Friday 17 October 2014

ಹೂವಿಗೆ ಸಾವಿಲ್ಲ

ಹೂಗಳು ಮಸಣ ಸೇರುವ ಮುನ್ನ
ಸತ್ತೇ ಇರಬೇಕೆಂದು ಕಟ್ಟಪ್ಪಣೆ ಮಾಡಿದರೆ
ಸತ್ತ ಹೂಗಳಿಗೆ ಬೇಡಿಕೆ ಹೆಚ್ಚುತ್ತದಲ್ಲ?
ಹಾಗಾದರೆ, ಅವು ಸತ್ತಿವೆಯೋ
ಅಥವ ಬದುಕಿವೆಯೋ ಎಂದು ತಿಳಿಗೊಳ್ಳುವುದು ಹೇಗೆ?
ಲೆಕ್ಕಾಚಾರ ತಪ್ಪಿಬಿಟ್ಟರೆ!!
ಹೆಣಕ್ಕೆ ಹೆಣವನ್ನೇ ಜೊತೆಯಾಗಿಸಿದರೆ
ಸ್ವರ್ಗದಲ್ಲೋ, ನರಕದಲ್ಲೋ ಸಹಾಯಕ್ಕೆ ಬರುತ್ತದೆ
ಎಂದು ಯಾರೋ ಕಾವಿ ತೊಟ್ಟ ಪುಣ್ಯಾತ್ಮ ಹೇಳಿ
ಹೂವಿನ ಜೀವಂತಿಕೆಯ ಪರೀಕ್ಷಿಸುವ ಮಾರ್ಗವನ್ನ
ನಾಳಿನ ಸಂಚಿಕೆಯಲ್ಲಿ ತಿಳಿಸುವುದಾಗಿ ಹೇಳಿ
ಇಂದಿನ ಸಂಚಿಕೆ ಮುಗಿಸುತ್ತಾನೆ;
ಹಾಗಾದರೆ ಇಂದು ಸತ್ತವರ ಗತಿ?!!
ಮನುಷ್ಯನ ಕಣ್ಣಿಗೆ ಬಿದ್ದಲ್ಲೇ
ಹೂವು ವಿಲಿ-ವಿಲಿ ಒದ್ದಾಡಿ ಸಾಯುವುದು;
ಹೆಣ ಏನನ್ನೂ ಮಾಡಲೊಲ್ಲದೆಂದು
ಮತ್ತೆ ಜೀವ ಮರಳಿದರೆ
ಕಂದಾಚಾರಕ್ಕೆ ಅಪಚಾರವಾದಂತಲ್ಲವೇ?!!
"ಸತ್ತವರಿಗೆ ಸತ್ತವನ್ನೇ ಏಕೆ ಜೊತೆಯಾಗಿಸೋದು?
ಬದುಕುದ್ದವನ್ನೇ ಏಕೆ ಪರಿಗಣಿಸಬಾರದು?"
ಹೀಗೆ ಆಲೋಚನೆಗಳು ಸುಳಿದಾಡುತ್ತಿದ್ದಂತೆ
ಎಲ್ಲವೂ ಎರಡೆರಡು ಬಾರಿ ಸಾಯುತ್ತವೆ!!
ಕಟ್ಟಿ, ಪೋಣಿಸಿದ ಹಾರದಲ್ಲಿ
ದಾರಕ್ಕೆ ಕತ್ತು ಕೊಟ್ಟು ನೇಣಿಗೆ ಶರಣಾದ
ಎಷ್ಟೋ ಹೂಗಳ ಮರು ಜನ್ಮದ ಕುರಿತು
ಯಾವ ಸುದ್ದಿ ವಾಹಿನಿಯೂ ಸ್ಪೆಷಲ್ ಪ್ರೋಗ್ರಾಮ್ ಮಾಡಿಲ್ಲ!!
ದಿಕ್ಕಾರವಿರಲಿ ಮಾನವ ಜಾತಿಗೆ!!
ಮಸಣದ ದಾರಿಯುದ್ದಕ್ಕೂ ಚೆಲ್ಲಾಡಿದ ಹೂವು
ಹಿಂದೆ ಹರಿದು ಬಂದ ಚಕ್ರಗಳಡಿ ಸಿಲುಕಿ
ಬೀದಿ ಹೆಣವಾದದ್ದು
ಸಾಗಿ ಹೊರಟ ಶರೀರಕ್ಕೆ ಶಾಪದಂತೆ;
ಚಿತೆಯಲ್ಲಿ ಬುರುಡೆ ಒಡೆಯದೆ ಉಳಿವುದಂತೆ;
ನಾಯಿಗಳ ಆಹಾರಕ್ಕೆ ಸಿಕ್ಕು!!
ಚಿತೆಗೆ ಕಡ್ಡಿ ಹಾಕಿ ಅಲುಗಾಡಿಸದೆ
ಪಾಪದ ಮೂಟೆ ಬೇಯುವುದು ಕಷ್ಟ ಸಾಧ್ಯ
ಹೆಣ ಕಾಯುವವನು ಕಂಠ ಪೂರ್ತಿ ಕುಡಿದಿದ್ದಾನೆ
ಅವನ ಮೂಗಿಗೆ ಮಾಂಸದ ಘಮಲು ಬಿದ್ದರೆ
ಕೆಂಡದ ಸಮೇತ ನುಂಗಿಬಿಡುತ್ತಾನೆ;
ಅಲ್ಲೇ ಆ ಹೂಗಳು ಕೆಲಸಕ್ಕೆ ಬರುತ್ತವೆ;
ಹಸಿದ ಹೊಟ್ಟೆಗೆ ಮಲ್ಲಿಗೆ ಕಂಪು
ಯಾವ ಪುರುಷಾರ್ಥಕ್ಕೆ?
ಇತ್ತ ಹೆಣ ಕಾಯುವವನ ಗಮನ ಮತ್ತೆಲ್ಲೋ ಬರಸೆಳೆದರೆ
ಅತ್ತ ಹೆಣಕ್ಕೆ ಮುಕ್ತಿ ಸಿಕ್ಕಂತೆ;
ನೆನಪಿರಲಿ, ಕಡ್ಡಿ ಆಡಿಸುವುದಂತೂ ನಿಲ್ಲಬಾರದು!!
ಹೂವು ಕಣ್ಣಿಗೆ ಕಂಡಷ್ಟೂ ಹೊತ್ತು
ಅದು ಬದುಕಿದ್ದಂತೆಯೇ ಎಂದು ನಂಬಿದವ ನಾನು;
ಪುಸ್ತಕದ ಹಾಳೆ ನಡುವೆಯ ರೋಜ
ಈಗಲೂ ತಾಜಾ ನೆನಪುಗಳನ್ನ ಮೂಡಿಸುತ್ತದೆ;
ಹೂವಿಗೆ ಸಾವಿಲ್ಲ
ಮನುಷ್ಯ ಸಾಯಿಸುತ್ತಾನಷ್ಟೇ!!
                                                   -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...