Monday 5 August 2013

ಮಹಾಮಾಯಿ

ಚಕ್ಕೆ ಹಿಡಿದ ಗೋಡೆ 
ಜಂಟಿ ಒಲೆಯ ಬಿರುಕು 
ತೂತು ಬಿದ್ದ ಮಡಿಕೆ 
ಅದಕೆ ಮೆತ್ತಿಕೊಂಡ ಹುಣಸೆ 
ಬೊಬ್ಬೆ ಎದ್ದ ಕೈಯ್ಯಿ 
ಮೊರದೊಳಗೆ ಕಾಳು ಹೆಕ್ಕಿ 
ನೀರು ಕುದಿಗೆ ಬಂತು 
ಹಿಟ್ಟು ಖಾಲಿಯಾದ ಪೈಕಿ 

ಹರಿದ ಸೀರೆ ಜೋಳಿಗೆ 
ತೂಗು ನಿದ್ದೆ ಕೂಸಿಗೆ 
ಅತ್ತು ಎದ್ದರೇನು ಗತಿ 
ಬತ್ತಿದೆ ಎದೆ ಕ್ಷೀರ!!
ಕುದಿ ನೀರಿಗೆ ಉಪ್ಪು-ಹುಳಿ 
ಖಾರದೊಡನೆ ಚೂರು ದವಸ 
ನೀರು ಗಂಜಿಯಾಗಲಿಕ್ಕೆ 
ಇನ್ನೂ ದಾರಿ ದೂರ 

ದೂರ ನೆಂಟ ಬಾಗಿಲಲ್ಲಿ 
ಕಾಲು ಮುರಿದು ನಿಂತಿರುವ 
ನಕ್ಕು ಮಾತನಾಡಿ ಆಯ್ತು 
ಗಂಟೆ ಮೀರಿ ನಿಮಿಷ 
ಗಂಟಲಾರಿ ಹೋದರವನು 
ಕೇಳಬಹುದು ಪಾಣಕ 
"ಕೂಸಿಗೆರೆಯಬೇಕು ಹಾಲು"
ಕಾಲ್ಕಿತ್ತೆ ಸುಳ್ಳ ಮೂಲಕ 

ಕುದಿ ಕುದಿಯುತ ಕರಕಳಾಯ್ತು 
ಕಪ್ಪಗಿದ್ದ ಮಡಿಕೆ 
ಸುಟ್ಟ ಘಮಲು ಸೂಸಿ 
ಹೊಟ್ಟೆ ತುಂಬಿಸುವ ಸಲುವೇ?
ಕೂಸು ಕದಲಿತೇನೋ? ಭಯ!!
ಚಾಚಬೇಕೇ ಕೈಯ್ಯಿ?
ಯಾರೋ ಇಟ್ಟ ಶಾಪವಿದು 
ಈಗ ತೆರಲು ಮುಯ್ಯಿ 

ಕುಡುಕ ಗಂಡ ಭೂದಿಯಾದ 
ಉಳಿಸದೆ ಪುಡಿಗಾಸು 
ಕಾಮುಕ ಬೀದಿಯ ಕಾಗೆ 
ಹದ್ದಾಯಿತು ಕುಕ್ಕಿ 
ದಾನ, ಸಾಲ ಬೇಡಿದಲ್ಲಿ 
ಉಳಿಯದು ಸಂಭಂದ 
ಇದ್ದ ಒಡವೆ ಮಾರಿ ಬರುವೆ 
ಕೊಂಚ ತಾಳೋ ಕಂದ 

                       --ರತ್ನಸುತ 

1 comment:

  1. ಹಲವು ಚಿಂತೆಗಳ ನಡುವೆ ಜವಾಬ್ದಾರಿಗಳನ್ನು ಹೊರುವಳೇ ಮಾಯೀ

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...