Wednesday 9 April 2014

ಕಳೆದ ಮನಸಿಗೆ

ಕನಸುಗಳ ಬೆನ್ಹತ್ತಿ ಎಲ್ಲಿ ಕಳೆದೆ ಮನವೇ?!!
ನಿನ್ನವನು ನಾನಿಲ್ಲಿ ಒಂಟಿ ಜೋಡು;
ತಕ್ಷಣಕೆ ಹೊಳೆಯದ ಮುನಿದ ಸಾಲುಗಳಿವೆ
ಬೇಗ ಅಂದರೆ ಹೇಗೆ ಬರೆವೆ ಹಾಡು?!!

ಬಿತ್ತ ಬೀಜಗಳೆಲ್ಲ ಬೆಚ್ಚಗುಳಿದವು ಮಣ್ಣ-
-ಲ್ಹೂತುಕೊಂಡವು ಚಿಗುರಿನ್ಹಂಗು ತೊರೆದು;
ಹರಿಸಿಕೊಂಡರೂ ಸಾಲುತಿಲ್ಲ ಕಣ್ಣಿನ ಹನಿಗ-
-ಳೆಲ್ಲ ಬತ್ತಿದವಲ್ಲಿ ಅತ್ತು ಕರೆದು!!

ಗಲ್ಲಿ-ಗಲ್ಲಿಗಳಲ್ಲಿ ಬಿಟ್ಟ ಗುರುತುಗಳನ್ನು
ಪತ್ತೆ ಹಚ್ಚುವ ಗೋಜಲಾಟದಲ್ಲಿ
ಗೆದ್ದರಿಲ್ಲದ ಗಮ್ಯ, ಸೋತರಿಲ್ಲದ ಶೂಲ
ನೋವ ಹುಣ್ಣನು ಇರಿದು ಕೆದಕುವಲ್ಲಿ!!

ಕೆಟ್ಟು ನಾರುವ ಬೆವರ ಎಷ್ಟು ಹರಿಸಲಿ ಹೇಳು?!!
ಚಟ್ಟ ಕಟ್ಟುವ ಕಲೆಗೆ ಪಳಗಲಿಲ್ಲ;
ಸತ್ತ ನೆನಪಿನ ತುಂಬು ಶೋಕದಾಚರಣೆಯನು
ಇದ್ದ ಚೂರು ಮಾಡಗೊಡುತಲಿಲ್ಲ!!

ಏನು ಕಾರಣ ಕೊಡಲಿ ಕಾದ ಎದೆ ಮೇಗಡೆ
ಸುಡುಗಾಡಿನಂತೊಂದು ಮೌನವಿಹುದು?!!;
ಹರಿದ ಉಸಿರಿಗೆ ಒಂದು ಮಧ್ಯಂತರ ನೀಡಿ
ಆನಂತರ ಸಲಹೆ ಕೇಳಬಹುದು!!

ಮತ್ತೂ ಮಾಗಲಿ ಗಾಯ, ಎಲ್ಲೆ ಮೀರಲಿ ಸಹನೆ
ಆಗಿಸಲಿ ನನ್ನೊಡಲಲೊಂದು ಗುರುತು;
ಎಲ್ಲ ಮುಗಿದರೆ ಮತ್ತೆ ಹೊಸತು ಹುಡುಕಾಡುವೆ
ಆಳ ಯೋಚಿಸುತಲಿ ಮನದ ಕುರಿತು!!

                                              -- ರತ್ನಸುತ

1 comment:

  1. ಗೆಳೆಯ, ಇಂತಹ ಪದ ಪ್ರಯೋಗದಿಂದಲೇ ನಮ್ಮನ್ನು ಸದಾ ನೀವು ಗೆದ್ದದ್ದು:

    ಬಿತ್ತ ಬೀಜಗಳೆಲ್ಲ ಬೆಚ್ಚಗುಳಿದವು ಮಣ್ಣ-
    -ಲ್ಹೂತುಕೊಂಡವು ಚಿಗುರಿನ್ಹಂಗು ತೊರೆದು;
    ಹರಿಸಿಕೊಂಡರೂ ಸಾಲುತಿಲ್ಲ ಕಣ್ಣಿನ ಹನಿಗ-
    -ಳೆಲ್ಲ ಬತ್ತಿದವಲ್ಲಿ ಅತ್ತು ಕರೆದು’

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...