Monday 30 June 2014

ಪಂಚರ್ ಅಂಗ್ಡಿ ಹುಡ್ಗ

ಜಿಡ್ಡು ಮುಖಕ್ಕೆ ಒಂದೇ ಬೊಗಸೆ ನೀರು
ನಿಮಿಷ ತಿಕ್ಕಿದರೆ ನೊರೆ ಹೊಮ್ಮುವ ಸೋಪು
ನಾರಿನಂಥ ಒರಟು ಅಂಗೈ
ಕತ್ತಿಗಾಗುವಷ್ಟು ನೀರಿಲ್ಲದ ತೂತು ಚೊಂಬು
ಬೆಳಗದ ಹಲ್ಲು, ಉಗುರಿನ ಕಪ್ಪು
ಮಾಸಲು ದೊಗಲೆ ಉಡುಪು
ಬ್ಲಾಕ್ ಅಂಡ್ ವೈಟ್ ಕಣ್ಣಿನಲಿ
ರಂಗು ರಂಗಿನ ಕನಸುಗಳ ಗುಂಗು!!

ಈ ಕಡೆ ಊಟದ ಬುತ್ತಿ ತೆಗೆದಂಗೆ
ಆ ಕಡೆ ಕಷ್ಟಮರ್ ಸೈಕಲ್ ಬೆಲ್ 
ಟ್ರಿಂಗ್... ಟ್ರಿಂಗ್... ಮೊಳಗಿಸಿ ಹೀಗಂದರು
"ಪಂಚರ್ ಆಗೈತೆ, ಓನರ್ ಇಲ್ವಾ"
"ಇಲ್ಲ ಅಣ್ಣ, ಊಟುಕ್ಕೋಗವ್ರೆ,
ಬಂದೆ ಇರಿ, ನಾನೇ ಸರಿ ಮಾಡ್ತೀನಿ"
ಡಬ್ಬಿ ಮುಚ್ಚಿಟ್ಟು ಹೋದೆ...

"ಏನೋ ಕುಳ್ಳ, ಹೊಸ್ಬಾನಾ?
ಸ್ಕೂಲಿಗ್ ಹೋಗೋ ಆಸೆ ಇಲ್ವಾ?
ಎಷ್ಟ್ ಕೊಡ್ತಾರೆ ಸಂಬ್ಳ?
ಬೀಡಿ ಸೇದ್ತೀಯಾ?
ಯಾವೂರು? ಎಲ್ಲಿ ಮನೆ?
ಒಬ್ನೆ ಮಗನಾ? ಅಕ್ಕಂದ್ರಾರಾರ ಔರ?
ಮಾತಾಡೋ!!".....

"ಆಯ್ತಣ್ಣ, ಹತ್ರುಪಾಯ್ ಕೊಡಿ"
ಮನ್ಸೆಲ್ಲಾ ಹೊಟ್ಟೆ ಮೇಲೆ;
ಕೈ ಮತ್ತೆ ಮಸಿಯಾಯ್ತು;
ಹತ್ರುಪಾಯ್ ಜೇಬಲ್ಲೈತೆ;
ಓನರ್ ಅಂಕಲ್ಗೆ ಗೊತ್ತಾದ್ರೆ?;
ಹೆಂಗೊತ್ತಾಯ್ತದೆ?;
ಹೆಂಗೋ ಗೊತ್ತಾಗ್ಬುಡ್ತದೆ!!

"ಊಟ ಯಾಕೋ ಹಳ್ಸೋಗದೆ,
ವಾಸ್ನೆ ಬತ್ತೈತ ನೋಡು"
"ನಾ ನಂಬಾಕಿಲ್ಲ, ಏನ್ ವಾಸ್ನೆ ಬತ್ತಾಯಿಲ್ಲ"
"ನೆಂಜ್ಕೊಳಾಕೆ ಏನಾರಾ ತರೊದಾ"
"ಬ್ಯಾಡ, ಮುಚ್ಕೊಂಡ್ ತಿನ್ನು"
ಅಔ.... ಅಔ.... (ತೇಗು)

ಮನಸೊಪ್ಪದೆ ಹತ್ರುಪಾಯನ್ನ
ಓನರ್ ಅಂಕಲ್ ಕೈಲಿಟ್ಟೆ;
ಜೇಬೆಲ್ಲಾ ಹುಡ್ಕಾಡಿ, "ಹ್ಮ್ ಹೋಗು" ಅಂದ್ರು;

ಪಕ್ದಲ್ಲೇ ಗೌರ್ಮೆಂಟ್ ಸ್ಕೂಲು;
ಮೂರೊಂದ್ಲಿ ಮೂರ್ ಮಗ್ಗಿ
ನಾನೂ ಕಲೀತಿದೀನಿ
ಒಂದು, ಎಳ್ಡು, ಮೂರು, ನಾಲ್ಕು...
"ಮುಚ್ಕೊಂಡ್ ಬೇಗ ಪಂಚರ್ ಹಾಕೋ"...

                                             -- ರತ್ನಸುತ

1 comment:

  1. ಬಾಲ ಕಾರ್ಮಿಕನ ಮನದಾಳಲನ್ನು ಬಿಚ್ಚಿಟ್ಟ ಕವನ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...