Tuesday 10 June 2014

ಯಾರೂ ಇಲ್ಲದವನಾಗಿ

ನಾ ನಾವಿಕನಲ್ಲ,
ದೋಣಿಯಲ್ಲಿ ಪಯಣ ಬೆಳೆಸಿದ್ದೇನೆ
ಒಬ್ಬಂಟಿಯಾಗಿ;
ಅದೇಕೋ ಮರಳಲ್ಲಿ ಮುಳುಗುವ ಭಯ,
ನೀರಲ್ಲಿ ಹುದುಗುವ ಅಂಜಿಕೆ;
ಅಲೆಗೆ ಎದೆಯೊಡ್ಡಿ
ಲವಣದ ಸತ್ವಕ್ಕೆ ವಾಕರಿಕೆ;
"ಯಾರ್ಯಾರ ಕಣ್ಣೀರೋ ಏನೋ?!!" ಎಂದು;

ಹೀಗೆ ಇಲ್ಲದವರ ಇಲ್ಲದಲ್ಲಿ ಊಹಿಸಿ
ನನ್ನಿಂದ ದೂರಾಗಿಸಿಕೊಂಡ ಪ್ರಸಂಗಗಳು
ತೀರಾ ನೆನ್ನೆಯಷ್ಟೇ ಜರುಗಿದ್ದು 
ಅಚ್ಚರಿ ಅಲ್ಲದಿದ್ದರೂ, ಆಘಾತಕಾರಿ!!

ದಣಿವಾದಾಗ ನೀರುಣಿಸಿದವರ
ವೇಷ ಭೂಷಣಗಳ ತೂಗಿ
ಅದೆಷ್ಟೋ ಬಾರಿ ಬಿಕ್ಕಳಿಸಿದ್ದುಂಟು;
ಕೆಲವೊಮ್ಮೆ ಡೊಂಕು ತಟ್ಟೆಯ ತುತ್ತು
ಗಂಟಲ ಸೇರದೆ,
ಮತ್ತೊಮ್ಮೆ ಮುಗ್ಧ ನಗುವಿಗೆ ಮರು-ಬಿಂಬವಾಗದೆ
ಅಹಂಕಾರಕ್ಕೆ ಬಲಿಯಾಗಿದ್ದೆ!!

ಈಗಲೂ ಚಾಚುವ ಕೈಗಳಿಗೇನೂ ಕುಂದಿಲ್ಲ,
ಚಿಟಿಕೆ ಹಾಕಿದರೆ ಹತ್ತಾರು;
ನೈತಿಕತೆಯ ಪ್ರಶ್ನಾರ್ಥಕ ಚಿನ್ಹೆ
ಎಲ್ಲರ ಅಂಗೈಯ್ಯ ಮೇಲೆ;
ಉತ್ತರಿಸಲು ನಾಲಗೆಯಿಲ್ಲ,
ಹಾಗೇ ಮುಂದಾಗಲು ಗುಂಡಿಗೆಯಿಲ್ಲ!!

ಸಣ್ಣ-ಪುಟ್ಟ ಸುಳಿ, ಚಂಡಮಾರುತಗಳ
ಹೇಗೋ ಎದುರಿಸಿದ್ದು ಗಂಡೆದೆಯ ಹೆಗ್ಗಳಿಕೆ;
ಎಲ್ಲ ಮುಗಿದಾದ ಮೇಲೆ
ಹಣೆ ಮುಟ್ಟಿ, ಬೆನ್ನು ತಟ್ಟಲಾರಿಲ್ಲವೆಂಬ
ವಿಪರೀತ ದುಃಖಕ್ಕೆ
ನನ್ನ ಕೊರಳ ನಾನೇ ಇಚುಕಿಕೊಳ್ಳುತ್ತೇನೆ!!

ನಾವಿಕನಿಲ್ಲದ ದೋಣಿಯ ಒಡಯ
ನಾನೆಂಬ ಮಾಹಿತಿ ಬಹಿರಂಗಗೊಂಡು,
ದಾಳಿಗೊಳಗಾಗಿ ಮುಕ್ಕಾಲು ಸತ್ತಿದ್ದೇನೆ;
ಮಿಕ್ಕ ಕಾಲು ಭಾಗಕ್ಕೆ ಪಶ್ಚಾತಾಪದ ಸೋಂಕು,
ಸಮತೋಲನ ಕಂಡುಕೊಳ್ಳಲಾದೀತೇ
ಒಡೆದ ಮನಸು?!!

-- ರತ್ನಸುತ

1 comment:

  1. ಒಮ್ಮೊಮ್ಮೆ ನಾವು ಕಳೆದುಹೋದೀವೇನೋ ಎನಿಸುವಷ್ಟು ಏಕತಾನತೆ ಮತ್ತು ಏಕಾಂತ ಆವರಿಸಿಕೊಂಡುಬಿಡುತ್ತದೆ!

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...