Wednesday 2 January 2019

ನೆರಳು ಮೂಡಲು ಗೋಡೆಯೇ ಬೇಕೆಂದೇನಿಲ್ಲ

ನೆರಳು ಮೂಡಲು ಗೋಡೆಯೇ ಬೇಕೆಂದೇನಿಲ್ಲ
ನೆಲವಾದರೂ ಸಾಕು
ಆದರೆ ತುಳಿದವರ ಸಲುವಾಗಿ ಗೋಡೆ ಕಟ್ಟಿ
ಮತ್ತಷ್ಟು ತುಳಿತಕ್ಕೊಳಗಾಗಬಾರದು

...
ದಾಹ ನೀಗಿಸಿಕೊಳಲು ಬಾವಿಯೇ ತೋಡಬೇಕಿಲ್ಲ
ಕೊಡ ಹಿಡಿದು ಕೆರೆಗಂಟ ನಡೆದರಾಯಿತು
ಸ್ವಾರ್ಥದ ಬಾವಿಯಾಳಕ್ಕಿಳಿದು ಹೊರ ಬರಲಾಗದೆ
ಅಲ್ಲೇ ಮಣ್ಣಾಗಬಾರದಷ್ಟೇ



ಬಿಸಿಲು ಸುಡದಂತೆ ಚಪ್ಪಡಿ ಹಾಸಬೇಕೆಂದೇನಿಲ್ಲ
ಚಪ್ಪರ ಹೆಣೆದರಷ್ಟೇ ಸಾಕು
ಬೇಕೆಂದಾಗ ನಕ್ಷರಗಳ ಎದೆಗಿಳಿಸಿ, ಮಳೆಯನ್ನೂ ಸವಿಯಬೇಕು
ಹರಿದ ಚಪ್ಪರದ ಚಂಚಲತೆ ಅಸಹಾಯಕನನ್ನಾಗಿಸದಿರೆ ಸಾಕು



ಕತ್ತಲಿಗೆ ದೀಪವೇ ಬೇಕೆಂದಲ್ಲ
ಕತ್ತಲು ಕತ್ತಲನ್ನೇ ನುಂಗಬಹುದು
ಹಾಗಂದಮಾತ್ರಕ್ಕೆ ಬೆಂಕಿ ಗೀರದೆ ಕುಳಿತು
ಲೇಕದೆದುರು ಅಂಧರಾಗಬಾರದು



ಇದ್ದು ಬದುಕನ್ನ ಕಟ್ಟಿಕೊಳ್ಳಬೇಕು
ಸಿಕ್ಕ ಅನುಭವಗಳ ತೊಗಟು, ನಾರುಗಳಿಂದ
ಪುಟ್ಟ ಗೂಡೊಂದು ನೆಮ್ಮದಿಯ ತಾಣವಾಗಬೇಕು
ಕೆಂಡ ಹುದುಗಿದ ದೈತ್ಯ ಶಿಖರವಾಗದೆ!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...