Friday 7 October 2016

ಬದುಕಿದಷ್ಟೂ ಕವಿತೆ

ಬಾನಿಂದ ಭುವಿಗಿಳಿವ ಮಳೆ ಹನಿ
ತನ್ನ ಅಸ್ತಿತ್ವ ಕಂಡುಕೊಳ್ಳುವ ತವಕದಲ್ಲೇ
ಕಮರಿಹೋದ ಕಥೆಗೆ
ಕಣ್ಣೀರು ಉರುಳಿದ್ದು ಸಮಂಜಸವೇ!!
 
ಚಿಗುರೆಲೆಯ ಮುಗುಳಲ್ಲಿ ಚದುರಿದವುಗಳ
ಅಳಲು ಕೇಳಿಬರುವುದಾದರೆ
ವಸಂತಗಳೆಂದೂ ಆಪ್ಯಾಯಮಾನವಾಗಿರದೆ
 ಅಪ್ಪಟ ದಳ್ಳುರಿಯಂತಿರುತ್ತಿದ್ದವು
 
ಅಲೆಗಳ ಬದುಕು ಸಾರ್ಥಕವಾಗುವುದು
ತೀರಕೆ ಒಮ್ಮೆಯಾದರೂ ಅಪ್ಪಳಿಸಿದಾಗ
ಮರಳ ಕೋಟೆ ಉರುಳಿಸಿದ ಪಾಪಕ್ಕೆ
ಶಾಪ ಹೊರುವ ಕನಸೂ ಬೀಳದಿರಲಿ ಅವಕೆ
 
ಧರೆಯ ಅಷ್ಟೂ ಚಾಚಿಕೊಂಡ ನೀಲಿ
ತಾನು ಸುಳ್ಳೆಂದು ನಂಬದ ಕಣ್ಣು
ರೆಕ್ಕೆ ಬಯಸಿದ್ದು ಹಾರಾಟಕ್ಕೆ ಹೊರತು
ನಂಬುಗೆಯ ಸಮರ್ಥಿಸಿಕೊಳ್ಳಲಲ್ಲ
 
ಬೆಳಕು ಎಳೆದದ್ದೇ ಬಣ್ಣ, ಎಳೆದಷ್ಟೇ ಬಿಲ್ಲು
ಸುಳ್ಳಾದರೂ ಮಾಯೆ ಮೆಚ್ಚುಗೆಗೆ ಆಪ್ತ
ನಿಜದ ಮೊಣಚು ಹಸಿ ಗಾಯಗಳು
ಭ್ರಮೆಯ ಲೇಪನದಲ್ಲಿ ಸುಧಾರಣೆ ಕಂಡವು
 
ಹಗಲುಗಳ ಮತ್ಸರಕೆ ಇರುಳಲ್ಲಿ ಉತ್ಸವ
ಸಾಲು ದೀಪಗಳಿನ್ನು ಸೋಲುಣುವುದಿಲ್ಲ
ನಶ್ವರ ನೆರಳನ್ನು ಶಾಶ್ವತಗೊಳಿಸುವುದು
ಶಾಶ್ವತ ನೋವನ್ನು ನಶ್ವರಗೊಳಿಸುವುದು!!
 
                                           - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...