Tuesday 29 April 2014

ಮನಸಿಗೂ ಮನಸಾಗಿ

ನಿಜದಲ್ಲಿ ಸುಳ್ಳೊಂದ
ಹುಡುಕುವ ಬರದಲ್ಲಿ
ಸುಳ್ಳಿನ ಮೌಲ್ಯವ ಹೆಚ್ಚಿಸೋದೇ?
ನೀ ನನ್ನ ಗುಟ್ಟಾಗಿ
ಹುಡುಕಾಡುವ ವೇಳೆ
ರಟ್ಟಾದ ನಾ ನಿನಗೆ ಕಾಣದಾದೆ!!

ಭಯದಲ್ಲಿ ಬಲವಾಗಿ
ಒಲವಲ್ಲಿ ಬಿಗಿಯಾಗಿ
ದಿನವೆಲ್ಲ ಅನುಕಂಪದ ಯಾತನೆ;
ಸಮಯಕ್ಕೆ ಶರಣಾಗಿ
ನಡೆದಾಗ ಸರಿಯಾಗಿ
ಸಿಗುವುದೇ ಸರಿಮಾರ್ಗದ ಸೂಚನೆ!!

ಕಣ್ಣೀರ ತಳದಲ್ಲಿ
ಕಂಡದ್ದು ನಾವಲ್ಲ
ನಮ್ಮೊಳಗಿನ ನಾನು ನೀನಲ್ಲವೇ?
ಕೈಯ್ಯಲ್ಲಿ ಕೈಯ್ಯಿಟ್ಟು
ಕಣ್ಣನ್ನು ಬೆಸೆವಾಗ
ಮೌನಕ್ಕೂ ಹಾಡೊಂದ ಹೊಸೆದಿಲ್ಲವೇ?

ಹೊಸದಾಗಿ ನೂರಾಸೆ
ಮೈ ನೆರೆದುಕೊಂಡಾಗ
ತಡೆದದ್ದೇ ತಾನಲ್ಲಿ ತಪ್ಪಾಯಿತು;
ನೀನೆಲ್ಲೋ ನಾನೆಲ್ಲೋ 
ಉಸಿರಾಡಿಕೊಂಡಾಗ 
ಎದೆಗೂಡಲೂ ಬಿರುಕು ಉಂಟಾಯಿತು!!

ಬಂದದ್ದು ಬರಲೆಂದು
ಇದ್ದಾಗಲೇ ನಾವು
ತೆಕ್ಕೆಯಲಿ ಇನ್ನಷ್ಟು ಬಲವಾದೆವು;
ಒಂದಾದ ನಾವಿಂದು
ಸಿಡಿದು ಚೂರಾದಾಗ
ಬಿಡಿಯಾಗಿ ಇಷ್ಟಿಷ್ಟೇ ಬಲಿಯಾದೆವು!!

ಮತ್ತೊಮ್ಮೆ ಹೊಸದಾಗಿ
ಇದಕಿಂತ ಮಿಗಿಲಾಗಿ
ಬಾಳೋದು ಅನಿವಾರ್ಯವೇ ಆಗಿದೆ;
ಏನೆಲ್ಲ ಆಗಿಹುದು
ಎಲ್ಲವನೂ ಮರೆಯುತ
ಮನಸಾಗಲು ಮನಸು ಮುಂದಾಗಿದೆ!!

                                    -- ರತ್ನಸುತ

1 comment:

  1. ಭವಿತವ್ಯ ಬಂಗಾರವಾಗಲೆಂಬ ಆಶಯ ನೆಚ್ಚಿಗೆಯಾಯಿತು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...