Tuesday 4 February 2014

ಪ್ರಕೃತಿ-ಪ್ರಣಯ

ಕಡಲಾಳ ಮುತ್ತೊಂದು 
ಮಿನುಗಿತ್ತು ಅನವರತ 
ಯಾವ ಬೆಸ್ತನ ಬಲೆಗೆ ಸಿಕ್ಕ ಚಿಪ್ಪೋ!!
ಗೆಳತಿಯ ಕೊರಳನ್ನು  
ಮಡಿಲಾಗಿಸಿ ಅದಕೆ 
ಸರಿಪಡಿಸಿಕೊಳ್ಳುವೆ ನಡೆದ ತಪ್ಪು 
 
ಕರಿ ಹಲಗೆ ಬಾನಲ್ಲಿ 
ರಂಗೋಲಿ ಚುಕ್ಕಿಗಳು 
ಯಾವ ಕವಿಯ ನಿದ್ದೆ ಕೆಡಿಸಿತೇನೋ!!
ಹೊಗಳಿ ಪಾಡಿಯೇ ಬಿಟ್ಟೆ 
ನಾಚಿಸಿ ನನ್ನವಳ 
ನನ್ನಂತೆಯೇ ಪರಮ ರಸಿಕನವನು !!
 
ಶಾಂತ ಕೊಳದ ನಡುವೆ 
ಅರಳಿ ನಿಂತ ಕಮಲ 
ಯಾರ ಪುಷ್ಪಾರ್ಚನೆಗೆ ಮೀಸಲಲ್ಲ 
ನನ್ನ ಚಿತ್ತವ ಸೆಳೆದು 
ಕೈಗೆಟುಗುವ ನಡುವ 
ತಬ್ಬಿ ತಲುಪುಲು ಆಕೆ ಬಿಡುತಲಿಲ್ಲ 
 
ಉಕ್ಕು ಉಬ್ಬಿನ ಬಿಲ್ಲು 
ಕಣ್ಣು ಹಬ್ಬಿರುವಲ್ಲೂ 
ನೀಲಿ ಪರದೆಗೆ ಸಿಕ್ಕ ಬಣ್ಣ ಬಳಪ 
ಉಬ್ಬಿ ಕಾಡುವ ಹೆಣ್ಣು 
ಮಬ್ಬು ಕುರುಡನ ಕಣ್ಣು 
ಕಂಡ ಕನಸುಗಳಲ್ಲೂ ಅವಳ ರೂಪ 
 
ಮಣ್ಣು ಮೊಳಕೆಯ ಮೂಲ 
ಕಣ್ಣ ಕವಿತೆಯ ಸಾಲ 
ಒಂದುಗೂಡಿಸಿ ಮೂಡಿತೊಂದು ಪ್ರಾಸ 
ದಿಕ್ಕು ತೋಚದೆ ಹಡೆದ 
ನಿರ್ಗತಿಕ ಪ್ರೀತಿಗೆ 
ಅವಳೆದೆಯ ಗುಡಿಸಲಲಿ ಸೌಕ್ಯ ವಾಸ 
 
ಋತು ಚಕ್ರದಲಿ ಗ್ರೀಷ್ಮ 
ಭೂ ಒಡಲ ಧಗ-ಧಗಿಸಿ 
ಒಡ್ಡುವ ಶರತ್ತನು ಮೀರಲೇ ವಸಂತ 
ಮೂಗಿನಂಚಿನ ಮುನಿಸು 
ಅದರ ಆಚೆಗೆ ಸರಸ 
ಒಲವ ಸಾಕ್ಷಾತ್ಕರಿಸಿದ ದಿಗಂತ !!
 
                              -- ರತ್ನಸುತ

No comments:

Post a Comment

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...