Tuesday 6 May 2014

ಅಲ್ಪನ ಕೃ(ಖು)ಷಿ

ಅವರು ಬಿತ್ತರು ಪಕ್ವ ತಳಿ;
ನನ್ನ ಗುಡಾಣದ ಗಡಿಗೆಯಲಿ
ಎಂದೋ ಕೂಡಿಟ್ಟ ಕಾಳಿಗೆ
ಇರುವೆ, ಗೆದ್ದಲು, ಹೆಗ್ಗಣಗಳು ಮುತ್ತಿ
ಉಳಿದದ್ದು ಅರೆ ಬೊಗಸೆಯಷ್ಟು ಮಾತ್ರ!!

ಅದರಲ್ಲೂ
ಏಟು ಬಿದ್ದು
ಕಜ್ಜಿ ಹಿಡಿದವು,
ಟೊಳ್ಳಿನವು,
ಸುಳ್ಳಿನವು,
ಕಣ ಕಲ್ಲುಗಳು.
ನಡು-ನಡುವೊಂದು
ಚೂರು ಬರವಸೆ!!

ಕಳೆ ಬೀಡು ಬಿಟ್ಟ ನೆಲಕೆ
ನಿಸ್ಸಹಾಯಕ ನೇಗಿಲಿಟ್ಟು
ಕೊರೆದು ಹುತ್ತಷ್ಟೂ ನೋವು;
ಬಿರುಕು ಭೂಮಿಯ ಸೀಳಿದರೂ
ತೆವಾಂಶದ ಸುಳುವಿಲ್ಲ,
ಆದರೂ ಚೆಲ್ಲಿಕೊಂಡೆ
ಅಳಿದುಳಿದ ನಾಲ್ಕು ಕಾಳುಗಳ!!

ಆಶ್ಚರ್ಯವೆಂಬಂತೆ ಮಳೆ,
ಹಿಂದೆಯೇ ಬಿರು ಬಿಸಿಲು;
ಹೌಹಾರಿ ಜಾರಿ ಬಿದ್ದ
ಕೆಸರಿನ ಕೊಳದಲ್ಲೂ ನೀರಿಲ್ಲ!!

ಉರುಳಿದ ಕಾಲದ ಸಾಂತ್ವನಕೆ
ಪುಟಿದೆದ್ದ ಚಿಗುರು
ಮೊಣಕಾಲ ವರೆಗೆ;
ತೆನೆ ಹೂವು ಬಿಟ್ಟು
ದಿನಗಳೇ ಕಳೆದೋ,
ಎದೆ ಬಾರದ ಹೆಣ್ಣು
ನನ್ನವ್ವ ಹಡೆದಾಕೆ!!

ಅಲ್ಲೊಂದು ಇಲ್ಲೊಂದು
ಮೈನೆರೆದ ಪೈರು,
ತಿಳಿ ಹಳದಿ ಹಸಿರುಟ್ಟು
ಒಂದಿಷ್ಟು ಜೋರು;

ಕಣ ಮಾಡಿ,
ತೆನೆ ತೊನೆದು,
ತೂರಿದರೆ ಅಲ್ಲಿ
ಸಿಕ್ಕದ್ದು
ಬೊಗಸೆಯಷ್ಟೇ ಫಸಲು!!

ಮತ್ತೆ ಗುಡಾಣಕೆ-
ಚೆಲ್ಲುವ ಮನಸಿಲ್ಲ,
ಯಾರಾದರೂ ಕೊಳ್ಳುವಿರೇನು??

                             -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...