Saturday 22 March 2014

ಬಾ!!

ಬೆವರಿನ ಉಪ್ಪಿಗೆ 
ಮುಪ್ಪಿನ ಅರಿವು 
ಬರಿಸುವ ಮುನ್ನ
ಹರಿಸುವ ಬಾ

ತೆಕ್ಕೆಯ ಸಡಿಲಿಗೆ 
ಸಿಡಿಲನು ಬಡಿಸಿ
ಕಡಲಿಗೂ ನಾಚಿಕೆ
ತರಿಸುವ ಬಾ 

ಬಳಲುವ ಆತ್ಮ-
ಗಳಲಿನ ಗದ್ದಲ
ಕೇಳಿಸದಂತೆ
ಕೂಡಲು ಬಾ

ಕಣ್ಣಿಗೆ ಎಟುಕದ
ಕನಸುಗಳೆಲ್ಲವ
ಮನಸಿಗೆ ಹತ್ತಿರ-
-ಗೊಳಿಸಲು ಬಾ

ಮೊದಲುಗಳೆಲ್ಲ
ಪರಿಚಿತವಾಗಲಿ
ಕೊನೆಗಳ ಸೋಲಿಗೆ
ಪಳಗಿಸು ಬಾ

ಅಂಜಲಿ ತುಂಬಲಿ
ಹಂಬಲ ಪುಷ್ಪ
ತಿಂಗಳ ಮಂಗಳ-
-ವಾಗಿಸು ಬಾ

ಗೊಂದಲಗೊಳ್ಳದೆ
ತಂಬೆಲರಾಟಕೆ
ಮೈ ಮರೆತು
ತಲೆದೂಗುವ ಬಾ

ಹೇಳಲು ಕೂತರೆ
ಸಾವಿರ ಮಿಲನದ
ಸೋಲಿನ ಸುಳುವಿದೆ
ಸೇರಲು ಬಾ

ಬಾ ಬರಲಾದರೆ
ಒಮ್ಮೆಲೆಗೇ 
ಮತ್ತೆಂದೂ ದೂರಾಗದೆ
ಉಳಿ ಬಾ

ಬಾ ಬಾನಾಡಿಗಳಾಗುವ
ಆಸೆಗೆ
ಬಣ್ಣವ ತುಂಬುವ
ಈಗಲೇ ಬಾ 

                 -- ರತ್ನಸುತ

1 comment:

  1. Start immediatly
    ಅಂತ ಮೊದಲೆಲ್ಲಾ telegram ಕೊಡುತ್ತಿದ್ದರು. ಹಾಗಿದೆ ನಿಮ್ಮೀ ಕವಿತೆ.
    ಭಾವ ತೀವ್ರತೆ ಇದೆ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...