Tuesday 16 September 2014

ನಾನು ನಾನಾಗಿ

ಬೆವರ ಹಿಡಿದು ಗೀಚಿಕೊಂಡೆ,
ಗೆರೆ ಇದ್ದಲ್ಲೇ ಹಿಂಗಿ ಹೋಯಿತು;
ಕವಿತೆ ಎಲ್ಲಿ? ಎಂದು ಕೇಳಿದವರು
ಮೂಗು ಮುಚ್ಚಿಕೊಂಡಾಗ
ಓದಿಸಿಕೊಳ್ಳಲು ಅಸಮರ್ಥವಾಯಿತೆಂದು
ಬೇಸರದಲ್ಲಿ ಮತ್ತೆ ನಾನೇ ಓದಲು ಮುಂದಾದೆ;
ನನ್ನ ಕಂಪು ನನ್ನನ್ನೇ ಛೇಡಿಸುವಂತೆ
ಅಕ್ಷರಗಳ ಮರೆಸಿಟ್ಟಿತು!!

ನೀರ ಮೇಲೆ ಬರೆದೆ;
ಯಾವ ಹರಿವಿನ ಹಂಗೂ ಇಲ್ಲದ
ಸ್ತಬ್ಧ, ತಟಸ್ಥ ಭಾವವ ತೊರೆದು
ತರಂಗಗಳ ಮೇಲೆ ತೇಲಿ
ಆ ದಡ, ಈ ದಡ ಮುಟ್ಟುಗೋಲು ಹಾಕಿ
ಅಲೆಮಾರಿಗಳಂತಾದ ತುಂಡಕ್ಷರಗಳು
ಕೊನೆಗೆ ನನ್ನ ಕಾಲನ್ನೇ ಮುಟ್ಟಿದಾಗ
ಕುಸಿದು ಬಿದ್ದೆ!!

ಯಾರೋ ಸೂಚಿಸಿದಂತೆ
ಕಣ್ಣೀರ ಬಸಿದೂ ಬರೆದದ್ದಾಯ್ತು;
ಪದ್ಮ ಪತ್ರೆಯ ರೀತಿ
ಹಾಳೆ ಅಂಟಲುಗೊಡದೆ
ತಾನೂ ಕಣ್ಣೀರಿಟ್ಟಂತೆ
ಎಲ್ಲವನ್ನೂ ಕೈ ಚೆಲ್ಲಿ ನಿಂತಿತು;
ಓದುಗರ ಎದುರುನೋಟಕ್ಕೂ
ಎಳ್ಳು-ನೀರೆರೆದು!!

ಗುರುತು ಉಳಿಯಬೇಕಾದರೆ
ನೆತ್ತರೇ ಸರಿ ಶಾಯಿಯೆಂದುಕೊಂಡೆ,
ಎಗ್ಗಿಲ್ಲದೆ ಹರಿಸುತ್ತಿದ್ದ ಕಸಾಯಿಗಳ ಮೊರೆ ಹೋದೆ;
ಹೆಗ್ಗುರುತಾಗಿ ಎದ್ದೆದ್ದು ಕುಣಿಯುತ್ತಿದ್ದ ಸಾಲುಗಳು
ಒಮ್ಮೊಮ್ಮೆ ನನ್ನನ್ನೇ ಬೆಚ್ಚಿ ಬೀಳಿಸುತ್ತಿದ್ದವು;
ಮಸಿ ಮೆತ್ತಿದ ಕೈ ತೊಳೆದು
ಎಲ್ಲವನ್ನೂ ಬಿಟ್ಟು ದೂರ ಸಾಗಿ ಬಂದೆ!!

ಅಂದು ನಾ ಓದಿಸಬೇಕಿದ್ದವರಿಗೆ
ಓದಿಸಲಾಗದೆ ಕುಗ್ಗಿ ಹೋಗುತ್ತಿದ್ದೆ,
ಇಂದು ಎಲ್ಲವನ್ನೂ ಓದುವಂತವರಾಗಿದ್ದಾರೆ
ಆದರೆ ನಾ ಇನ್ನೂ ಏನನ್ನೂ ಬರೆದವನಲ್ಲ;
ಹಾಗಾದರೆ ಅವರು ಓದುತ್ತಿರುವುದು ನನ್ನನ್ನೇ?
ಇದ್ದರೂ ಇರಬಹುದು, ಯಾಕಂದರೆ
ಈಗ ನಾನು ನಾನಾಗಿದ್ದೇನೆ!!

                                     -- ರತ್ನಸುತ

1 comment:

  1. ನಿಜ ಕವಿತೆಯು ಅಸಲಿ ಕವಿಯನು ತೋರುವ ಕೈಗನ್ನಡಿ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...