Tuesday 6 May 2014

ಹೇಳಿದ್ದೆಲ್ಲವೂ ಸುಳ್ಳೆಂದು ಹೇಳಿ ಹೋಗು!!

ಸ್ವಲ್ಪವೇ ಸಾಕಿತ್ತು ವಿರಹ
ಹೃದಯ ಸಿಡಿದಾಗ
ಚೂರುಗಳಾದರೂ ಸಿಗುತ್ತಿದ್ದವು
ಮತ್ತೊಂದು ಜೋಡಣೆಗೆ;
ಈಗ ಗಂಭೀರ ಪರಿಸ್ಥಿತಿ,
ಎಲ್ಲ ಚೂರುಗಳು ದಿಕ್ಕಾ ಪಾಲಾಗಿ
ನನ್ನ ಗುರುತಿಗೇ ಸಿಗುತಿಲ್ಲ,
ನನ್ನವೆಂದುಕೊಂಡವು ನನ್ನವಲ್ಲ!!

ಹೃದಯ ಹಸಿದಿತ್ತೇನೋ ಪಾಪ!!
ಸಿಕ್ಕ ಸಿಕ್ಕ ಭಾವನೆಗಳಿಗೆ ಮಿಡಿದು,
ಉಡುಗೊರೆ ರೂಪದಲಿ
ಸಿಡಿಮದ್ದು ಪುಳಕಗಳ ಪಡೆದು
ಕೇಂದ್ರೀಕರಿಸಿಕೊಂಡಿತು;
ಎಂದಾದರೂ ಸ್ಪೋಟಿಸಬಹುದೆಂಬ 
ಭೀತಿಯ ನಡುವೆಯೂ
ಪ್ರೀತಿಯ ಪ್ರಣತಿಯ ಹೊತ್ತಿಸಿಟ್ಟೆ!!

ರಕ್ತ ನಾಳಗಳು ಬತ್ತಿ
ಬಿರುಕು ಬಿಡುವ ಸದ್ದು ಕಿವಿಯಲ್ಲಿ,
ನಡುನಡುವೆ "ನೀನಿನ್ನೂ ಹೃದಯವಂತ"
ಎಂಬ ಪಿಸುನುಡಿ;
ಕಳೆದುಕೊಂಡವನಿಗಾವ ಅರ್ಹತೆ?
ಹಾಗೆ ಕರೆಸಿಕೊಳ್ಳಲು,
ಎಲ್ಲೋ ಅವಕ್ಕೆ ವಿನಾಶದ ಅಂಚಲಿ
ಬ್ರಾಂತಿಯಾಗಿರಬೇಕು!!

ನವರಂದ್ರಗಳಿಗೂ ನವಮಾಸದ ಬೇನೆ,
ಎಲ್ಲೇಲ್ಲೂ ಚಿಮ್ಮುತಿದೆ ನೆತ್ತರು
ಆದರೆ ಕಾಣುತಿಲ್ಲವಷ್ಟೇ;
ಕಣ್ಣಲ್ಲಿ ಹರಿದದ್ದೂ ಅದೇ,
ಆದರದಕೆ ಕಂಬನಿಯ ಪಟ್ಟ;
ಮೈ ತಣ್ಣಗಾಗುತ್ತಲಿದ್ದರೂ
ಎದೆಯ ಮೇಲೆ ಲಾವಾ ರಸ
ಇನ್ನೂ ಕುದಿಯುತ್ತಲೇ ಇದೆ!!

ಎಲ್ಲಕ್ಕೂ ಇದೆ ಪರಿಹಾರ
ಕಾಲಾವಕಾಶವಿದ್ದರಷ್ಟೇ;
ಸುಳ್ಳಾದರೂ ಸರಿಯೇ
ಹೇಳಿದ್ದೆಲ್ಲವೂ ಸುಳ್ಳೆಂದು ಹೇಳಿ ಹೋಗು;
ಮತ್ತೆ ಒಂದಾಗಬಹುದು ಹೃದಯ,
ಸರಿಹೋಗಬಹುದು ಸಮಯ!!

                                   -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...