Sunday 17 August 2014

ತಿರಂಗಾ ತರಂಗ

ಬಿಳಿ ಸೀರೆಗೆ ಮುಳ್ಳು ತಾಕಿ
ಹರಿದಾಗಿನ ಸದ್ದ
ಯಾರೋ ಕದ್ದು ಕೊಂಡೋಗಿರಬೇಕು;
ಉಟ್ಟವಳಿಗೆ ಕೇಳಿಸಲೇ ಇಲ್ಲ!!

ಸ್ವತಂತ್ರ ದಿವಸಕ್ಕೆ
ಎಲ್ಲರಿಂದಲೂ ಸಂಭ್ರಮಾಚರಣೆ;
ಒಬ್ಬೊಬ್ಬರಾಗಿ ಹರಿದ ಸೀರೆಯ ಕಂಡು
ಗೊಳ್ಳೆಂದು ನಕ್ಕು ಸುಮ್ಮನಾಗುತ್ತಾರೆ,
ದೇಶ ಪ್ರೇಮದ ನೆನಪಾಗಿ;

ಹೀಗೇ ಆ ಸಂತೆ ಬೀದಿಯ ತುಂಬ
ಹರಿವಿನಾಚೆ ಕಂಡ
ಆರಿಂಚು ತೊಗಲನ್ನ್ನ
ಕಣ್ತುಂಬಿಸಿಕೊಂಡ ಸೋದರರು
ತಮ್ಮದೇ ಧಾಟಿಯ
ಊಹಾ ಸಾಮ್ರಾಜ್ಯದಲ್ಲಿ
ಅಟ್ಟಹಾಸ ಮೆರೆದು ವಾಪಸ್ಸಾಗುತ್ತಾರೆ!!

ಅತ್ತ, ಆ ಹೆಂಗಸು
ಸಂತೆಯೆಲ್ಲ ಸುತ್ತಿ
ಏನೋ ಕಳೆದವಳಂತೆ ಪರದಾಡುತ್ತ
ಮುಂದಿಟ್ಟ ಹೆಜ್ಜೆಯ ಹಿಂದೆಕ್ಕೆ,
ಹಿಂದಿಟ್ಟ ಹೆಜ್ಜೆಯ ಮುಂದಕ್ಕಿರಿಸುತ್ತ
ಇದ್ದಲ್ಲೇ ಬೆಂದುಹೋಗುತ್ತಾಳೆ;

ಯಾರೋ ಹಸಿರು ಸೀರೆಯುಟ್ಟ
ಛಲವಾದಿ ಹೆಂಗಸು
ಕೈ ಬೀಸುತ್ತ ಧಾವಿಸುತ್ತಾಳೆ;
ಹರಿದ ಭಾಗಕೆ ತನ್ನ
ಸೆರಗ ತುಂಡನು ಸೇರಿಸಿ
ತೇಪೆ ಹಾಕುತ್ತಾಳೆ!!

ತಂಪು ಗಾಳಿಯ
ಸಂಜೆ ಬಾನಿಗೆ
ಗಂಟು ಕಳಚಿದ ಸೀರೆ ಅಂಚು
ಹೊಂಬೆಳಕ ಸೋಸುವ
ತರಂಗದ ಮಡಿಲಾಗಿ
ಕೇಸರಿಯ ಹೊಸೆದುಕೊಳ್ಳುತ್ತದೆ!!

ನೆರೆದವರೆಲ್ಲ ತಿರಂಗಾ ಪ್ರತಿಮೆಯಲಿ
ತಾಯಿಯ ಪ್ರತಿರೂಪ ಕಂಡು
ಕೈಯ್ಯೆತ್ತಿ ನಮಸ್ಕರಿಸುತ್ತಾರೆ;
ಭಾರತಾಂಬೆ ನಗುತ್ತಾಳೆ
ನಿಜ ಸ್ವಾತಂತ್ರ್ಯದ ಆಚರಣೆಯಿಂದ!!

-- ರತ್ನಸುತ

1 comment:

  1. ’ಗಂಟು ಕಳಚಿದ ಸೀರೆ ಅಂಚು
    ಹೊಂಬೆಳಕ ಸೋಸುವ
    ತರಂಗದ ಮಡಿಲಾಗಿ’ ಬರುವ ಪ್ರತಿಮೆ ಮತ್ತು ಅದರ ಅನಾವರ್ಣವು ಮಾರ್ಮಿಕವಾಗಿದೆ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...