Friday 17 October 2014

ವ್ಯರ್ಥ ಸಂಜೆಗಳು

ಈ ಮಳೆ ಬೀಳುವ ಸಂಜೆಗಳು
ಎಲ್ಲಾದರೂ ಕೂತು
ಮುಗಿಯದ ಕವಿತೆ ಬರೆದುಕೊಳ್ಳಬಾರದೇ?!!
ಉರುಳಿ ಬಿದ್ದು ಸಾಯುವ ಹನಿಗಳ
ಪರಿಗಣಿಸದೆ ಬೇರೆ ವಿಧಿಯಿಲ್ಲ;
ರೊಚ್ಚು ಸಿಡಿದ ಪಾದ ರಕ್ಷೆಗಳ
ಹುಲ್ಲು ಹಾಸಿಗೆಗೆ ತಡವಿಕೊಂಡಾಗ
ಮೂಡಿತಲ್ಲೊಂದು ವರ್ಥ ಕವಿತೆ!!
ಹಿಡಿದ ಛತ್ರಿಯ ಕೆಳಗೆ
ಮುಚ್ಚಿಹೋದ ಕಿವಿಯಲ್ಲಿ ಗುನುಗುವ
ಹನಿಗಳ ನಿನಾದ;
ಕೇಳಿಯೂ ಕೇಳದಂತೆ ನಟಿಸುತ್ತ
ಕೈ ಗಡಿಯಾರ ನೋಡಿಕೊಂಡರೆ
ಸಮಯ ನಿಂತಲ್ಲೇ ನಿಂತದ್ದಲ್ಲದೆ
ಕಣ್ಣು ಮಿಟುಕಿಸಿದಾಗಲಷ್ಟೇ ಮುಂದೆ ಸರಿದು
ನನ್ನ ಸ್ಥಾವರವಾಗಿಸಿತ್ತು;
ಅಲ್ಲಿಗಾಗಲೇ ಛತ್ರಿ ಹಾರಿಹೋಗಿ
ಹಾಡು ಮತ್ತಷ್ಟು ಇಂಪಿನೊಂದಿಗೆ ನನ್ನ ನಡುಗಿಸುತ್ತಿತ್ತು!!
ಈಗ ಮಳೆಬಿಲ್ಲು ಮೂಡಿ
ನನ್ನ ಮನಸನ್ನ ಹಗುರಾಗಿಸಲಾದೀತೇ?
ನೆನಪುಗಳಿಗೆ ಬಣ್ಣ ಬಳಿದು
ಭರಣಿ ಖಾಲಿಯಾಗಿಸಿಕೊಂಡು
ಪೆಚ್ಚು ಮೋರೆಯಲ್ಲಿ ಹಿಂದಿರುಗುತ್ತಲೇ
ಕಣ್ಣು ಹೋಡೆಯಬಹುದೇ?
ಎಲಾ ಪೋಲಿ ಮಳೆಬಿಲ್ಲೇ!!
ಎಲ್ಲವೂ ಇದ್ದು ಏಕಾಂತವೇಕೆ?
ಏಕಾಂತವಿದ್ದು ಎಲ್ಲವೂ ಏಕೆ?
ಸಂಜೆಯ ಸಂಜೀವಿನಿ ಈ ಏಕಾಂತ,
ಬೆರಳಂಚಿಗೆ ಶಾಯಿಯೇ ನಿಜ ಸಂಗಾತ;
ಕವಿತೆ ಮೂಡುವುದೂ, ಮತ್ತೆ ಬಾಡುವುದೂ
ಕವಿತೆಯಾಗಿ ಮೂಡುವುದು!!
                                           -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...