Friday 2 August 2013

ತಪ್ಪು ಮಾಡಿದವ ತಪ್ಪಿತಸ್ತನಲ್ಲಾ!!!

ಬೆಳಕಿನ ಕ್ರೌರ್ಯಕೆ ಬಯಲಾಯಿತು
ಕತ್ತಲ ಮಡಿಲಿನ ಬೆತ್ತಲೆ ಸೇವೆ
ತಪ್ಪುಗಳರಿವು ತನ್ನೊಳಗಿರಿಸದೆ
ಲೋಕದ ಬೆರಳಿಗೆ ಸಿಗುತಾವೆ
ದಾರಿ ತಪ್ಪಿಸಿ ಗುರಿ ತಪ್ಪಿಸಿತು
ಕತ್ತಲ ಪಾಲಿನ ಶಾಪವದು
ದಾರಿ ತಪ್ಪಿದ ಮೇಲೆ ಹರಿಯಿತು
ಬೆಳಕಿಗೆ ಕ್ಷಮೆಯು ಎಲ್ಲಿಹುದು

ನೆತ್ತರು ಹರಿಸಿ, ಬೆವರನು ಇಳಿಸಿ
ಕಂಬನಿ ಜಾರಲು ಬರಲಿಲ್ಲ
ಅಪ್ಪಿದವೆಲ್ಲಾ ಕೈತಪ್ಪಲು
ತುಸು ಒಪ್ಪುವ ನಿಮ್ಮದಿ ಕೊಡಲಿಲ್ಲ
ಸುಲಿದ ಸಿಪ್ಪೆಗೆ ಮುತ್ತಿದ ನೊಣಗಳ
ಪ್ರಚಾರಗೊಳ್ಳಿಸಲು ಬಂದೆ
ಕಷ್ಟಕೆ ಕರಗದ ಪೂಜಾ ಶಿಲೆಗಳು,
ಕಲ್ಲು ಬಂಡೆಗಳೂ ಒಂದೇ

ಮುಚ್ಚಿದ ಕಣ್ಣುಗಳ ಮೆಚ್ಚಿ
ಕನಸಿನ ತೆರೆಯ ಹಾಸುತಲಿ
ಸುಂದರ ಓಟದ ಚಿತ್ತಾರವನು
ದಯಪಾಲಿಸಿದನು ದಯಾಕರ
ನಿಜದ ನೋಟವ ಕುರೂಪಗೊಳಿಸಿ
ಮಾತು ಮಾತಿಗೆ ಮತ್ಸರ ಬೆರೆಸಿ
ಚುಚ್ಚುವ ಕಿರಣವ ಸುರಿದನು ತಾನು
ಕಟುಕನಲ್ಲವೇ "ದಿನಕರ" ?!!

ಜ್ಞಾನದ ಹೊರೆಯ ಹೊರಲಾಗದೆ
ಅಜ್ಞಾನದೆಡೆಗೆ ಪಯಣವ ಬೆಳೆಸಿ
ಅಲ್ಲಲ್ಲಿ ಭಾರವ ಇಳಿಸಿಕೊಳ್ಳಲು
ತೃಪ್ತವಾಯಿತು ಅವಿವೇಕತನ
ತುಂಬಲು ಮಾತ್ರಕೆ ತಾನೊದಗಿ
ತಂಬೆಲರಲ್ಲಿ ನನ್ನಿರಿಸಿದ ಜ್ಞಾನ
ಅಳವಡಿಕೆಗೆ ತಾ ಹೊಣೆಯಾಗದಿರಲು
ಅಲ್ಲವೇ ಇದು ಅತಿರೆಖತನ ?!!

ತಪ್ಪಿಗೆ ಶಿಕ್ಷೆ ತಪ್ಪದು ಆದರೆ
ತಪ್ಪನು ತಪ್ಪಿಸ ಬಹುದಾದವನೇ
ಮಾತನು ತಪ್ಪಿ ತಪ್ಪಿಸಿಕೊಂಡರೆ
ತಪ್ಪೆಸಗಿದವನಿಗೇ ಏಕೆ ಶಿಕ್ಷೆ ?!!
ತುಪ್ಪಕೆ ಉರಿದ ಬತ್ತಿಯು ಕರಗಿತು
ಸುತ್ತಲ ಕತ್ತಲ ದೂರ ಸರಿಸಿ
ಬೀಸು ಗಾಳಿಯು ನಂದಿಸೆ
ಹಣತೆಯ ಅರ್ಹತೆಯಲ್ಲವೇ .......  ಕ್ಷಮೆಯ ಬಿಕ್ಷೆ!!

                                                 --ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...