Tuesday, 15 July 2014

ಮರುಭೂಮಿ ಪಯಣ

ಮರಳು ಯಾಮಾರಿಸುತ್ತಿದೆ
ಬಿಟ್ಟ ಹೆಜ್ಜೆಗಳ ನುಂಗಿ;
ಈಗಿದ್ದ ದಾರಿಯ ಇಲ್ಲವಾಗಿಸಿ
ಮತ್ತೊಂದರ ಸೃಷ್ಟಿಸುತ್ತಿದೆ
ಹಿಂಬಾಲಕರಿಗಾವ ಸುಳುವನ್ನೂ
ಬಿಟ್ಟುಗೊಡದಂತೆ!!

ನಾ ಮಲಗಿದ ಜಾಗದಲ್ಲೇ
ಜೀವ ಸಮಾಧಿ ನಿರ್ಮಿಸಿದ
ಅಮಾನುಷ ಮರಳ ಗುಡ್ಡೆಗೆ
ಗಾಳಿಯ ವಿಪರೀತ ಬೆಂಬಲ;
ದಿಬ್ಬದ ಮೆಲೆ ನೆಟ್ಟ 
ವಿಜಯ ಪತಾಕೆ
ನೆಲಕ್ಕುರುಳಿ ಮಣ್ಣು ಮುಕ್ಕುತ್ತಿದೆ!!

ನೆತ್ತಿ ಸುಡುವ ಸೂರ್ಯನಿಗೆ
ಬೆಂಗಾವಲಾದ ನೀಲಿ ಆಕಾಶ
ಇದ್ದೆಲ್ಲ ಮೋಡಗಳನ್ನೂ ಹಿಂಡಿ
ದಣಿದವನಿಗೆ ಒದಗಿಸುತ್ತಿತ್ತು;
ಇತ್ತ ನನ್ನ ಹೊತ್ತ ಭೂಮಿಗೆ
ತೊಟ್ಟನ್ನೂ ಒಪ್ಪಿಸದಂತೆ!!

ಕಳ್ಳಿ ಗಿಡಗಳ ಮಾಂಸ
ಅದೆಷ್ಟು ಚೈತನ್ಯದಾಯಕ?!!
ಮಸಣದ ಪಾಲಾದರೂ
ಜೀವಂತಿಕೆ ಕಾಪಾಡಿಕೊಂಡ ಅವು
ನಿಸ್ವಾರ್ಥ ಜೀವಿಗಳು;
ಆತ್ಮ ರಕ್ಷಣೆಗೆ ಬೆಳೆಸಿಕೊಂಡ
ಮುಳ್ಳುಗಳ ಹೊರತು ಪಡಿಸಿ!!

ಹಣೆಗೆ ಅಂಗೈಯ್ಯನಿಟ್ಟು
ದೂರ-ದೂರ ನೋಡಿದಷ್ಟೂ
ಕಂಡುಕೊಂಡ ದಾರಿಗಳನೇಕ;
ಊರುಗೋಲಿಗೆ ಗೆಜ್ಜೆ ಕಟ್ಟಿ
ಹೆಜ್ಜೆಜ್ಜೆಗೂ ಎಚ್ಚರಗೊಳ್ಳೂತ್ತೇನೆ
ನಿರಾವಲಂಬಿತನಾಗಿ!!

ಕಣ್ಣಿನ ಪೊರೆಯಾಚೆ ಕಂಡ
ವಿಶಾಲ ಪ್ರಪಂಚಕ್ಕೆ 
ನನ್ನ ತತ್ವ ನುಡಿ
ಮಸಿ ಬಳಿದ ಹಾಳೆ;
ಎಂದಾದರೊಮ್ಮೆ ಕಸುವಾಗುವಂತೆ
ಇಲ್ಲ ಕಸವಾಗುವಂತೆ!!

                              -- ರತ್ನಸುತ

ಅಂತಿಮ ತಿರುವು

ಹೊರೆ ಹೊತ್ತ ಹೆಗಲ ಮೇಲೆ
ಚಾಚಿ ಮಲಗಿದವರ
ನೆರವೇರದ ಕನಸುಗಳ ಭಾರ;
ಮಿಥ್ಯ ಲೋಕದೊಳಗೆ
ಸತ್ಯ ಶೋಧದ ನಿಮಿತ್ತ
ಕಣ್ಣು ಮುಚ್ಚಿ ಸಾಗಿದವರ
ಕೆಸರ ಹೆಜ್ಜೆಯ ಸ್ವಚ್ಛಗೊಳಿಸಿ
ಕೈಗಳ ಎದೆಗಾನಿಸಿದೆವು!!

ಹೆಬ್ಬೆಟ್ಟು, ಹುಟ್ಟು ಮಚ್ಚೆ ಗುರುತು
ಎತ್ತರ, ತೂಕ, ಸುತ್ತಳತೆಗಳ
ದಾಖಲಿಸಿ ಪಡೆದ
ಗುರುತಿನ ಚೀಟಿ ಇರಲಿ,
ಹೊರಟ ಗುರಿತಾಣದ
ಲಿಖಿತ ವಿಳಾಸವನ್ನೂ ಜೀಬಿಗಿರಿಸದೆ
ಬೆತ್ತಲು ದೇಹಕ್ಕೆ ತಿಳಿ ಬಟ್ಟೆ ಸುತ್ತಿ
ದತ್ತಿ ಹತ್ತಿಯ ಮೂಗಿಗಿಟ್ಟೆವು!!

ಎಲ್ಲಿದ್ದವೋ ಹಸಿದ ಕಾಗೆಗಳು;
ಹಿಡಿ ಅನ್ನಕ್ಕೂ ಗತಿ ಇಲ್ಲದವಂತೆ
ಕಾಲು-ತಲೆ ಭಾಗವನ್ನ
ಹೆಕ್ಕಿ, ಕುಕ್ಕಿ ತಿನ್ನುವಾಗ
ಒಳಗಿನ ದೇವರಿಗೆ ಎಚ್ಚರವಾಗದಿದ್ದರೆ
ಅದೇ ಹೂತವರ ಪುಣ್ಯ;
ಕಲ್ಲು ಕಲ್ಲಿಗೂ ಇಲ್ಲಿ ಹೆಸರಿದೆ,
ಚಿಗುರೋ ಮುಳ್ಳಿಗೂ ಕ್ಷಮೆಯಿದೆ!!

ಒಮ್ಮೆ ಎದೆಗೆ ಕಿವಿಯೊಡ್ಡಿ
ಕೊನೆ ಮಾತುಗಳ ಆಲಿಸುವ;
ಛೇ ತಗೆ, ಮೂರ್ಖತ್ವದ ಪರಮಾವದಿ!!
ನೆರಳು ದಾಟಿ ಹೊರಟ ಮೇಲೆ
ಬಾಗಿಲನೇನು ಕೇಳುವುದು
ಹೊಸಲಿನ ಪಿಸುಗುಟ್ಟುಗಳ?
ಸುಮ್ಮನಿರುವುದೇ ಲೇಸು
ತನ್ನ ಪಾಡಿಗೆ ತನ್ನ ಬಿಟ್ಟು!!

ಆಗಾಗ ತೂಕಡಿಸಿಯೂ
ಮಲಗದೆ ತಲೆ ಕಾಯ್ದ ಹಣತೆ
ಈಗಲೂ ಬೆಳಗುತಿದೆ
ಕತ್ತಲ ಹಜಾರವ ದಿಟ್ಟಿಸುತ್ತ;
ಚಳಿ ಬಿಡಿಸಿಕೊಂಡ ಒಲೆ
ಚಿಮಣಿಗೂ ಜೀವ ನೀಡಿತು,
ಗಂಜಿ ಉಕ್ಕಿ ಚೀರುತಿದೆ
ಜೋಡಿ ಒಲೆಯೆಡೆಗೆ ಕೆಂಡವ ಸರಿಸಲು!!

                                     -- ರತ್ನಸುತ

ಸಾವಿನ ಗುಟ್ಟು

ಗುಟ್ಟು ರಟ್ಟಾಗುವ ವೇಳೆ
ಬಯಲೆಲ್ಲ ಕಣ್ಣೀರ ಸುದ್ದಿ
ನಾನು ನನ್ನವುಗಳೆಲ್ಲ
ತಾಜಾ ಹೂಗಳ ಕೆಳಗೆ ರದ್ದಿ

ಅಲ್ಲಿ ಗೋಳಿಟ್ಟ ಹೃದಯಗಳಿಗೆ
ಸಾಂಬ್ರಾಣಿಯ ಹೊಗೆ
ಊದಿಕೊಂಡ ಕಣ್ಗುಡ್ಡೆಗಳೊಳಗಿಂದ
ನೆನಪುಗಳ ಒದ್ದೆ ಪಯಣ

ನೀಳ ಮೌನದ ನಡುವೆ
ಆಗಾಗ ಇಣುಕಿ ಜಾರಿಕೊಳ್ಳುವ
ಬಿಕ್ಕಳಿಕೆ ಸದ್ದು;
ತುಟಿಗಳೇನೂ ನುಡಿಯದೆ 
ಎಲ್ಲವೂ ನುಡಿದಂತೆ!!

ಮಣ್ಣಿನ ವ್ಯಾಮೋಹಕೆ
ಕೊನೆಗೂ ತೆರೆ ಎಳೆದ ಮಣ್ಣು;
ಉಸಿರಿನ ತಕರಾರೂ ಇಲ್ಲದ
ಚಿರ ನಿದ್ದೆಗೆ 
ಸಹಸ್ರ ಕಾವಲಿನ ಕಣ್ಣು!!

ಹೆಸರಿಗೂ ಅಲ್ಪ ವಿರಾಮ;
ಜನ್ಮಗಳ ಪಾಲಿನಲ್ಲಿ
ಒಂದು ಗೀಟಿಗೆ ಕಾಟು ಹೊಡೆದು
ಮುಂದೊಂದರ ತಯಾರಿಗೆ
ನಾಂದಿ ಹಾಡಿದ ಜವರಾಯ!!

ಸುಕ್ಕುಗಟ್ಟಿದ ಕೆನ್ನೆಗೆ
ಬೊಗಸೆ ನೀರ ಪ್ರೋಕ್ಷಣೆ
ನಾಳೆಗಳ ಕೌತುಕಕೆ
ತೊರೆದವರ ಪಟವ ಹೊತ್ತ
ತಡೆ ಗೋಡೆಯ ವೀಕ್ಷಣೆ!!

                    -- ರತ್ನಸುತ

ಚಿತೆ ಬೆಂಕಿ ಬೆಳಕಲ್ಲಿ

ಚೂರೇ ತೆಗೆದ ಕಿಟಕಿಯ ನೆರವಿಗೆ
ತಂಗಾಳಿಯ ಪಿಸು ಮಾತಿನ ನಮನ
ತಾರೀಕನು ಧಿಕ್ಕರಿಸಿ ಹೊರಳಿದೆ
ಪಂಚಾಂಗಕೆ ಮತ್ತೆಲ್ಲಿಯೋ ಗಮನ

ಬಾಚಿ ಉದುರಿದ ಕುರುಳಿನ ಸುರುಳಿಯ
ಎರಡು ಗೋಡೆಯ ಮೂಲೆ ಹಿಡಿದು
ಪೂರ್ತಿ ಮುಗಿಸದ ಪುಸ್ತಕ ಹಾಳೆಯ
ವಜೆಯಂತೆ ಕನ್ನಡಕ ತಡೆದು

ಪಲ್ಲಂಗದ ಪಕ್ಕದ ಕಾಗದಕೆ
ಹಸ್ತಾಕ್ಷರ ಬೀಳದೆ ಒದ್ದಾಟ
ಬೇಡದ ಪದಗಳ ಬರಹವ ಖಂಡಿಸಿ
ಒಳಗೊಳಗೆ ತುಸು ತಿಳಿ ಗುದ್ದಾಟ

ಪರದೆಯ ಸರಿಸುವ ಸರಸದ ಆಟಕೆ
ಕಿಟಕಿ ಕೋಲುಗಳ ತಡೆಯಾಜ್ಞೆ
ಕನ್ನಡಿಯೊಳಗೆ ಸಿನಿಮಾ ತಾರೆಯ
ಎಂದೂ ನಿಲ್ಲದ ಪೋಲಿ ಸನ್ನೆ

ಎಣ್ಣೆ ಬಿಡಿಸಿದ ಬಾಗಿಲ ಅಳಲಿಗೆ
ನಿದ್ದೆಗೆ ತಡೆಯೊಡ್ಡುವ ಕೋಪ
ಸ್ವಪ್ನಗಳೆಲ್ಲವೂ ಸಾವನಪ್ಪಲು
ಹಗಲುಗನಸುಗಳ ಹಿಡಿ ಶಾಪ

ರೆಪ್ಪೆಯ ಸೋಕಿದ ಬೆಳಕಿನ ಕಿರಣ
ಹೆಣಗಳ ಚಿತೆಗೆ ಕೊಳ್ಳಿಯನಿಟ್ಟೋ
ಹಿಂದೆಯೇ ನೀಗಿತು ಹಾಳೆಯ ಹಸಿವು
ಇರಿಸಿದೆ ಜೇಬಿಗೆ ಮಡಿಸಿಟ್ಟು!!

                                 -- ರತ್ನಸುತ

ನಾ ಹುಚ್ಚನಲ್ಲ

ಹೆಜ್ಜೆಜ್ಜೆಯೂ ಭೂಮಿಯ ಕೊನೆಯೆಂದು
ಆತಂಕಗೊಂಡ ಮನಸಿನ ಹಿಂದೆ
ಅದಕ್ಕೂ ಮಿಗಿಲಾಗಿ ಭೀತಿಗೊಳಗಾದ
ನೆರಳಿದೆಯೆಂಬುದು ಅರಿವಿಗೆ ಬರುವ ಮುನ್ನ
ಎಡವಿಕೊಂಡ ಉಂಗುಟದ ಉಗುರು
ಪತ್ತೆ ಹಚ್ಚಲಾರದಷ್ಟು ದೂರ ಹಾರಿತ್ತು;
ತುಳಿದ ನೆರಳಿಗೂ ಅರ್ಥವಾಗಲಿಲ್ಲ
ಬೆರಳ ನೋವು, ತನ್ನ ಪೇಚಾಟದ ನಡುವೆ!!

ಭೂಮಿಗೆ ಕೊನೆಯಿಲ್ಲವೆಂದರಿಯಲು
ಒಂದಿಡಿ ಸುತ್ತು ಸುತ್ತಿ ಬರಬೇಕು;
ಅರ್ಧ ಆಯಸ್ಸು ಕಳೆದು ಅರಿತ ಸತ್ಯವ
ಸಾರ ಹೊರಟರೆ, ನಿರೂಪಿಸು ಎನ್ನುತ್ತಾರೆ;
ನಿರೂಪಿಸಲು ಮತ್ತೊಮ್ಮೆ ಸುತ್ತಬೇಕು
ಅವರೆಲ್ಲರನ್ನೂ ಬೆನ್ನಿಗೆ ಕಟ್ಟಿಕೊಂಡು;
ಸುಮ್ಮನಿದ್ದಿದ್ದರೆ ಸಾಕಾಗಿತ್ತು,
ಇದೀಗ ಮಾರ್ಗ ಮಧ್ಯೆ ಮುಕ್ಕಾಲು ಸತ್ತಿದ್ದೇನೆ!!

ಕುಷ್ಟ ರೋಗಿಯೊಬ್ಬನ ಹೆಣವ
ಹೂಳಲೊಲ್ಲದೆ, ಸುಡಲೊಲ್ಲದೆ
ಭೂಮಿ ಅಂಚಿಗಿ ಕೊಂಡೊಯ್ದು
ದಬ್ಬಲೆಂದು ಹೊರಟಿತ್ತು ಮೆರವಣಿಗೆ;
ಸಿಕ್ಕ ಸಿಕ್ಕವರಿಗೆ ಮತ್ತೆ ಸಿಕ್ಕು
ದಾರಿ ತೋರಿದವರೊಳಗೆ ನಾನೂ ಒಬ್ಬ;
ಮತ್ತೆ ಸಿಕ್ಕರೆ ತಡೆದು ನಿಲ್ಲಿಸಬೇಕು
ಹೆಣವ ಹೊತ್ತವರು ಹೆಣವಾಗುವ ಮುನ್ನ!!

ಧರ್ಮ ಭ್ರಷ್ಟನೆಂದು ಗಲ್ಲಿಗೇರಿಸಿದ
ಅದೆಷ್ಟೋ ತತ್ವಜ್ಞಾನಿಗಳ ಸ್ಮರಿಸುತ್ತ
ಮತ್ತೆ ಮತ್ತೆ ಸಾರುತ್ತೇನೆ
"ಭೂಮಿ ದುಂಡಾಗಿದೆ"
"ಅಸ್ಥಿರ ಸೂರ್ಯನ ಸುತ್ತ 
ತನ್ನ ಕಕ್ಷೆಯಲ್ಲಿ ಪರಿಭ್ರಮಿಸುತ್ತ
ಉರುಳುತ್ತ ಹಗಲಿರುಳು
ಕಣ್ಣಾಮುಚ್ಚಾಲೆ ಆಟವಾಡುತ್ತ!!

ನಾ ಅರಿತ ಸತ್ಯ ತಡವಾಯಿತೇ?!!
ಜಗ ಜಾಹೀರಾದ ಸುದ್ದಿಯ ಹೊತ್ತು
ಭೂಮಿಯ ಸುತ್ತಿ ಸುಸ್ತಾಗಿದ್ದೇನೆ
ಉಂಗುಟದ ಉಗುರ ಹುಡುಕುವ ನೆಪದಲ್ಲಿ;
ಎಲ್ಲರೂ ನನ್ನ ಹುಚ್ಚನೆಂದರೂ
"ಹುಚ್ಚನಿಗೆ ಮಾತ್ರ ಜಗವೇ ಹುಚ್ಚರ ಸಂತೆ,
ತನ್ನೊಬ್ಬನ ಬಿಟ್ಟು;"
ಹೌದು, ನಾ ಹುಚ್ಚನಲ್ಲ!!

ಎಡವಿದ ಜಾಗಕ್ಕೇ 
ಇನ್ನೆಷ್ಟು ಬಾರಿ ಪೆಟ್ಟಾಗುವುದೋ!!
ಸುಮ್ಮನೆ ಒಂದು ಮೂಲೆ ಹಿಡಿದು
ತಟಸ್ಥನಾಗಬೇಕನಿಸುವಾಗಲೇ
ಒಬ್ಬ ಹುರುಳಿಲ್ಲದೆ ವಾದಿಸುತ್ತಾನೆ
"ಭೂಮಿಗೆ ಕೊನೆಯುಂಟು"
ಕಾಲಿಗೆ ಚಕ್ರ ಕಟ್ಟಿಕೊಂಡು
ಮತ್ತೆ ಹುಚ್ಚು ನಡಿಗೆಯಿಟ್ಟೆ!!

                       -- ರತ್ನಸುತ

ಇನ್ ಲವ್ ವಿತ್ ಅ ವಾಂಪೈಯರ್

ಕೃಷ್ಣಮೃಗದ ಕೊಂಬಿನಲ್ಲಿ
ಇರಿದೆಯಲ್ಲ ಬೆನ್ನಿಗೆ
ರಕ್ತಪಾತ ಕಂಡು ಮೂರ್ಛೆ
ಹೋಗಬೇಡ ಮಲ್ಲಿಗೆ!!

ಸಂಜೆ ಸತ್ತ ಬೆಳಕಿನಲ್ಲಿ
ಏನು ನಿನ್ನ ಅಬ್ಬರ
ಸಾವ ಉಣಿಸುವಾಗ ನಿನ್ನ
ಮುಖದಲೇನು ಆಧರ!!

ಒಲವ ಸರೋವರದಲೊಮ್ಮೆ
ನಿನ್ನ ಅದ್ದಿ ನೋಡಲೇ?
ಕೆಂಪು ಮೆತ್ತಿ ಚಂದವಲ್ಲ
ಹಾಲಗೆನ್ನೆ ಕೋಮಲೆ!!

ನಿನ್ನ ಸಿಟ್ಟು-ಸೆಡವು ಎಲ್ಲ
ಚಿಟಿಕೆ ಘಾಟು ಮಜ್ಜಿಗೆ
ಹಿತವ ನೀಡುವಂಥ ಉರಿ
ಉದರ ತಂಪಿನೊಟ್ಟಿಗೆ!!

ಕೋರೆ ಹಲ್ಲಿನಲ್ಲೂ ನೀನು
ಅಪ್ರತಿಮ ಸುಂದರಿ
ನೆತ್ತರೀರುವಾಗ ಕಾಣಬೇಕು
ನಿನ್ನ ವೈಖರಿ!!

ಪ್ರೇತ ಅನಿಸುತೀಯ ನೀನು
ಭೀತರಾದ ಮಂದಿಗೆ
ಪ್ರೀತಿ ಹೊರತು ಕಾಣದೇನು
ಈ ನನ್ನ ಕಣ್ಣಿಗೆ!!

ಹೃದಯ ನಿನ್ನದಾದಮೇಲೆ
ನೆತ್ತರೂನೂ ನಿನ್ನದು
ನಿನ್ನ ಸೇರಿ, ಪ್ರಾಣ ಬಿಡುವ
ಭಾಗ್ಯವಷ್ಟೇ ನನ್ನದು!!

                    -- ರತ್ನಸುತ

ಸೂತಕದ ಕವನ

ಹರಿವ ನೀರಿಗೆ
ಕಾಗದದ ದೋಣಿ ಮಾಡಿ
ಹರಿ ಬಿಡುವ ಮುನ್ನ
ಬೇಲಿ ಹೂಗಳ ಕಿತ್ತು
ಒಳಗೆಲ್ಲ ಹರಡಿಕೊಂಡೆ;
ಬರೆದುಕೊಂಡದ್ದು ಅಳಿವನಕ
ಯಾರಿಗೂ ಕಾಣದಿರಲೆಂದು!!

ಇದನರಿತ 
ಹೂವೊಳಡಗಿದ್ದ ಇರುವೆ
ಎಲ್ಲವನ್ನೂ ಬಯಲಿಗೆಳೆವ
ಹಂಬಲ ಹೊತ್ತು
ಓದುತ್ತಾ ಸತ್ತದ್ದು
ಪಾಪ ಆ ಹೂವಿಗೂ ಗೊತ್ತಾಯಿತು!!

ಮೊದಲೇ ಮರುಗಿದ
ಮೈಲಿಗೆ ಮೈಯ್ಯ ತಾನು
ಮತ್ತೊಂದರ ಸಾವಿಗೆ
ಸಿಂಗಾರಗೊಂಡಿದೆಯೆಂದರಿತು
ಹೂವಿಗೂ ಹೃದಯಾಘಾತ!!

ಶವಗಳ ಸಾಗಾಣಿಕೆ ನಡುವೆ
ಒಂದು ಸುಳಿಯಾದರೂ ಸಿಕ್ಕಿದ್ದರೆ
ತಳ ಸೇರುತಿತ್ತು ದೋಣಿ,
ದೊರೆವುದಾಗಿತ್ತು ಶಾಂತಿ
ಅಳಿವಿನಂಚಿನೆಲ್ಲಕ್ಕೂ!!

ನಿನ್ನ ಕೈ ಸೇರಬಾರದಿತ್ತಷ್ಟೇ ಹುಡುಗಿ!!
ಆದರೆ, ನೀನಾಗೇ ಹುಡುಕಿ ಬಂದೆ;

ಮೊದಲು ಇರುವೆ ಸತ್ತಿದ್ದ
ಹೂವ ಮುಡಿಗೇರಿಸಿಕೊಂಡು
ನೀನೂ ಮಡಿ ತಪ್ಪಿದವಳು,
ಆ ನಂತರ ಕಾಗದ ಬಿಡಿಸಿ
ಅಳಿದುಳಿದಕ್ಷರ ಓದುತ್ತ ಹೋದೆ;

ಕೊನೆಗೆ,
ಕೊನೆಯುಸಿರ ಸವರಿ ಕೂತು
ನನ್ನ ಮನಸಲ್ಲಿ
ಸೂತಕದ ಛಾಯೆ ಬಿಡಿಸಿ
ಹೆಣವಾಗಿಸಿದೆ ನನ್ನ!!

                        -- ರತ್ನಸುತ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...