Sunday 17 August 2014

ಕಾವ್ಯ ಖಜಾನೆ

ಹೆಜ್ಜೆ ಗುರುತುಗಳ ಚೆಲ್ಲುತ್ತ
ಹಿತ್ತಲ ಬಾಗಿಲ ಮುಖೇನ 
ಓಡುವಾಗ ಚೆಲುವೆ
ಬಾಗಿಲ ಮರೆಯ ಚಿಲಕಕ್ಕೆ
ನಿಷ್ಕ್ರಿಯಾತ್ಮಕ ಶಾಪ
ನಿಷ್ಪ್ರಯೋಜಕ ಕೋಪ!!

ರಂಗೋಲಿ ಪುಡಿಯ ಡಬ್ಬದಲಿ
ಸಾವಿರಾರು ಸ್ವಪ್ನಗಳ ಕೂಪ;
ಒಂದೊಂದೇ ಚಿಟಿಕೆಯ ಚುಕ್ಕಿ
ಬಿಡಿಸುತ್ತಾ ಹೊರಟು
ಹಡೆದು ಬಿಡು ಎಲ್ಲವ;
ರಂಗವಲ್ಲಿಯ ನಡು ದೀಪ ನಾನಾಗುವೆ!!

ಇರುಳಾಟದಲ್ಲಿ ಚಂದಿರ ನಿಸ್ಸೀಮ,
ನವಗ್ರಹಗಳ ಸುತ್ತುವರೆದು
ಚಂದ್ರನಿಗಷ್ಟೇ ವಿಷೇಶ ಪೂಜೆ ಸಲ್ಲಿಸಿ ಬರುವೆ;
ಗ್ರಹಚಾರ ಕೆಟ್ಟರೂ ಸರಿಯೇ
ಇನ್ನಾರಿಗೂ ಕೈ ಮುಗಿಯಲೊಲ್ಲೆ
ಆದದ್ದಾಗಲಿ ಚಿಂತೆಯಿಲ್ಲ!!

ಹರಿದ ಕುಪ್ಪಸಕೆ ಇನ್ನೆಷ್ಟು ಪೋಷಣೆ?!!
ಕುತ್ತಿಗೆ ಹಿಡಿದು ಹೊಸತಿಗೆ ಆಗ್ರಹಿಸು;
ಸೂಜಿಗೆ ದಾರವ ಹೊಸೆಯಲು
ಕನ್ನಡಕದ ಮೊರೆಯೇಕೆ?
ಕಣ್ಣಲ್ಲಿ ಕಣ್ಣಿಟ್ಟು ನೋಡು
ಹೊಸೆವಾಟ ಇನ್ನಷ್ಟು ಸಲೀಸು!!

ತೆಕ್ಕೆಯ ತಿಕ್ಕಲಾಟಕ್ಕೆ
ತೆರೆ ಎಳೆಯದೆ ಎಲ್ಲಿಯ ನಿರಾಳ?
ಮುಹೂರ್ತ ನಿಗದಿಯಾಗುವ ಮುನ್ನ
ಒಮ್ಮೆ ದಾರಿ ತಪ್ಪಿ ಬರುವ;
ಯಾರೂ ಊಹಿಸಿರಲಾಗದ
ಕ್ಷಿತಿಜದಾಚೆಯ ಹೂ ಬನದಲ್ಲಿ!!

ಕಣ್ಣು ಮುಚ್ಚಿದರೆ
ದೀಪದ ಹಂಗು ತೊರೆದಂತೆ,
ಉಸಿರ ದೋಚಿದರೆ
ಉರಿ ಬೆವರಲ್ಲೂ ತಂಪು ಕಾವ್ಯ ಬರೆದಂತೆ;
ಸಂಪುಟಕೆ ಮುಂಪುಟದ
ಮುನ್ನುಡಿಗೆ ಮುಂಬರುವ
ಸಾಲುಗಳ ಅಚ್ಚಾಗಬೇಕಿದೆ
ಮುದ್ರಣಾಲಯದ ಮುಖ್ಯ ದ್ವಾರದಲಿ
ಸಿಗಬೇಕು ನಾವ್ ಬೇಗ
ನಾ ಕೀಲಿ, ನೀ ಬೀಗ!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...