Monday 19 May 2014

ಇಳಿಸಂಜೆ ಮಂಕಾಗಿ

ಸುಮ್ಮನೆ ಕೂತಿದ್ದೇ ಆಯಿತು,
ಗಂಟೆ ಮೀರಿ ಮುಳ್ಳು ಜಾರಿ
ಮತ್ತೊಂದು ಸುತ್ತಿಗೆ ಸಜ್ಜಾಗಿದೆ
ತುಟಿ ಕದಲುವ ಸೂಚನೆಯಿಲ್ಲ!!

ಕಣ್ಣಲ್ಲಿ ಧೂಳಿದ್ದೂ ತೆಗೆಯಲು
ಮುಂದಾಗದ ಕೈ ಬೆರಳನ್ನ
ಕಣ್ಣೆವೆ ಗೋಗರೆದು ಸುಮ್ಮನಾಯಿತು,
ಈಗ ಲೋಕವೆಲ್ಲ ಮಂಜು ಮಸುಕು!!

ಗಾಳಿಗೆ ದಾಳಿಗೊಳಗಾದ
ಪುಡಿಗೂದಲ ಸರಿಪಡಿಸಲು 
ಅದೆಷ್ಟು ಶಕ್ತಿ ವ್ಯರ್ಥ?!!
ಬದಲಿಗೆ ಹುಡುಕುವ ಬಾಳಿನರ್ಥ!!

ಕಾಲಡಿಗೆ ಸಿಕ್ಕಿ ಸತ್ತ ಗರಿಕೆಗೆ
ನೆಟ್ಟ ಬೇರಿನ ಮೂಲದಲ್ಲಿ
ಸಣ್ಣ ಮರುಕ;
ಎಲ್ಲಿ, ಒಬ್ಬರಡಿಗೊಬ್ಬರು ಸಿಲುಕಿದರೂ
ಸುಳುವಿಲ್ಲ ಹನಿಯ ಜನನ?!!

ಎಲೆಯುದುರಿ ಸುಮ್ಮನಾಯಿತು,
ಬೆಳಕು ಕರಗಿ ಗುಮ್ಮ ಆಯಿತು,
ಚಂದ್ರನಿಗೋ ಮಂಪರು
ಎಚ್ಚರಿಕೆಯ ಗಂಟೆ ಮೊಳಗೀತೇ?

ಸಣ್ಣ ಆಕಳಿಕೆಯ ವಿರಾಮದ ನಂತರ
ಮತ್ತೆ ಮುಂದುವರಿದ ಮೌನ ಸಲ್ಲಾಪ;
ಯಾರಿಗೆ ಪ್ರೀತಿ?
ಇಬ್ಬರಲ್ಲೂ ನಿರುತ್ತರದ ಛಾಯೆ!!

                             -- ರತ್ನಸುತ

1 comment:

  1. ಮನಸಿಗೆ ನೆಚ್ಚಿಗೆಯಾದ ಸಾಲುಗಳು:
    ’ಕಾಲಡಿಗೆ ಸಿಕ್ಕಿ ಸತ್ತ ಗರಿಕೆಗೆ
    ನೆಟ್ಟ ಬೇರಿನ ಮೂಲದಲ್ಲಿ
    ಸಣ್ಣ ಮರುಕ’

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...