Tuesday 8 March 2016

ಸ್ತ್ರೀ

ಎಲ್ಲೇ ನೋಡಲು ನಿನ್ನ ಬೆರಳ ಅಚ್ಚಿನ ಹೊರತು
ಕಾಣದಾದೆನು ಮತ್ತು ಬೇರೇನನೂ
ಬೇಕಾದ್ದ ನೀಡಿದೆ ನಿರೀಕ್ಷೆಗೂ ಮುನ್ನವೇ
ಬೇಡಲು ಉಳಿದಿಲ್ಲ ಬೇರೇನನೂ


ಎಂದೂ ಬರೆದವನಲ್ಲ ಬಿಗಿ ಹಿಡಿತವಿಲ್ಲದೆ
ಇಂದೇಕೋ ನಿನ್ನ ಕಂಡಷ್ಟೇ ಹಿತ
ನಿನ್ನ ಕರೆಗೆ ಸಿಗುವ ಎಲ್ಲ ಅಕ್ಷರಕೂ
ಹೊಸ ರೂಪ ಸಿಕ್ಕಷ್ಟೇ ಖುಷಿಯಾಯಿತಾ?!!

 
ಎಚ್ಚರ ತಪ್ಪದ ಕನಸುಗಳ ಕಾವಲಿಗೆ
ಬೆಚ್ಚನೆಯ ಅಪ್ಪುಗೆಯ ಕೌದಿಯಂತೆ
ಕಂದೀಲಿನ ಉರಿಗೆ ಕಂಡಷ್ಟು ದೂರಕೆ
ಬರಮಾಡಿಕೊಳ್ಳುವ ಹಾದಿಯಂತೆ


ನೀ ಇರಲು "ನಾ" ಇರದು
ನಾವೆಂಬ ಆತ್ಮ ಸಂತೃಪ್ತ ಭಾವ
ಹಂಚಿಕೊಂಡರೆ ಎಲ್ಲ ಮಿಂಚಿ ಹೋಗುವುದಲ್ಲ
ಸಂಕಟದ ಆಚೆ ಹಗುರಾಗಿ ಜೀವ


ಹೆಣ್ಣೇ ನೀ ಬಣ್ಣಗಳ ರಾಯಭಾರಿ
ಕಣ್ಣಲೇ ಅರಳುವ ಕುಸುಮ ನಾರಿ
ಮನ್ನಣಿ ಸಿಕ್ಕೆಡೆ ಹೊನ್ನ ಗೌರಿ
ತಪ್ಪನು ಖಂಡಿಸೋ ರೌದ್ರ ಮಾರಿ


ಜನನಿ, ಗೆಳತಿ, ಜಾಯೆ, ಭಗಿನಿ
ಸಕಲಕೂ ನೀವೇ ಬೆಳಕು-ರಜನಿ!!

                     - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...