Friday 17 October 2014

ಕೆಂಡ ಹಾಗು ಕಣ್ಣೆವೆ



ಕಣ್ಣೊಳಗೆ ಬಿದ್ದ ರೆಪ್ಪೆಗೂದಲು ನೀನು
ಅನವರತ ಉರಿಯಲ್ಲಿ ಕೊರಗಲೇನು?
ಅಥವ ತೊರೆದು ಮರುಗಿ ಮರೆಯಲೇನು?
ನೀ ಅಂದು ಅಂದಿದ್ದೆ,
ನಾ ನಿನ್ನ ಪಾಲಿಗೆ ಸೆರಗಂಚಿನ ಕೆಂಡದಂತೆ ಎಂದು;
ಹೌದು, ಕೆಂಡವಾಗಿ ಕರಕಲಾಗಿದ್ದೇನೆ
ವಿರಹಾಗ್ನಿ ಒಳಗೊಳಗೇ ಸುಟ್ಟು,
ಆದರೂ ಹೊರಗಿನ ಶೀಥಲ ಸಮರ
ನಿನ್ನ ಸುಡದಿರಲೆಂದು ನಾ ಹೂಡಿದ ನಾಟಕ!!
ಕಣ್ಣ ತೀಡುತ್ತಿದ್ದಂತೆ
ಎವೆ ಹೊರಲಾಡುತ್ತಿದೆ
ನೀ ಆವರಿಸಿಕೊಂಡ ಅಷ್ಟೂ ವ್ಯಾಪ್ತಿಯಲ್ಲಿ;
ಕೆಂಗಣ್ಣು ಕೋಪಕ್ಕಲ್ಲ, ನಿನ್ನ ಸಂತಾಪಕ್ಕೆ
ನಾಲಗೆ ಅಂಚಿನಿಂದ ಹೊರ ತೆಗೆಯುವೆಯೋ ಎಂದು!!
ಸೆರಗಂಚಿಗೆ ಇನ್ನೂ ಬಿಗಿದುಕೊಂಡಿರುವೆಯಾ ನನ್ನ?
ನಾ ಸುಡುವುದಕ್ಕೂ ಮುನ್ನ ಕಿತ್ತೆಸೆ,
ನಾ ಬೂದಿ ಮುಚ್ಚಿದ ಕೆಂಡದಂತೆ;
ನಾಟಕ ನನ್ನ ಸ್ಥಿಮಿತ ತಪ್ಪಿ ಬಯಲಾದರೆ
ನಿನ್ನ ಸುಟ್ಟ ಗಾಯಗಳ ಬೊಬ್ಬೆಯಲ್ಲಿ
ನೀರು ತುಂಬಿಕೊಂಡಂತೆ ಉಳಿದು
ಒಡೆದಾಗ ಸಂಕೋಚದಲ್ಲೇ ಹೊರಹರಿಯುತ್ತೇನೆ,
ಅದ ನೆನೆದಷ್ಟೂ ಕಠೋರಮಯ!!
ಬೇಡ,
ನೀ ನನ್ನ ಕಣ್ಣೀರಿಗೆ ಬೆಲೆ ತೆರುವುದು
ನಾ ನಿನ್ನ ಸುಟ್ಟು ಧೂಪವಾಗಿಸುವುದು
ಎರಡೂ ಸಲ್ಲ;
ಕಣ್ಣಾಚೆ ನೀ ಉಳಿ
ನಿನ್ನಿಂದ ದೂರ ನಾ ಉಳಿಯುತ್ತೇನೆ;
ಕ್ಷೇಮೋಪಚಾರಕ್ಕೆ ಅಪರೂಪಕ್ಕೆ ಸಿಗುವ,
ಕ್ಷಣಿಕ ಸುಖವೇ ಮನಮೋಹಕ!!
                                          -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...