Wednesday 25 June 2014

ಜೋಡು

ಕೊಂಡ ಚಪ್ಪಲಿಗಳು
ಉಂಗುಟವ ಕಚ್ಚಿದವು
ಮೆಟ್ಟಿ ತುಳಿದ ವೇಳೆ
ಹಸ್ತ ಬಿಗಿದು;
ಎಣ್ಣೆ ಸವರಲು ತಾನು
ಕಚ್ಚಿದೆಡೆಯಲಿ ಚೂರು
ಬಿಚ್ಚಿಕೊಳ್ಳುವುದಲ್ಲಿ
ಕೈಯ್ಯ ಮುಗಿದು!!

ತನ್ನ ಹೊಲೆದವನು
ತೊಡೆ ಕೊಟ್ಟ ಚಮ್ಮಾರ
ಕಣ್ಣಿಗೊತ್ತಿದ ಅಂದು
ಲಕ್ಷ್ಮಿಯೆಂದು;
ಕೊಂಡವನು ಕಿಸಿಯಿಂದ
ಕಂತಲೊಂದನು ಕಿತ್ತು
ಕಣ್ಣರಳಿಸಿದ ಕಾಲ
ನೋಡಿಕೊಂಡು!!

ಬಿಸಿಗಾಲ ಮುಗಿಸುತ್ತ
ಮಳೆಯಲ್ಲಿ ನೆನೆಸುತ್ತ
ಕಲ್ಲು ಮುಳ್ಳಾದರೂ
ಮುಲಾಜೇ ಇಲ್ಲ;
ತಳ ಚೂರು ಹರಿದಿತ್ತು
ಮೇಲ್ನೋಟ ಕೆಡದಂತೆ
ನಾಯಿ ಕಚ್ಚಲು ಯಾವ
ಮದ್ದೂ ಇಲ್ಲ!!

ತಂಪು ಏ.ಸಿ ಕೆಳಗೆ
ಮಂಪರಲಿ ಕಣ್ಬಿಡಲು
ಕಣ್ಣ ಕುಕ್ಕುವ ಅಂದ
ನವಿರು ಪಾದ;
ಬಿಗಿಯಾದರದು ಪಾಪ
ಮಿಗಿಲಾಗಿ ತುಸು ಕೋಪ
ಆಕೆ ಬೇಡನುವಾಗ
ಆರ್ತನಾದ!!

ತೊಡುವಾಗ ತೊಟ್ಟದ್ದು
ಬಿಡುವಾಗ ಬಿಟ್ಟದ್ದು
ಎರಡಕ್ಕೂ ಸಾಮ್ಯತೆ
ಇಲ್ಲವಂತೆ;
ಒಂದು ಹೋದರೆ ತನ್ನ
ಜೋಡಿ ಹೋದಂತೆ
ಮನೆ ಮೂಲೆ ಕಸವಾದರಿಲ್ಲ
ಚಿಂತೆ!!

ಸೀರೆಯಡಿ ಸೆರೆಯಾಗಿ
ಸೂರೆಗೊಳ್ಳುವ ತನ್ನ
ಯಾರು ಮೆಟ್ಟುವರೆಂಬ 
ಅರಿವು ಉಂಟು;
ಪಂಚೆ ಉಟ್ಟವರಲ್ಲಿ
ಬಂಟ ತಾ ಕಾಣುವನು
ಮನೆ ಹೊರಗೆ ಮುರಿಯದ
ದಿಟ್ಟ ನಂಟು!!

ದೇವರಿಗೆ ಬೇಡಾಗಿ
ಹಸಿದವರ ಕೂಳಾಗಿ
ಕಾವಲಲಿ ಉಳಿವುದು
ಎಂಥ ಬಾಳು;
ಸೋಕುವ ಪ್ರತಿ ಬಾರಿ
ನೋವನ್ನು ಸಹಿಸುವುದು
ಕ್ಷಮೆಯಾಚಿಸಲೇ ಬೇಕು
ದುಷ್ಟ ಕಾಲು!!

                 -- ರತ್ನಸುತ

1 comment:

  1. ಎಂತಹ ವಸ್ತುವನ್ನಾದರೂ ಮನ ಮುಟ್ಟುವ ಕವನವಾಗಿಸುವ ನಿಮ್ಮ ಕಾವ್ಯ ಶಕ್ತಿಗೆ ಉಧೋ... ಉಧೋ...

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...