Wednesday 26 February 2014

ಒಂದೆರಡು ಮಾತು ಪ್ರೀತಿಯಲ್ಲಿ

ಹಿಡಿಗೆ ಸಿಗದ ಜಡೆಯ
ಹೆಣೆದವರು ಯಾರೆಂದು
ಹೇಳದೆ ಓಡುವೆ
ಸರಿಯೇನು ಹುಡುಗಿ?
ಕಡೆಗೆ ಸಿಗುವ ನಿನ್ನ
ತುಂಟ ನಗು ಯಾಕೆಂದು
ಹೇಳದೆ ಉಳಿಸಿದೆ
ಹೋದೇನು ಕರಗಿ!!

ಸುಡುವ ಕತ್ತಲಿನಲ್ಲಿ
ಉರಿದ ತಣ್ಣನೆ ದೀಪ
ಪಿಸುಮಾತ ಹೇಳಿದೆ
ಕೇಳು ದಯ ಮಾಡಿ
ಬರಿಯ ಅಕ್ಷರದಲ್ಲಿ
ಎಲ್ಲ ಬರೆದಿಡಲಾರೆ
ಮೌನವನು ಕೆದಕಿಬಿಡು 
ಮಾತಿನೆಡೆ ದೂಡಿ

ಬಿಟ್ಟು ಹೋದರೆ ಹೇಗೆ
ಬಲಗಾಲ ಗೆಜ್ಜೆಯನು
ಎತ್ತಿಟ್ಟ ಕಿಸೆಯಲ್ಲಿ
ಅಡಿಗಡಿಗೂ ಹಾಡು
ದಿಕ್ಕು ತಪ್ಪಿದ ಹಾಗೆ
ಒಮ್ಮೊಮ್ಮೆ ನಟಿಸುವೆ
ಕೈ ಚಾಚಿ ನೀನಾಗ
ಕಂಗಳನು ನೋಡು

ಎಕಾಂತದಲಿ ಒಮ್ಮೆ
ಎದೆಯ ಚಿವುಟಿ ಹೋದೆ
ಆ ನೊವಿನಲ್ಲೊಂದು
ವಿಷಯವನ್ನಿಟ್ಟು
ಅಂದದ್ದು, ಕೊಂಡದ್ದು
ಎಲ್ಲವೂ ಮುಗಿದಿದೆ
ಬೇಕಿದ್ದ ಆ ಒಂದು
ವಿಷಯವ ಬಿಟ್ಟು

ತಾಳೆ ಬೀಸುವ ಜಾಗ
ನನಗಷ್ಟೇ ಗೊತ್ತಲ್ಲಿ
ಗುಟ್ಟುಗಳ ಆಲಿಸೋ
ಕಳ್ಳ ಕಿವಿಯಿಲ್ಲ 
ಆಣೆ ಪ್ರಮಾಣಗಳು
ತರವಲ್ಲದವರಿಗೆ
ನಮ್ಮ ನಡುವೆ ಅವು
ಲೆಕ್ಕಕ್ಕೇನಿಲ್ಲ 

ಭಯದಲ್ಲಿ ಆದದ್ದು
ವಿಸ್ಮಯ ಪ್ರೇಮ
ಅನುಭವ ನೂತನ
ಅವಿಸ್ಮರಣೀಯ
ಮಾತಿಗೂ ಹಾಡಿಗೂ
ನಡುವೆ ಗೀಟೆಳೆದು 
ಹಾಕುವ ಖುಷಿಗಳಿಗೆ
ಬಿಗಿ ಅಡಿಪಾಯ

ಹಿಂಡು ಗುಲಾಬಿಯಲಿ
ಇರಲಿ ಬಿಡು ಮುಳ್ಳು
ಚುಚ್ಚುವಂತಾದರೆ
ಅಂಜ ಬೇಡ
ಹಾಳಾದ ಮನಸನ್ನು
ಸರಿ ಮಾಡುತಿರುವೆ
ಸ್ಮೃತಿಯಲ್ಲಿ ನೆಲೆಯೂರಿ
ಗಿಂಜ ಬೇಡ !!

               -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...