Friday 17 October 2014

ಖಾಲಿ ಪತ್ರದ ತಿರುಳು

ಪತ್ರದಲ್ಲಿ ಏನೂ ಉಳಿದಿಲ್ಲವೆಂದು
ಹರಿದು ಬಿಸಾಡುವ ಮುನ್ನ
ಬರೆಯಲಾಗದ ಅಸಹಾಯಕತೆಯ
ಹೊರಳಿ ನೋಡಿದರೆ ಅರಿಯುವೆ
ನನ್ನ ತುಮುಲಗಳ ಆಳವ!!
ಉರಿದು ಅದೆಷ್ಟೋ ಮೇಣಗಳು
ಕರಗಿ ಹೋಗುತ್ತಿದ್ದರೂ
ತಲೆಗೆ ಬಿಡಿ ಅಕ್ಷರ ನೆಡುವಷ್ಟು
ಸೌಜನ್ಯತೆ ಮೆರೆಯದೆ
ಮೇಣದಿಂದ ಮೇಣಕ್ಕೆ ಸ್ಥಳಾಂತರಗೊಂಡ
ಬೆಳಕಿನ ಬಿಟ್ಟಿ ಸಲಹೆಗಳು ಬೇಡವಾಗಿದ್ದವು!!
ಹಸ್ತ ಬೆವರಿದ್ದೂ ಆಯ್ತು
ಇಟ್ಟ ಚುಕ್ಕಿ ಚದುರಿದ್ದೂ ಆಯ್ತು
ಹಿಂಬಾಲಿಕೆಯ ಪದಗಳು
ತಮ್ತಮ್ಮ ಕಾಲ್ತುಳಿತಕ್ಕೆ ತಾವೇ ಬಲಿಯಾಗಿ
ಸಂಸ್ಕಾರ ಮಾಡಿದ್ದೂ ಆಯ್ತು;
ಇನ್ನೂ ಅಚ್ಚಾಗಲಿಲ್ಲ ಭಾವನೆಗಳು!!
ನಿನ್ನೆದುರು ತೊದಲುವ ನಾಲಗೆ,
ನಿನ್ನ ವಿನಹ ತೊದಲುವ ಬೆರಳು;
ನೀನು ವರವೋ, ಶಾಪವೋ ಎಂಬ ಗೊಂದಲ,
ಆದರೂ ನೀನೇ ಬೇಕೆಂಬ ಹಂಬಲ;
ಬದುಕಿನ ಪರೀಕ್ಷೆಗಳಲ್ಲಿ
ಅತಿ ಕಷ್ಟಕರ ಪ್ರಶ್ನೆ ಪತ್ರಿಕೆ ನೀನು;
ಇದ್ದಷ್ಟೂ ಧೈರ್ಯವ ಒಗ್ಗೂಡಿಸಿ
ಪತ್ರವ ತಲುಪಿಸಿದ ನನ್ನ ಸಾಹಸಕ್ಕೆ
ಒಳೆಗೆ ಬಿಟ್ಟ ಖಾಲಿತನದ ಸುಳುವಿಲ್ಲ;
ಹೇಳಬೇಕಾದವುಗಳ ಬಿಚ್ಚಿಡಲಾಗಲಿಲ್ಲ
ಆದರೆ
ಏನೋ ಹೇಳ ಹೊರಟು
ಹೇಳಲಾಗುತ್ತಿಲ್ಲವೆಂಬುದ ನೀ ಗಮನಿಸಿದ್ದೇ ಆದರೆ
ಭಯದ ಕಕ್ಷೆ ದಾಟಿ
ನಿವೇದನೆಯತ್ತ ನಾ ಹೆಜ್ಜೆಯಿಟ್ಟಂತೆ;
ಒಲವಾಗಿಸಲಿನ್ನು ಮೂರೇ ಗೇಣು!!
                                          -- ರತ್ನಸುತ

1 comment:

  1. ಪತ್ರಾಂತರಂಗವನ್ನು ಆಕೆ ಇನ್ನೂ ಆಳವಾಗಿ ಅರಿಯಬೇಕಿತ್ತು ಅಲ್ಲವೇ?

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...