Thursday 24 April 2014

ನಿನಗೆ ಗೊತ್ತಿಲ್ಲದ್ದೇನಿದೆ... ?

ಬದುಕು ಇಷ್ಟೇ ಅನ್ನಿಸುವಷ್ಟರಲ್ಲಿ
ನೀ ನಗಬಾರದಿತ್ತು ಹಾಗೆ
ಮತ್ತೆ ಬದುಕುವಾಸೆ ತರಿಸುವ ಹಾಗೆ.... 

ಗೋರಿಗಳ ಮೇಲೆ ಚಿಗುರುವ ಗರಿಕೆ
ಎಲ್ಲ ಆಸೆಗಳನ್ನ ತ್ಯಜಿಸಿ ಬದುಕುವಾಗ
ಯಾತಕ್ಕಾಗಿ ಬೇಕಿತ್ತದಕೆ ಕೈ ಬೆರಳ ಸೋಂಕು?!!

ಪಾರ್ಥೇನಿಯಂ ಹೂಗಳನ್ನೂ ಕಟ್ಟಿ
ಹೂ ಮಾಲೆಯಾಗಿಸಿದ್ದು ನಿನ್ನ ಹಿರಿಮೆ,
ಕಟ್ಟಿ ಬಿದ್ದ ನಾನು 
ದಾರಕ್ಕೂ ಮುಖ ತೋರದೆ ಆಚೀಚೆ ತಿರುಗಿದ್ದೆ!!

ಪದ್ಮವಾಗಿ ನನ್ನ ಮುಚ್ಚಿಕೊಂಡ ನಿನಗೆ
ಬೇರಿನಿಂದಲೇ ಪ್ರೀತಿ ಎರೆಯುತ್ತೇನೆ;
ಕ್ಷಮಿಸು, ಮೇಲೆರಗಿ ರಾಡಿಯಾಗಿಸಲಾರೆ!!

ನೀ ಸವೆಸಿದಷ್ಟೂ ನನ್ನ ದಾರಿ ಪಕ್ವ
ನೀ ಸವಿಸುವುದೇ ಜೀವನ ಸತ್ವ
ಬೇರೆಲ್ಲ ಬೇರೆಯೇ; ನೀ ನನ್ನ ಭಾಗ!!

ಹೆಚ್ಚು ಬರೆಸಿ ಮೆಚ್ಚುಗೆಯಾಗುವ ನಿನ್ನ
ಬರೆದುಕೊಂಡೇ ಮೆಚ್ಚುತ್ತೇನೆ, ಅಥವ
ಬರೆಯದೆ ಕಣ್ಮುಚ್ಚಿ ಬೆಚ್ಚುತ್ತೇನೆ!!

ನಿಲ್ಲಿಸುವ ಸಾಹಸಕ್ಕೆ ಕೊಡಲಿ ಪೆಟ್ಟು,
ಕಾರಿದ ನೆತ್ತರೇ ಕೊನೆಯ ಸಾಲು
ಮುಂದೆ ಮತ್ತೋಂದು ಬೃಹತ್ ಯೋಜನೆ
ನಿನಗೆ ಗೊತ್ತಿಲ್ಲದ್ದೇನಿದೆ... 

                                        -- ರತ್ನಸುತ

1 comment:

  1. ಗೋರಿಯ ಮೇಲೆ ಚಿಗುರೋ ಗರಿಕೆಯು ಜೀವನ್ಮುಖಿಯ ಸಂಕೇತ.
    ಅಂತೆಯೇ ಪ್ರತಿ ಪ್ರೇಮದ ಚಿಗುರೂ ಸಹ...

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...