Sunday 17 August 2014

ನಾವು ನಮ್ಮವರು

ಊರುಗೋಲ ಸವೆದ ಹಿಡಿಯ
ನೂರು ಕೋಟಿ ರೇಖೆಗಳನು
ಎಣಿಸಲಾಗದವರು ನಿನ್ನ
ಆಡಿಕೊಂಡು ನಕ್ಕರು;
ನಿನ್ನ ಮೌಲ್ಯಗಳನು ಸುಟ್ಟ
ಭಸ್ಮವೆಂದು ಸಾರಿದವರು
ನಿನ್ನ ಮೌನದೊಳಗೆ ನೂರು
ಅಂಧ ಅರ್ಥ ಕಂಡರು!!

ಉಪ್ಪು ತಿಂದು ಕೊಬ್ಬಿದವರು
ಸೊಕ್ಕು ಮಾತನಾಡುವವರು
ಹಿಂದೆ ಹೊರಳಿ ಮುಗಿದ ಗತವ
ಮರೆತು ತೇಗುತಿರುವರು;
ಸ್ವಂತ ಚಿತ್ತವಿಲ್ಲದವರು
ಅಂತೆ-ಕಂತೆ ಓದಿಕೊಂಡು
ನೀನು ನಕ್ಕು ಹೋದಲೆಲ್ಲ
ಕ್ಯಾತೆ ತೆಗೆಯುತಿರುವರು!!

ಕಪ್ಪು ಚುಕ್ಕೆ ಅಂಟಿದಲ್ಲಿ
ಬೆಟ್ಟು ಮಾಡಿ ಕೂತ ಮಂದಿ
ಕೆನ್ನೆಗಂಟಿದಂಥ ಮಸಿಯ
ಮರೆಸುವಷ್ಟು ಮುಗ್ಧರು;
ಶಸ್ತ್ರ ಹಿಡಿದು ರೊಚ್ಚಿಗೆದ್ದ
ಕುದಿ ರಕ್ತ ಹರಿವಿನವರು
ಶಾಂತಿ ಮಂತ್ರದಲ್ಲಿ ಹುಳುಕು
ಹುಡುಕುವಂಥ ಮೂಢರು!!

"ನಾನು" ಎಂಬುದೊಂದೇ ತುಮ್ಮ
ಅಂತರಾತ್ಮದಲ್ಲಿ ನೆಟ್ಟು
ತ್ಯಾಗ ದೂರ ಬೆಟ್ಟ ಮಡಿಲ
ನೀರ ಪಯಣವೆಂದರು;
ತೊಟ್ಟು ರಕ್ತ ಹರಿಸದಂತೆ
ಹೆಜ್ಜೆ ಗುರುತು ಇರಿಸದಂತೆ
ಬೀದಿಗೊಂದು ನಾಮ ಫಲಕ
ತಮ್ಮ ಹೆಸರ ಕೊರೆದರು!!

ಮೂರು ಹೊತ್ತು ತಪ್ಪದಂತೆ
ಹೊಟ್ಟೆ ಪಾಡು ನೀಗಿಸುತ್ತ
ಹಸಿವ ಕುರಿತು ಕಂತು-ಕಂತು
ಭಾಷಣಗಳ ಬಿಗಿದರು;
ಮನೆಯ ಗೋಡೆ ಭದ್ರಗೊಳಿಸಿ
ಬಿರಿದ ಮನವ ಛಿದ್ರಗೊಳಿಸಿ
ಬುಡಕೆ ಬೆಂಕಿ ತಗುಲಿದಾಗ
ಲೋಕ ಚಿಂತೆ ಮರೆತರು!!

ಅಡಿಗೆ ಒಂದು ಹೆಸರು ಇಟ್ಟು
ಪಯಣಕೊಂದು ಕೊಂಕು ಕಟ್ಟಿ
ಡೊಂಕು ದಾರಿ ಮೀರಿ ತಾವೇ
ಟಂಕಸಾಲೆ ತೆರೆದರು;
ಗಂಟೆಗೊಂದು ನೇಮ ಮಾಡಿ
ತಾವೇ ಮುರಿವ ತ್ರಾಸಿಗೆರಗಿ
ನಿಷ್ಟರನ್ನು ಭ್ರಷ್ಟರೆಂದು
ಹಣೆ ಪಟ್ಟಿ ಬರೆದರು!!

--ರತ್ನಸುತ

1 comment:

  1. ಇಂದಿನ ಆಷ್ಟೂ ವೈರುದ್ಧ್ಯಗಳಿಗೆ ಅಸಲೀ ವಾರಸುದಾರರು ನಾವೇ ಎಂಬುದನ್ನು ಸಮರ್ಥವಾಗಿ ಬಿಂಬಿಸಿದ್ದೀರಿ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...