Tuesday 10 June 2014

ಕಿಚ್ಚು

 ಎದ್ದು ಬಿದ್ದು ಬನ್ನಿ ಎಲ್ಲ
ಸದ್ದು ಮಾಡಿ ಕೂಡಿ ಮೆಲ್ಲ 
ಕೋಟೆ ಕಲ್ಲ ಕದಿಯೋದಕ್ಕೆ ಯಾರೋ ಬಂದವ್ರೆ,
ಕಳ್ಳ ದಾರಿ ಹಿಡ್ದು ಇಲ್ಲಿಗಂಟ ಬಂದವ್ರೆ!!
ಮಳ್ಳರಂತೆ ಮೋಸದುರಿಯ ಕೊಳ್ಳಿ ಹಿಡ್ದವ್ರೆ!!

ಎದ್ದು ಬಿದ್ದು ಬನ್ನಿ ಎಲ್ಲ
ಸಾಲುಗಟ್ಟಿ ನಿಲ್ಲಿ ಇಲ್ಲಿ
ದೇಶ ಗಡಿಗೆ ಇಡುವ ಮುಂಚೆ ಕಣ್ಣ ಗಡಾರಿ,
ಎದೆಯ ಕೊಟ್ಟು ನಿಲ್ಲಿಸೋಣ ಶತ್ರು ಸವಾರಿ!!
ಆಗಲಿನ್ನುಮೇಲೆ ರಕ್ತ ಹರಿಸೋ ತಯಾರಿ!!

ಎದ್ದು, ಬಿದ್ದು ಬನ್ನಿ ಎಲ್ಲ
ಗೆದ್ದು ತೋರಿಸೋಣ ಬನ್ನಿ......

ಪುಣ್ಯ ಮಣ್ಣ ಕಣ್ಣಿಗೊತ್ತಿ
ಮುಷ್ಠಿ ಬಿಗಿದರಲ್ಲಿ ಶಕ್ತಿ
ಕುಂಟ ಕೂಡ ಮಿಂಚು ವೆಗದಲ್ಲಿ ಓಡುವ;
ತಾಯಿ ಹಾಲ ಋಣವ ಹೊತ್ತ
ಆತ್ಮದಲ್ಲಿ ದೇಶ ಭಕ್ತಿ
ಕುರುಡನಾದರೇನು ನೇರ ಗುರಿಯ ಹೂಡುವ;

ಅಚ್ಚ ಹರಿಸರ ಮರವ ಕಡಿವ
ಕೈಗಳೆಲ್ಲ ಬಿದ್ದು ಹೋಗಿ
ಹಸಿದ ಕಾಡು ಅವರ ಕಿತ್ತು-ಕಿತ್ತು ತಿನ್ನಲಿ;
ಜಾತಿ, ಧರ್ಮ, ಮೇಲು, ಕೀಳು
ಅನ್ನುವಂಥ ಮಾತು ಸತ್ತು
ಭಾರತಾಂಬೆ ಕಂಡ ಕನಸು ಪೂರ್ಣವಾಗಲಿ!!

ನೆಲವ ಬಗಿದು ಚಿನ್ನ ದೋಚಿ
ಬಣ್ಣ ಬಣ್ಣ ಮಾತನಾಡಿ
ನಮ್ಮ ನಿಮ್ಮ ಮನೆಯ ಲಕ್ಷ್ಮಿ ಬಡವಳಾದಳು;
ಒಂದು ತುತ್ತು ಅನ್ನದಲ್ಲಿ
ಅಗಳು-ಅಗಳು ಜೀವನಾಡಿ
ದುಡಿಯಬೇಕು ಬೆವರ ಹರಿಸಿ ದಣಿಗಳಾಗಲು;

ಹುಟ್ಟು ಸಾವು ಎರಡೇ ಇಲ್ಲಿ
ನಮ್ಮ ಕೈಯ್ಯ ಸ್ತಿಮಿತದಲ್ಲಿ
ಇಲ್ಲದಂಥ ಗುಟ್ಟು ಅಂತ ಅರಿತುಕೊಳ್ಳುವ;
ಸೋಲು ಬಂದರೇನು ಬಂತು,
ಗೆದ್ದು ಬೀಗ ಬೇಡ ಕೂತು
ಸೂರ್ಯ, ಚಂದ್ರ ಸಾರುವಂಥ ಕಥೆಯ ಸೇರುವ!!

                                                 -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...