Monday 29 December 2014

ನನ್ನ ಹುಡುಕ ಬನ್ನಿ

ಕಡಲ ಅಲೆಗಳಿಗೆ ಕಣ್ಣೀರ ಉಣಿಸಿ
ಕಣ್ಣು ಸಪ್ಪೆಯಾಗುತ್ತ ಹೊರಟಿದೆ
ಕೆನ್ನೆ ಮೇಲೊಂದು ಹಾದಿ ನಿರ್ಮಿಸಿ
ಇನ್ನೂ ಒಂದಿಷ್ಟು ಹೆಚ್ಚೇ ಹರಟಿದೆ

ಮಡಿದ ಹೂವಿಂದ ಗಂಧ ಕಳುವಿಗೆ
ಹೊಂಚು ಹಾಕುತ್ತ ಗಾಳಿ ಬೀಸಿದೆ
ಬಂಧ ಕಳಚಿಟ್ಟ ನಗ್ನ ಕೈಗಳು
ಯಾರದೋ ಆಸರೆಗೆ ಕಾದಿದೆ

ಬಿದ್ದ ಮಾತನು ಎತ್ತಿ ಹಿಡಿಯುವ
ಯತ್ನವೆಲ್ಲವೂ ಸೋತು ನಿಂತಿದೆ
ಮೌನದಲ್ಲೆ ತಾನಾಗಿ ಮೂಡಿದ
ಕಾವ್ಯಕೊಂದು ಹೆಸರಿಡಲು ಬೇಕಿದೆ

ಎಲ್ಲ ಮರೆತು ಎಲ್ಲದರ ಕುರಿತು
ಕೊನೆಗೊಮ್ಮೆ ಯೋಚಿಸಿ ಸಾಯ ಬೇಕಿದೆ
ಅಥವ ಎಲ್ಲವ ನೆನಪಲಿಟ್ಟು
ಕೊನೆಗಾಣುವನಕ ಪರಿ ಬೇಯ ಬೇಕಿದೆ

ಬಿಟ್ಟ ಹೆಜ್ಜೆ ಗುರುತಲ್ಲಿ ಒಮ್ಮೆ
ನನ್ನಿರುವೆಕೆಯನು ಸಾಬೀತು ಮಾಡಿದೆ
ಮತ್ತೆ ಮತ್ತೆ ಹುಟ್ಟುತ್ತ ಮರುವು
ನೀಯತ್ತಿನಲ್ಲಿ ನನ್ನೆಸರ ಅಳಿಸಿದೆ

ಬನ್ನಿ ಬೇಗ ನನ್ನನ್ನು ಹುಡುಕಿ
ನಾನಿದ್ದ ಜಾಗ ನನ್ನನ್ನೇ ನುಂಗಿದೆ
ಅಳಿಯುವಾಸೆ ನನಗಿಲ್ಲ ಕೇಳಿ
ಕ್ಷಣವಾದರಿಲ್ಲಿ ಮನಸಾರೆ ಬಾಳದೆ!!

-- ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...