Tuesday 29 April 2014

ನವಿಲಾದವರು

ಅವರಿಬ್ಬರೂ ನಮ್ಮಂತೆಯೇ
ಲೋಕವ ಮರೆತ ಮರುಳರು;
ಮುಳ್ಳಿನ ತಂತಿಯ ದೇಹಕೆ ಸುತ್ತಿ
ನೆತ್ತರಲಿ ಗೀಚಿಕೊಳ್ಳುತ್ತ ನಕ್ಕವರು!!

ನೆನಪನ್ನೇ ಉಸಿರಾಡುತ್ತ ಜೀವಿಸಿ,
ಸ್ಮಶಾಣಕ್ಕೆ ಮೇಲ್ಸೇತುವೆ ನಿರ್ಮಿಸಿ,
ದಿನಾಲೂ ಹಾದು ಹೋಗುತ್ತಾರೆ
ಮಂದಹಾಸದ ಮಳೆಗರೆದು;

ಇರುಳುಗಳ ಚಿವುಟಿ, ತೊಟ್ಟಿಲ ತೂಗಿ
ತಾವಷ್ಟೇ ಎಚ್ಚರಿರುವರು
ಬೆಳಕಿಗೂ ಮಂಪರು ತರಿಸಿ
ಕನಸುಗಳ ಸ್ವಗತದಲಿ ಲೀನರಾಗುತ್ತ!!

ಬೇವಿನ ಕಹಿಯನ್ನೂ ಚಪ್ಪರಿಸಿ
ಸಕ್ಕರೆಗೆ ಸಂಕೋಚ ತರಿಸುವರು;
ಮೇಣದ ಹಾಗೆ ಕರಗುವರು
ಸಣ್ಣ-ಪುಟ್ಟ ವಿರಹದ ಕಿಡಿಗೆ!!

ಎಲ್ಲರೊಳಗೂ ತಾವಿಬ್ಬರು;
ಅವರವರೊಳಗೆ ಅವರ ನಡುವೆ
ಗಾಳಿ ನುಸುಳುವಷ್ಟೂ ಇಲ್ಲ
ಅವಕಾಶದ ಸಲುಗೆ!!

ಇಬ್ಬರೂ ನಾಚಿ ಗೀರಿಕೊಂಡ 
ನೆಲದ ಮಡಿಲಲ್ಲೀಗ ಗಿಣಿಯಾಕಾರ;
ಮಣ್ಣು ಯಾರನ್ನೂ ದೂರುವುದಿಲ್ಲವಂತೆ
ಬೆಚ್ಚಗುಳಿದರು ಅಲ್ಲೇ ನಮ್ಮಂತೆ!!

                                     -- ರತ್ನಸುತ

1 comment:

  1. ಇದು ನಿಜಾಂತ್ಯ ಕಲ್ಪಿಸುವ ಕವಿತೆ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...