Thursday 15 May 2014

ರಾಧೆ ಧಾರೆ

ಜ್ವಲಿಸುವ ಕಾರಣಕ್ಕೇ ಇರಬೇಕು,
ನಾ ಮಂಜಿನ ಹನಿಯಾಗಿ
ನಿನ್ನ ಕಾಯುವಿಕೆಯಲ್ಲಿ ಬೇಯುವುದು;
ಪ್ರಿಯತಮ, ನಿನ್ನಿಂದ ಅಳಿವು-
ಉಳಿವುಗಳೆರಡೂ ಅವಿಸ್ಮರಣೀಯ-
ಸೋಲುಗಳೆಂದರೆ ಬೇಸರ ಬೇಡ!!

ವಿಸ್ತರಿಸಿಕೊಂಡ ಸರೋವರವಾದಲ್ಲಿ
ನೀ ಹಂಸ ಹೆಜ್ಜೆಯನಿಟ್ಟು
ಎಬ್ಬಿಸಿದ ತರಂಗಗಳಲ್ಲಿಯ ಮಾಹಿತಿ
ಎಂಟೂ ದಡಕ್ಕೆ ತಲುಪಿತೇನೋ ನೋಡು!!
ನಡುವೆಲ್ಲಾ ಸೊರಗುತ್ತಿರುವ ನಾನು
ಅಂಚುಗಳಲ್ಲೇ ನೆರೆದಿದ್ದೇನೆ
ನಿನ್ನ ತುಂಟತನದ ಕಾರಣದಿಂದ!!

ಕಚ್ಚಿ ಎಂಜಲು ಬಿಟ್ಟು ಹೋದೆ-
ಮಾಗಿದ ಗಲ್ಲದ ಮೇಲೆ,
ಗಿಣಿಗಳಿಗಾವ ಹಣ್ಣೂ 
ರುಚಿಕಟ್ಟನಿಸುತ್ತಿಲ್ಲವಂತೆ;
ಕಣ್ಣಲ್ಲೇ ತಿನ್ನುವಂತೆ 
ಮಾರು ದೂರದಲ್ಲಿ ಕೂತು ಕೆಕ್ಕರಿಸುತ್ತಿವೆ;
ಮುಂದಿನ ಬೇಟಿಯಲ್ಲಿ
ನಿನಗೆ ದೃಷ್ಟಿ ಬಿಡಿಸಬೇಕು, ಬೇಡನ್ನದಿರು!!

ಗಡಿಬಿಡಿಯಲ್ಲಿ ಗೋಜಲಾಗಿಸಿಬಿಟ್ಟೆ
ಮನಸಲ್ಲಿ ನಿನಗಾಗಿ ನೇಯುತ್ತಿದ್ದ
ರೇಷಿಮೆ ಕರೆಯೋಲೆಯ;
ಇನ್ನು ನೀನೇ ಬರಬೇಕು
ಎಲ್ಲವ ಬಿಡಿಬಿಡಿಯಾಗಿ ಜೋಡಿಸಿ
ನನ್ನಪೇಕ್ಷೆಯಂತೆ ಓದಲಿಕ್ಕೆ;
ಆಹಾ!! 
ನಿನ್ನ ನೆನಪೂ ಒಂದು ನಲ್ಮೆಯ ತೆಕ್ಕೆ!!

ಬೆಳಕ ಹಚ್ಚಿಟ್ಟು ಕಾವಲಿರುವೆ ಇನಿಯ
ನೀ ಕೊಟ್ಟ ಧಾವಂತ ನೀಗುವಂತದ್ದಲ್ಲ!!
ನೀನೇ ಉರಿದಿರಬಹುದೇ ಬಹುಶಃ?
ಬೆಳಕ ಬಳುಕಿಗೆ ಸಿಗ್ಗು ಮೂಡುತಿದೆ!!
ನಿಜವೇ ಆಗಿದ್ದಲ್ಲಿ ಅಪ್ಪು ನನ್ನ;
ನೀ ದಹಿಸುವ ರಭಸವೇ 
ನನಗೆ ಮುಕ್ತಿ ಮಾರ್ಗ.....

                                 -- ರತ್ನಸುತ

1 comment:

  1. 'ಗಿಣಿಗಳಿಗಾವ ಹಣ್ಣೂ
    ರುಚಿಕಟ್ಟನಿಸುತ್ತಿಲ್ಲವಂತೆ'
    ಅಬ್ಬಬ್ಬಾ ರಸಿಕ ಕವಿಯೇ!

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...