Tuesday 10 June 2014

ಉರುಟುಗಲ್ಲ ಪಯಣ

ದೂಡುತಿದೆ ನನ್ನ
ದಡದಿಂದ ದಡಕೆ
ಸಂಕುಚಿತ ಭಾವಗಳು
ಬಿಡುವಿಲ್ಲದಂತೆ;
ನನಗೋ ಒಡೆದು
ಒಂದಾಗೋ ಮನಸು,
ನೀರಲೆಯ ಮೇಲೆ
ನೊರೆ ಗುಳ್ಳೆಯಂತೆ!!

ಎಲ್ಲೋ ಜನಿಸಿ
ಎಲ್ಲೋ ಹರಿದು
ಕಡಲ ಸೇರುವಾಸೆ
ಸಂಪನ್ನವಾಯಿತು;
ಬೆರಳಿಗೂ ಒಂದು 
ಉಗುರಿನಷ್ಟರ ಅಡ್ಡಿ
ಬೆರೆತ ಒಡಲಲ್ಲೂ
ಆಂತರಿಕ ಅಂತರ!!

ಕಪ್ಪೆ ಚಿಪ್ಪುಗಳೊಡನೆ 
ತಳದಲ್ಲಿ ತಳಮಳಿಸಿ
ಜರಡಿ ಹಿಡಿದ ಬೆಳಕಿಗೆ
ಪಳಗಿದ ಒಡಲು;
ಪ್ರವಾಹದ ಸುಳಿಗೆ ಸಿಲುಕಿ
ನಿಸ್ಸಹಾಯಕನಂತೆ 
ಮರಳ ದಂಡೆಯ ಮೇಲೆ
ತಟಸ್ಥನಾಗುತ್ತೇನೆ!!

ಗಾಳಿಗೆ ಹಾರಿ
ಮಳೆಯಲ್ಲಿ ತೋಯ್ದು
ಬಿಸಿಲಿಗೆ ಕಮರಿ
ಇರುಳನ್ನು ಹೊದ್ದು
ಯಾರದ್ದೋ ಅಸ್ಪಷ್ಟ 
ಸ್ಪರ್ಶಕ್ಕೆ ಹಿಗ್ಗಿ 
ಮತ್ತೆ ಅನಾಥನನಿಸುವಾಗ
ಅಲೆಗಳ ಸಾಂತ್ವನ!!

ಯಾರಿಗೂ ಬೇಡದ
ಎಳೆಸಾದ ಮುತ್ತು-
ಮತ್ತು ನಾನು;
ಒಂದೇ ಚಿಪ್ಪಲ್ಲಿ
ಒಪ್ಪವಾಗಿದ್ದದ್ದು
ನೆನಪಿನ ಪುಟವಷ್ಟೇ;
ಅದ ಹೊರಳಿಸಿದ್ದೂ 
ಹಳೆ ನೆನಪು!!

ಓರೆ, ಕೋರೆಗಳು ನವಿರಾಗಿ
ಸಿಕ್ಕ-ಸಿಕ್ಕ ಹರಿವಿಗೆ ಸಿಕ್ಕಿ
ಉರುಟುಗಲ್ಲಾದವನು
ಕೊನೆಗೊಮ್ಮೆ 
ಎಲ್ಲೋ ಬಿಕರಿಯಾಗಿ
ಯಾವುದೋ ಮನೆಯ 
ಗಾಜಿನ ಪಂಜರದಿಂದ
ಪ್ರಪಂಚವ ಕಾಣುತ್ತಿದ್ದೇನೆ,
ಯಾರನ್ನೂ ದೂರದಂತೆ!!

                   -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...