Friday 20 November 2015

ಯುದ್ಧಗಳು ನಡೆದೇಹೋದವು

ಗೋರಿಗಳು ಬಿರುಕು ಬಿಡುತ್ತಿವೆ
ಅಲ್ಲೆಲ್ಲೋ ಸಿಡಿದ ಬಾಂಬುಗಳ ಕಂಪನಕೆ,
ಕಪ್ಪು ಬಾವುಟವ ಪ್ರದರ್ಶಿಸಲು
ಇತ್ತ ಕೈಗಳನ್ನೇ ಕಳೆದುಕೊಂಡವರು
ಪ್ರಾಣ ಕಳೆದುಕೊಂಡವರ ಮಣ್ಣು ಮಾಡಲಾಗದಕ್ಕೆ
ಕಣ್ಣೀರಿಡುತ್ತಿದ್ದಾರೆ ಪಾಪ


ಮನಸು ಮನಸುಗಳು ತೇಪೆ ಹಾಕಿಕೊಳಲಿ
ಹರಿದವರು ಹರಿವವರ ಹುಟ್ಟಿಸುತ್ತಲೇ ಇರುವರು,
ಕೈ ತುತ್ತು ಅನುಕಂಪದಾಚೆ ಅನುಮಾನಕ್ಕೆಡೆಮಾಡುತ್ತಿದೆ
ಅನುಮಾನಿಸಿ ಅವಮಾನಿಸಿದವರೆಲ್ಲ ಕ್ಷೇಮ
ನಂಬಿದವರ ಕೊರಳಲ್ಲೀಗ ಮಾತು ಹೊರಡುತ್ತಿಲ್ಲ
ಮೌನಕ್ಕೂ ಜಾಗವಿಲ್ಲ


ಶವ ಪೆಟ್ಟಿಗೆ ತಯಾರಿಸುವ ಬಡಗಿಗೆ
ಬಿಡುವಿಲ್ಲದಷ್ಟು ಕೆಲಸ,
ಮನೆ ಮುಂದೆ ಸಾಲು ಸಾಲು ಗಿರಾಕಿಗಳು
ತಮಗೂ ಇರಲೆಂದು ಹೆಚ್ಚಿಗೇ ಬೇಡಿಕೆಯಿಟ್ಟಿದ್ದಾರೆ,
ಹಾಗೇ ಕೊಳೆಯಲಿಕ್ಕೆ ಇಲ್ಲಿ ಯಾರಿಗೂ ಮನಸಿಲ್ಲ
ಗುರುತಾಗಬಯಸುವವರೇ ಎಲ್ಲ


ಆಟದ ಮೈದಾನಗಳ ನಡುವೆ ಗಡಿಯಿಟ್ಟು
ಗೆರೆಯ ಎಳೆದವರಾರಿಗೂ ಆಟ ಕಿತ್ತುಕೊಂಡ
ಪ್ರಜ್ಞೆ ಕಾಡುತ್ತಲೇ ಇಲ್ಲವೆನಿಸುತ್ತೆ,
ಸಾವು ಬದುಕಿನ ಆಟಕ್ಕೆ ಸಜ್ಜಾಗಿದೆ ಮೈದಾನ
ಅತಿ ಹೆಚ್ಚು ತಲೆ ಉರುಳಿಸಿದವರೇ ಗೆದ್ದಂತೆ,
ಸೋತವರಲ್ಲಿ ಸತ್ತವರಷ್ಟೇ ಅಲ್ಲ
ಸಾವಿನ ಪರಿಚಯ ಮಾಡಿಸಿದವರೂ ಇದ್ದರು


ಯುದ್ಧವೆಂಬುದು ನಡೆದೇಹೋಗಿತ್ತು
ರಕ್ತದಲ್ಲಿ ಬರೆದುಕೊಳ್ಳಲು ನೂರು ಕೈಗಳು
ಅಕ್ಷರದ ಕೆಂಪು ಒಂದೇ
ಅದರೆ ಕಂಪು ಮಾತ್ರ ಬಿನ್ನ,
ಪುಟಗಳಿಗೆ ನಿಬಂಧನೆಗಳಿಲ್ಲ
ಯಾರೇ ಹೊರಳಿಸಿದರೂ ಹೊರಳತಕ್ಕದ್ದು
ಇತಿಹಾಸದ ಸಮೀಪ ಕರೆದೊಯ್ದು ನಿಲ್ಲಿಸುವ ಶಕ್ತಿ
ಯಾವುದೇ ಗೀಟುಗಳಿಗೆ ಸಾಧ್ಯವಾಗಲಿಲ್ಲ


                                                  - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...