Tuesday 4 February 2014

ಸೂರ್ಯನ ಕಕ್ಷೆಯಲಿ ತೋಚಿದ್ದ ಗೀಚಿ

ಪುರಾಣದ ಸೂರ್ಯ 
ಭವಿಷ್ಯವ ನೋಡುತ್ತಿದ್ದಾನೆ 
ವರ್ತಮಾನದ ಗೋಜಲಿನಲ್ಲಿ 
 
ಹಿಂದೆ ಪ್ರತ್ಯಕ್ಷವಾಗುತ್ತಿದ್ದನಂತೆ 
ಥೇಟು ದೇವಾನುದೇವತೆಗಳಂತೆ
ಈಗೀಗ ಹಾಗೇನನಿಸುತ್ತಿಲ್ಲ;
ಅವನ ಸಲುವು ಗುಡಿಗಳಂತೂ 
ವಿರಳದಲ್ಲಿ ವಿರಳ 
 
ತಾ ಉರಿದು ಉರಿಸುವ 
ಭೂಮಂಡಲದ ತುಂಬ
ನೆರಳುಗಳ ಗುರುತು 
ಭೂಮಿಗೂ ತಾತ್ಸಾರವಿದೆ ಅವನ ಕುರಿತು 
 
ನಿಶ್ಚಲ ಅನಿಸುವಷ್ಟು ಅವನ ನಡೆ 
ಕಕ್ಷೆಯನು ಹಿಡಿದು
ಸುತ್ತುವವುಗಳ ಮೇಲೆ 
ಕಿಂಚಿಷ್ಟೂ ಕರುಣೆ ಇಲ್ಲದೆ 
ಇದ್ದಲ್ಲೇ ಉಳಿದು ಬಿಟ್ಟ 
ಸ್ವಾಭಿಮಾನಿಯಾಗಿ  
 
ದೈತ್ಯ ಪ್ರಕಾಶಿಸಿ 
ಮುಖವೊಡ್ದ ಪಡಸಾಲೆಗೆ 
ಹೊನ್ನ ಲೆಪಿಸಿಹನು 
ದಿನದ ಸರಸ ಮುಗಿಸಿ 
ಮೆಲ್ಲ ಕಾಲ್ಕಿತ್ತನು 
ತನ್ನ ಬಂಟ ಚಂದ್ರನಿರಿಸಿ 
ನಿದ್ದೆಗೆ ಜಾರುವೆನೆಂದು 
 
ಅಸಲಿಗೆ ಆತನಿಗೆ 
ಹಿತ್ತಲ ಮೇಲೆ ಮೋಹ 
ಹಜಾರಕೆ ತಿಳಿಯದಂತೆ 
ಗುಟ್ಟಾಗಿ ಹಿತ್ತಲೊಡನೆ 
ಸಲ್ಲಾಪ್ಪದ ಕ್ಷಣ ಉರುಳಿಸಿ 
ಚಂದ್ರ ಕಾವಲಿಟ್ಟನು
ಮತ್ತೆ ಪಡಸಾಲೆಗೆ 
ಲಗ್ಗೆ ಹಾಕಿ 
 
ಅಗೋ ಮತ್ತೆ ತೂಕಡಿಸಿ 
ಮುಖ ಊದಿಸಿ 
ಕೆಂಪಾಗಿಸಿ
ಮಲಗೆ ಹೊರಟ ತುಂಟ;
ಎಲ್ಲಿ ಮರೆಯಾದ 
ತನ್ನ ಬಲಗೈ ಬಂಟ?!!

ಇಂದೇಕೋ ಭೂಮಿ 
ತನ್ನಿಡಿ ನೆರಳ 
ಚಂದ್ರನಿಗೆ ಹೊದ್ದಿಸಿಹಳು 
ಹಜಾರಕ್ಕೆ ಇನ್ನು ಕಗ್ಗತ್ತಲು 
ಹಿತ್ತಲಿಗೆ ಬೆಳಕೋ ಬೆಳಕು.... 

                    -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...