Tuesday 25 March 2014

ಹಬ್ಬದಿರುಳು

ಬಾಗಿಲಲ್ಲೆ ಕಾದಿರುತ್ತಾಳೆ 
ಎಷ್ಟೇ ಬಾರಿ ತಿಳಿ ಹೇಳಿದರೂನು
ಅತ್ತ ಮನೆಯ ಬೆಳಕ ಹೀರಿ
ಇತ್ತ ಹಜಾರಕ್ಕೆಲ್ಲ ನೆರಳ ಪೂಸುತ್ತ
ದೀಪಕ್ಕೆ ಸರಿಯಾಗಿ ಬಳುಕುತ್ತಾಳೆ;
ಬೀದಿ ನಾಯಿಗಳು ಊಳಿಕ್ಕುತ್ತವೆ
ಗುಡಾಣದ ಬೆಕ್ಕು ಕಣ್ಮುಚ್ಚಿಕೊಳ್ಳುತ್ತದೆ
ಆಕೆಯ ಭಯದಲ್ಲಿ ಭಾಗಿಯಾಗಿ!!

ಹೊಟ್ಟೆಯಲ್ಲಿ ಸಣ್ಣ ಸಂಕಟ,
ಅದು ಹಸಿವನ್ನೂ ಮೀರಿಸುವಂತದ್ದು
ಬೆರಳುಗಳು ಏನನ್ನೋ ಯೋಚಿಸುತ್ತಿವೆ
ಚಿತ್ತಕ್ಕೆ ತದ್ವಿರುರುದ್ಧವಾಗಿ;
ಕಣ್ಣಲ್ಲಿ ಜಾರದೆ ಉಳಿದ ಕಂಬನಿಯ ಕಟ್ಟು
ಗುಳಿಯ ಸುತ್ತಲೂ ಗೆರೆಗಳ ಸಿಟ್ಟು
ಒಂದು ಆಲೆಯ ಜುಮುಕಿ ಕಳುವಾಗಿದೆ,
ಮತ್ತೊಂದು ಇದ್ದಲ್ಲೇ ಕೊಲೆಯಾಗಿದೆ!!

ಅಧರಗಳ ಸುತ್ತ ಉಷ್ಣ ಬೊಬ್ಬೆಗಳು;
ಆಗಾಗ ಮೂಖ ನಾಲಗೆಯ
ಸಾಂತ್ವನದ ತಿಳಿ ಲೇಪ.
ಅರಳಲು ಬೊಬ್ಬೆಗಳು ಸಿಡಿಯುವ ಆತಂಕ!!
ಕೆನ್ನೆ ಮೇಲೆಲ್ಲ ನಾ ಬರೆದು ಬಿಟ್ಟ
ಅಪೂರ್ಣ ನೀಳ್ಗವಿತೆಗಳು
ಕನ್ನಡಿ ಓದುವುದು ದೂರದ ಮಾತು
ಬರೆದವನೇ ಬರಬೇಕು ಅರ್ಥವಾಗಲಿಕ್ಕೆ!!

ರಸ್ತೆಯ ಬೆಳಕ ಕಂಡರೆ
ಸೆರಗನ್ನ ಸರಿಪಡಿಸಿಕೊಳ್ಳುತ್ತಾಳೆ
ತೂಕಡಿಕೆಯಲ್ಲೂ ಎಚ್ಚರವಾಗಿರುತ್ತಾಳೆ
ಎಡಗೈಯ್ಯಲಿ ಲಟ್ಟಣಿಗೆ ಮರೆಸಿ;
ಬಲಗೈ ಸೋಕಿದರೂ ತಾ ಕೆರಳುವುದು 
ಹೊರಗೈ ಸೋಕಿದರೆ?!!
ಸದ್ದು ಮಾಡದೆ ಶೀಲಕ್ಕೆ ಕಾವಲಿದ್ದಾಳೆ
ನನ್ನ ಬರುವಿಕೆಗೆಂದೇ ಕಾದು!!

ಅದು ನಾ ಕೊಡಿಸಿದ್ದ ಸೀರೆ!!
ದಿನದ ಒಂದು ಹೊತ್ತು ಊಟ ಬಿಟ್ಟು;
ಹೀಗೆ ಒಂದು ವರ್ಷ ಕಳೆದು
ಕೂಡಿಸಿಟ್ಟ ಹಣದಲ್ಲಿ ತಂದದ್ದು.
ಆಕೆ ಅದನ್ನೇ ಉಟ್ಟಿದ್ದಾಳೆ
ದೂರದ ತಿರುವಿನಲ್ಲಿ ಕಾಣುತ್ತಿದೆ.
ಇಂದು ಹಸಿವು ನೀಗಿಸಿಕೊಳ್ಳಬೇಕು
ಆ ಪಾಪಿ ಸೀರೆಯ ಕಳಚಿ!!

ನನ್ನೊಳಗಿನ ಹುಲಿ ಎಚ್ಚರವಾಗಿ
ಶರಣಾದ ಜಿಂಕೆಯಂಥ ಆಕೆಯ ಕೈ ಹಿಡಿದೆ!!
ಆಕೆಯೂ ಹಸಿದಿದ್ದಳು,
"ನನ್ನನ್ನು ತಿಂದಿಯಾಳೆ?" ತಿನ್ನಲಿ!!

ಉಷ್ಣತೆಗೆ ತಂಪೆರೆದೆ;
ಬೊಬ್ಬೆಗಳು ಒಂದೊಂದೇ ಮಾಯವಾದವು
ನಾನು ಗಂಡು, ಆಕೆ ಹೆಣ್ಣು
ಇನ್ನೇತಕ್ಕೆ ಬೇಕು ಬೇರೆ ಶಾಸ್ತ್ರ?
ಗೊತ್ತಿಲ್ಲದ ಆಟಕ್ಕೆ ಇಬ್ಬರೂ ಸಜ್ಜಾದೆವು
ಪಕ್ವ ನಿಲುವಿನಲ್ಲಿ
ಆ ಇಡೀ ರಾತ್ರಿಯ ನಿದ್ದೆಯನ್ನ
ನಾವು ಕದ್ದೆವು, ಹಬ್ಬವಾಚರಿಸಿ!!

                                         -- ರತ್ನಸುತ

1 comment:

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...