ಅಂಬ್ಯುಲೆನ್ಸ್ ಗಡಿಯಲ್ಲಿ
ಹುಟ್ಟಿಕೊಂಡ ಕವಿತೆಯಿದು
ನಿಮಿಷ ದಾರಿ ಬಲು ದೂರ
ಪದಗಳೆಲ್ಲ ಬಲು ಭಾರ
ಒಳಗಿನವರ ನೋವ ಕತೆ
ಗಾಡಿ ಹೊರಗಿನವರ ಜೊತೆ
ಚೀರಿ ಹೇಳುವಂತೆ ಸದ್ದು
ಸೈರನ್ನು ಮಾಡುವುದು
ಸತ್ತೆವೆಂದವರು ಮತ್ತೆ
ಹುಟ್ಟಿ ಬರುವ ಜೀವಕೋಶ
ಇಲ್ಲೇ ಉಸಿರು ಬಿಟ್ಟವರ
ಕನಸುಗಳು ಸರ್ವನಾಶ
ಅಂಬ್ಯುಲೆನ್ಸ್ ಗಡಿಯಲ್ಲಿ
ಹುಟ್ಟಿಕೊಂಡ ಕವಿತೆಯಿದು
ನಿರ್ಭಾವುಕ ಚಾಲಕ
ಧೃತಿಗೆಡದೆ ಚಲಿಸುವನು
ಹಸಿರು, ಹಳದಿ, ಕೆಂಪು
ದಾರಿ ಬಿಟ್ಟು ಕೊಡಲೇ ಬೇಕು
ಮನೆಯಿಂದ ಆಸ್ಪತ್ರೆಗೆ
ಅಲ್ಲಿಂದ ಮತ್ತೆಲ್ಲಿಗೋ?
ಎಲ್ಲ ದಿಕ್ಕು ಸವೆಸಿ ಬಂದ
ಅನುಭವವಿದೆ ಗಾಲಿಗೆ
ಅಂಬ್ಯುಲೆನ್ಸ್ ಗಡಿಯಲ್ಲಿ
ಹುಟ್ಟಿಕೊಂಡ ಕವಿತೆಯಿದು
ಶವಯಾತ್ರೆಯ ಮುಗಿಸಿದಲ್ಲಿ
ಮಾಸಿರದ ಹೂವ ಕಂಪು
ಪ್ರಾಣ ಕೊಟ್ಟ ಪುಣ್ಯಕ್ಕೆ
ಆಗಾಗ ಸಿಕ್ಕ ಬಿರುದು
ದಾರಿ ಮಾಡಿ ಕೊಟ್ಟವರಿಗೆ
ದೊಡ್ಡ ಹೃದಯವಿರಬಹುದು
ರಾಜಕಾರಣಿಗಳು
ಯಮಧೂತರ ಕರೆತರಬಹುದು
ಅಂಬ್ಯುಲೆನ್ಸ್ ಗಡಿಯಲ್ಲಿ
ಹುಟ್ಟಿಕೊಂಡ ಕವಿತೆಯಿದು
ಸ್ಟ್ರೆಚರ್ರನು ಮೆಲ್ಲ ಇಳಿಸಿ
ತನ್ನವರೇ ಎಂಬಂತೆ
ಎಚ್ಚರ ವಹಿಸುವ ಚಾಲಕ
ಹೆಗಲನ್ನೂ ಕೊಟ್ಟ
ಬಕ್ಸೀಸು ಬೇಡುವುದು
ಆತನ ಹಸಿದ ಜೇಬು
ಕೊಡುವವರು ಕೊಟ್ಟಾರು
ಕೇಳುವುದನೇ ಬಿಟ್ಟ
ಅಂಬ್ಯುಲೆನ್ಸ್ ಗಡಿಯಲ್ಲಿ
ಹುಟ್ಟಿಕೊಂಡ ಕವಿತೆಯಿದು
ಹೆಚ್ಚಾದವು ರಸ್ತೆ ತುಂಬ
ಸದಾ ಅದೇ ಅವಸರ
ಯಾರಿಗೇನು ಎಂಬುದು
ಯಾರಿಗೂ ತಿಳಿಯದ ಗುಟ್ಟು
ಗುಡಿಗಳಿಗಷ್ಟೇ ಮಡಿ
ಮಸಣಕ್ಕದರರಿವಿಲ್ಲ
ತುರ್ತು ಸಮಯದಲ್ಲಾರಿಗೂ
ಮೈಲಿಗೆ ಅಂಟುವುದಿಲ್ಲ
ಅಂಬ್ಯುಲೆನ್ಸ್ ಗಡಿಯಲ್ಲಿ
ಹುಟ್ಟಿಕೊಂಡ ಕವಿತೆಯಿದು..
No comments:
Post a Comment