
ಪೋಷಾಕು ಈಚೆಗೆ
ಕಟ್ಟುತ್ತ ಸೊಲ್ಲ ಮಾಲೆ
ಹಗುರಾಗಬೇಕಿದೆ
 
ಆ ರೆಪ್ಪೆ ಅಂಚಿನಲ್ಲಿ
ನೀ ಕಟ್ಟಿ ಹಾಕಿದೆ
ಒಂದೊಂದೇ ಪ್ರೇಮ ಕಾವ್ಯ
ನಾ ಬಿಡಿಸಿ ಓದಿದೆ
ಓದುತ್ತ ಬರೆದೆ ಹಾಗೇ
ನಾನೊಂದು ಕವಿತೆಯ
ಆಗಿಸಲೇ ಬೇಕು ಇದಕೆ
ಆ ಕಣ್ಣ ಪರಿಚಯ
 
ದಡದಲ್ಲಿ ಬಿದ್ದ ಹೆಜ್ಜೆ
ಗುರುತನ್ನು ಬಿಟ್ಟಿತು
ನೀ ಇಡದ ಹೆಜ್ಜೆಯಲ್ಲೂ
ಗುರುತೊಂದು ಮೂಡಿತು
ನೆರಳನ್ನು ತಡೆದು ಆಗ
ಯಾರೆಂದು ಕೇಳಿದೆ
ಎಲ್ಲವೂ ಅದಲು-ಬದಲು
ಮನದಲ್ಲೇ ನಾಚಿದೆ
 
ಗುಣಗಾನಕೀಗ ಕೊಂಚ
ಕಡಿವಾಣ ಹಾಕುವೆ
ಮಧುಪಾನಕೆಂದು ಅಧರ
ಹಸಿದಂತೆ ಕಾದಿವೆ
ಮುತ್ತೆಲ್ಲದಕ್ಕೂ ಮೊದಲು
ಮತ್ತೆಲ್ಲ ನಂತರ
ಕೊನೆಗಾಣೋ ಹಂತದಲ್ಲೂ
ಮುತ್ತೇ ಸುಸ್ವರ!!
                    
                   - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...