Tuesday, 15 July 2014

ನಲ್ಮೆಯ ಬದುಕಿಗೆ

ಕ್ಷಮೆಯಿಲ್ಲದ ಸಾಲು ಸಾಲು 
ತಪ್ಪುಗಳ ಮಾಡಿ ಬಂದೆ
ಕೊನೆಯದಾಗಿ ನಿನ್ನ ಪ್ರೀತಿ
ಪಾಲು ಕೇಳಲು;
ಆಸೆ ತುಂಬಿ ಹೃದಯವನ್ನೇ
ಬಗಿದು ಪಾದದಡಿಯಲಿಟ್ಟೆ
ಒಪ್ಪಿಸೋಕೆ ತಂದ ಪ್ರಾಣ
ನಿನ್ನದಾಗಲು!!

ನೆತ್ತರಲ್ಲಿ ಬರೆದ ಓಲೆ 
ಕೊಟ್ಟರಿಲ್ಲ ಯಾವ ಭಾವ
ಉಸಿರ ಕೊಟ್ಟು ಗೀಚಿಕೊಂಡೆ
ಓದ ಬೇಕಿದೆ;
ಸಂತೆ ದಾರಿ ಮಧ್ಯೆ ಒಮ್ಮೆ
ಎಲ್ಲರನ್ನೂ ತಪ್ಪಿಸುತ್ತ
ನಿನ್ನ ತಲುಪೋ ಹಾಗೆ ಮೆಲ್ಲ
ಕೂಗ ಬೇಕಿದೆ!!

ನಿನ್ನ ಮಾತು ಜಾರೋ ಮುನ್ನ
ನನ್ನ ಅರಿವಿನಲ್ಲಿ ಹರಿದು
ಸಿಹಿಯೋ, ಕಹಿಯೋ ಮುಂಚೆ ಎಲ್ಲ
ಅರಿಯ ಬೇಕಿದೆ;
ರೂಪಕೊಂದು ರೂಪಕವ
ಹುಡುಕಿ ಹುಡುಕಿ ಸೋತು ಹೋದೆ
ನಿನಗೆ ನೀನೇ ಸಾಟಿಯೆಂದು
ಬರೆಯ ಬೇಕಿದೆ!!

ಕಣ್ಣ ಅಕ್ಷಯದಲಿ ಒಮ್ಮೆ
ಸುಧೆಯ ಒಳೆಗೆ ಮುಳುಗುವಂತೆ
ನನ್ನ ಬಿಂಬ ಕಾಣುವಾಸೆ
ಎದುರು ಬಂದರೆ;
ಯಾವ ಅಡ್ಡಿ ಇಲ್ಲದಂತೆ
ಸಾಗುತಿಹುದು ಬಾಳ ಪಯಣ
ಎದುರು ಕಾದೆ ಎದುರಿಸೋಕೆ
ಮಧುರ ತೊಂದರೆ!!

ನಲ್ಮೆಯೊಂದೇ ಸಾಕು ನಮಗೆ
ಹೆಮ್ಮೆ ಬಾಳು ಸಾಗಿಸೋಕೆ
ಖಾಲಿ ಕಿಸೆಯ ಕಂಡು ಸಿಡುಕು
ಮೂಡ ಬಾರದು;
ನಿನ್ನ ಪೆಟ್ಟು, ನನ್ನ ಮುದ್ದು
ನಾಲ್ಕು ಗೋಡೆ ನಡುವೆ ಇರಲಿ
ಯಾವ ಕಾರಣಕ್ಕೂ ಆಚೆ
ಇಣುಕ ಬಾರದು!!

                         -- ರತ್ನಸುತ

ಪುನಃ ಬದುಕಲಿ

ಕ್ಷುಲ್ಲಕ ಕಾರಣಕೆ ಉಂಟಾದ ಅಂತರಕೆ
ಪೀಠಿಕೆ ನೀಡುವೆನು ಬರಲು ಬಳಿಗೆ
ಸತ್ತು ಕಟ್ಟಿದ ನಮ್ಮ ಪ್ರೇಮ ಗೋರಿಯ ಮೇಲೆ
ತೆರೆದುಕೊಂಡರೆ ಒಲಿತು ಹೂವ ಮಳಿಗೆ!!

ಇದ್ದು ಹೇಳದ ಮಾತು, ಕದ್ದು ಕೇಳಿದವಲ್ಲಿ
ಯಾವೊದೂ ಮುದ ನೀಡುತಿಲ್ಲವೇಕೆ?
ನೆರಳ ದೂರಾಗಿಸಿದ ಒಡಲ ಬೇಗುದಿಯಲ್ಲಿ
ಜೀವಂತ ಕಣಗಳನು ಹುಡುಕ ಬೇಕೆ?!!

ನಂಬಿದ ತೋಳುಗಳ ಮದ ಇಳಿಸಲೇ ಬೇಕು
ವಿಷಕಾರಿ ವಿಷಯಗಳ ಹಂಚಿಕೊಂಡು
ಕೊನೆವರೆಗೂ ನಕ್ಕಂತೆ ನಟಿಸಬೇಕಿದೆ ನಾವು
ಗೊತ್ತಾಗದಂತೆ ಕಣ್ತುಂಬಿಕೊಂಡು!!

ಬಲವಾದ ಪೆಟ್ಟೊಂದು ಜ್ವರ ತರಿಸಿ ಬಿಟ್ಟದ್ದು
ಬೆನ್ನ ಹಿಂದೆ ಮರೆಸಿ ಇಟ್ಟ ಗಾಯ
ನಿನ್ನ ಕಣ್ಣೊಳು ನಾನು, ನನ್ನ ಕಣ್ಣೊಳು ನೀನು
ಕರಗಿ ಹೋದರೆ ಉಳಿವುದೆಮ್ಮ ಪ್ರಾಯ!!

ಅಂಗೈಯ್ಯ ಮೇಲೊಂದು ಹಸ್ತಾಕ್ಷರದ ಗುರುತು
ಒಪ್ಪಂದ ಮುರಿದರೂ ಕರಗದಂತೆ 
ಕೆನ್ನೆ ತೋಯ್ದರೂ ಇಲ್ಲಿ ನಿರ್ವಾಣ ಸ್ಥಿತಿಯಲ್ಲೇ
ಉಳಿದೆವೊಮ್ಮೆಯೂ ಹಾಗೆ ಒರೆಸದಂತೆ!!

ಮುಚ್ಚಿಡುವೆ ಸಾಕಾಗಿ, ಹೊತ್ತಿಸುವೆ ಬೇಕಾಗಿ
ಪ್ರೇಮ ಪತ್ರಗಳಾವೂ ಇನ್ನು ಸಲ್ಲ
ಉರುಳಿ ಬಿದ್ದ ಬಾಳನಿನ್ನೊಮ್ಮೆ ಕಟ್ಟಿದರೆ
ಮತ್ತೆ ಹಿಂದಿರುಗಿದರೂ ಅಡ್ಡಿ ಇಲ್ಲ!!

                                        -- ರತ್ನಸುತ

ನೀ ಎಲ್ಲಿರುವೆ?

ಕಿಸೆಯಲ್ಲೇ ಉಳಿದ ನೂರಾರು ಹಾಡುಗಳು
ಅಂಗ ವೈಕಲ್ಯಕ್ಕೆ ತುತ್ತಾಗ ಬಹುದೇ?
ಊರುಗೋಲಂತೂ ಸಿಕ್ಕಾಯ್ತು ಒಲವಲ್ಲಿ
ಮೂಖ ಮನಸು ಈಗ ಬಾಯಿ ಬಿಡಬಹುದೇ?!!

ಸ್ಥೂಲ ಹೃದಯದ ಆಳದಾಳದಲ್ಲಿಯ ಮಾತು
ಹೊರಚೆಲ್ಲುವ ಮುಂಚೆ ಮಾಸಿದಂತಾಗಿ,
ಮತ್ತೆ ಸಾಗಿದೆ ಪಯಣ ಮತ್ತೂ ಆಳಕೆ ಈಗ
ಖುದ್ದು ಜೊತೆಯಾದ ನನ್ನೊಳಗ ಅನುರಾಗಿ!!

ಕಾಯುತ ಕಾಯುವುದು, ಬೇಡದೆ ಬೇಯುವುದು
ಎದೆ ಚಿಮಣಿ ಹೊರಗೆಲ್ಲ ವಿರಹದ್ದೇ ಸುದ್ದಿ
ಈಗಷ್ಟೇ ಸ್ಥಿಮಿತಕ್ಕೆ ಬಂದ ಒಲವ ಕೂಸು
ರಕ್ಷಣೆಗೆ ಬೇಡುತಿದೆ ನಿನ್ನ ಹಳೆ ಕೌದಿ!!

ಹಠಮಾರಿ ಆಸೆಗಳು, ಹದ್ದು ಮೀರಲು ನಿಂತು
ಜಿದ್ದಾ-ಜಿದ್ದಿಯಲಿ ಸೋತಿಹುದು ಚಿತ್ತ
ಒಂದಲ್ಲ ಎರಡಲ್ಲ ಕೋಟಿ ಹೆಜ್ಜೆ ದಾಟಿ
ಧಾವಂತ ಪಯಣವಿದು ನಿನ್ನೂರಿನತ್ತ!!

ಮೈ ಸವೆದ ಜಾಡು, ಮೈ ಮುರುದ ಹಾಡು
ತಲುಪಲೆಂತೋ ನಿನ್ನ ಹುಟ್ಟೂರು ಮನೆಯ
ನೀನೇ ಎಂಬುದಕೆ ಕನಸ ಕುರುಹನು ಬಿಟ್ಟು
ಬೇರೆ ಏನಾದರೂ ಸುಳುವನ್ನು ಕೊಡೆಯ!!

ನಡುದಾರಿಯಲಿ ತಂಪು ನೆರಳ ಹೊಂಗೆ ಮರಕೆ
ನಿನ್ನ ಹೆಸರಿನ ಗುರುತ ಕೊಟ್ಟು ಬಂದಿರುವೆ
ದಾರಿ ತಪ್ಪುವ ಮುನ್ನ ಕಾಣು ಕಣ್ಣಿಗೆ ಒಮ್ಮೆ
ಓ ಮಾಯ ಕನ್ನಿಕೆ, ಹೇಳು ಎಲ್ಲಿರುವೆ?

                                             -- ರತ್ನಸುತ

ಝುಮ್ಮಯಂ

ಒದ್ದೆ ತುರುಬನು ಬಿಗಿದು
ಕಣ್ಣ ಬೆಳಕಲ್ಲದ್ದಿ
ಹಾಲು ಕೆನ್ನೆ ಧರಿಸಿ
ಸೀಳೋ ನಗುವ ಚೆಲ್ಲಿ
ಬರಬೇಡ ನೀ ಹಾಗೆ
ನನ್ನ ಬಳಿಗೆ,
ಮೂಗುದಾರ ಕಿತ್ತು
ಶರತ ಚಳಿಗೆ!!

ಚರಣ ತಾಕಿಸುವಾಗ
ನಡುವ ಬಾಗಿಸಿ,
ಕಸೂತಿ ಕಲೆಯ
ರವಿಕೆ ತೋರಿಸಿ,
ಕಾಲೆಳೆವೆಯೇನು? ನೀ
ಮನ ಸೆಳೆವೆಯೇನು?
ಧ್ಯಾನ ಭಂಗಕೆ ನನ್ನ
ಈಡು ಮಾಡಿ!!

ಕಡುಗತ್ತಲ ಶಯ್ಯೆ
ಸುತ್ತ ಮಿಂಚುವ ಪರದೆ
ಸೊಳ್ಳೆ ಕಡಿದರೂ ಮುಧವು
ತಲೆ ದಿಂಬಿಗೂ ಒಲವು;
ನರ ತಂತಿ ಮೀಟದೆಯೇ
ಹರಿದ ಇಂಚರ ಗುಚ್ಚ
ತಳಮಳದ ಉಂಗುಟವು
ನಿರ್ವಿಕಾರ ಕುಂಚ!!

ಶುದ್ಧ ಸುಧ
ಪುಷ್ಕರಿಣಿಯ
ತೆರೆ ಮರೆಯ ಪೇಯ;
ಜಯ ಜಯ ಜಾಯೇ
ಜರ್ಜರಿತ ಮಾಯೆ
ಸುರತ ಸುರ ತಾಯೇ;
ಅಂಬೆಗಾಲಿಗೂ ನೋವು
ಪಾದಂಗಳ್ ಬಲಿತಿರೆ!!

ಅಧರ ಹೃದಯದ ಉದರ
ತುಂಬಲೆಂತು ಸಾಧ್ಯ,
ಕೊಡಗಟ್ಟಲೆ ಹಸಿವು
ಬಿರಿದ ಬಾವಿ;
ಬತ್ತಿ ಅಂಚಿನ ಚೂಪು
ಬೆಂಕಿ ಸೋಕದ ಉರುಯು
ವಿರಹದೆಣ್ಣೆಗೆ ಅಲ್ಲಿ
ಜ್ವರದ ತಾಪ!!

ಹೂವ ಕೊನೆ ಉಸಿರು
ಸಾಲು ಶವ ಯಾತ್ರೆ
ಹೂವಿಗೆ ಹೂವೇ,
ನಾರಿಗೂ ಹೂವೇ;
ಮುಟ್ಟಿ ನೋಡಲು ಹಣೆ
ಒಲೆಯ ಮೇಲಿನ ಹೆಂಚು,
ತುಟಿ ಮೇಲೆ ಹಿಂಗದ
ಮಂಜು-ಮುತ್ತು!!

                 -- ರತ್ನಸುತ

ನಾನಲ್ಲ್ಲದ ನಾನು

ವಾಚಾಳಿ ಸಾಲುಗಳು
ನನ್ನವಾಗಿರಬಹುದು
ನಾನೇನು ಪ್ರಖ್ಯಾತ ಕವಿಯಲ್ಲ;
ಬರಿ ಬೊಗಳುವ ದಾಸ 
ನಾನಾಗಿರಬಹುದು
ಆದರೆ ದಿಕ್ಕೆಟ್ಟ ಪಾಡಲ್ಲ!!

ನನಗಂತ ಯಾವೊಂದೂ
ಸ್ವಂತಿಕೆ ಇರದಿರಲು
ನಾನಿದ್ದೂ ಇಲ್ಲವಾದವನಲ್ಲ;
ನನ್ನ ಹೆಸರು ಎಲ್ಲೂ
ಪ್ರಚಲಿತವಾಗಿಲ್ಲ
ಹಾಗಂತ ಆಗಂತುಕ ಅಲ್ಲ!!

ಉಪ್ಪರಿಗೆ ಮೇಲಿಂದ
ಪರಪಂಚ ಕಂಡವನು
ಎವರಸ್ಟಿಗಾಸೆ ಪಟ್ಟವನಲ್ಲ;
ಇದ್ದಂತೆಯೇ ಖುಷಿ
ಹೊಂದಿದವ ನಾನೆಂದೂ
ದಿ ಬೆಸ್ಟು ಆಗುವ ಮನಸಿಲ್ಲ!!

ಮನೆ ಮಟ್ಟಿಗೆ ಚೂರು
ಒಳ್ಳೆ ಹುಡುಗ ನಾನು
ಹೆಸರಿಟ್ಟು ಆಡಿಕೊಂಡವರಿಲ್ಲ;
ಈ ಬೀದಿಯ ಬದಿಗೆ
ನನ್ನಂಥವನೊಬ್ಬ
ಇರುವಂಥ ಮಾಹಿತಿ ದೊರೆತಿಲ್ಲ!!

ಚಟವುಂಟು ನೂರೆಂಟು
ಹಠ ಗೆಲ್ಲಿಸುವ ಗುಟ್ಟು
ಬಿಟ್ಟುಗೊಡುವ ವಿದ್ಯೆ ಕಲಿತಿಲ್ಲ;
ಎಳೆಸಾದ ತಲೆಯೊಳಗೆ
ಸೊಗಸಾದ ಕನಸುಗಳು
ಈಡೇರಿಸೋ ಶಕ್ತಿ ನನಗಿಲ್ಲ!!

ನಾನಲ್ಲ ಹಿತವನು
ಅಹಿತಕರನೂ ಅಲ್ಲ
ಸ್ವಾವಲಂಬನೆ ಬಿಟ್ಟು ಬೇರಿಲ್ಲ;
ಇರದುದ್ದಕೆ ಅತ್ತು
ಇದ್ದುದ್ದಕೆ ಬೀಗಿ
ಸಮತೋಲನವ ಎಂದೂ ತಪ್ಪಿಲ್ಲ!!

ನನ್ನವರು ನೂರಾರು
ಅದರಾಚೆ ಇನ್ನೂರು
ಮತ್ತಾರು ಇದ್ದಾರೋ ಗೊತ್ತಿಲ್ಲ;
ಹೀಗೇ ಇರಬೇಕು
ಅಂದುಕೊಂಡವರಾರೂ
ಈ ತನಕ ಬಾಳಲ್ಲಿ ಸಿಕ್ಕಿಲ್ಲ!!

                        -- ರತ್ನಸುತ

ಹರಿಶ್ಚಂದ್ರರು

ಹೆಣ ಕೊಯ್ಯುವ ಕಸಾಯಿಗೆ
ಹಸ್ತದ ನಾಜೂಕುತನ
ಎದೆಯ ಬಂಡತನ
ಕರುಳ ತಾಯ್ತನ
ಸುಕ್ಕು ಹೆಗಲ ಒರಟುತನಗಳು
ಅರಿವಿಗೆ ಬರುವುದುಂಟೇ?!!

ಉದರದಲ್ಲಿ ಸಿಕ್ಕ ದುರ್ಮಾಂಸವ
ಕೊನೆ ಬೆರಳಲ್ಲಿ ಹಾಗೆ ತೀಡುತ್ತ
ಕಳೆದ ರಾತ್ರಿ ಬೇಯದ ಮುದ್ದೆಯೊಂದು
ಬಿರಿಯಾನಿ ಗುಡ್ಡೆಯೊಳಗೆ ಸಿಕ್ಕದ್ದು ನೆನಪಾಗಿ
ಅಸಡ್ಡೆ ಮೂಡುತ್ತದೆ!!

ಇಡಿ ದೇಹದ ಚರ್ಮ ಸುಲಿದು
ಯತಾವತ್ತಾಗಿ ಮತ್ತೆ ಹೊಲಿದವನು
ಈ ತನಕ ತಾನು 
ಕಳಚಿ ಬಿದ್ದ ಶರ್ಟಿನ ಗಿಂಡಿಯ
ಹೊಲಿದುಕೊಳ್ಳುವಷ್ಟು ಪುರುಸೊತ್ತಿಲ್ಲದವ!!

ಅರೆ ಬೆಂದ ತೊಗಲಿಗೆ
ಚೂರಿ ಹಾಕುವ ಮುನ್ನವೇ
ಕಿತ್ತು ಬರುವುದನ್ನು ಕಂಡವನಿಗೆ;
ಬಯಕೆ ಅರಿತ ಮಡದಿ
ಸಾರಾಯಿ ಬುಡ್ಡಿ ಜೊತೆಗೆ
ಚಿಕನ್ ಕಬಾಬಿನೊಡನೆ
ಹೊಸ ಸೀರೆ, ಮೊಲ್ಲೆ ಮುಡಿದು
ಕಾಯುವೆನೆಂದದ್ದು ನೆನಪಾದಂತೆ
ನಸುನಕ್ಕು ಸುಮ್ಮನಾಗುತ್ತಾನೆ!!

ಹುಟ್ಟೇ ಕೊನೆಯಾದಮೇಲೆ
ಹುಟ್ಟು ಮಚ್ಚೆಗಳಿಗೆಂಥ ಮಾನ್ಯತೆ;
ಲೆಕ್ಕ ಹಾಕುವುದಿರಲಿ
ಸುತಾರಾಮ್ ಗಮನಿಸುವುದೂ ಇಲ್ಲ;

ಸತ್ತು ಪ್ರಶಾಂತವಾದ ಕಣ್ಣು;
ಆಗಾಗ ರೆಪ್ಪೆ ಸರಿಸಿ
ಮೇಲ್ಚಾಚಿದ ಗುಡ್ಡೆಗಳಿಗಳ ಕಂಡು
ಗಡ್ಡ ಗೀರಿಕೊಳ್ಳುತ್ತಾನೆ!!

ಬೀಡಿ ಘಾಟಿನ ನಂಟು
ಬಾಯ್ಸುಟ್ಟರೂ ಬಿಡಿಸಲಾಗದ್ದು;
ಸ್ವಚ್ಛೆದೆಯ ಶ್ವಾಸಕೋಶದೊಳಗೆ
ತನ್ನ ಹೆಮ್ಮಯ ಪತಾಕೆಯ ನೆಟ್ಟು
ಗಹಗಹಿಸಿ ನಗುತ್ತಾನೆ
"ಸಾಯೋ ಮುಂಚೆ ಹಾಳಾಗ್ರೋ,
ಬದ್ಕಿರೋದೇ ಹಾಳಾಗಕೆ!!"
ಸಾರಿ, ಸಾರಿ ನುಡಿದು!!

"ಹಂದರಕ್ಕೂ, ಮಂದಿರಕ್ಕೂ
ವ್ಯತ್ಯಾಸವೇನಿಲ್ಲ
ಎರಡೂ ಹುಡುಕಿದರೆ ಸಿಗುವಂತವು;
ಮಂದಿರದಲ್ಲಿ ದೇವರಿಲ್ಲ,
ಹಂದರದಲ್ಲಿ ಜೀವವಿಲ್ಲ....."
ತತ್ವಶಾಸ್ತ್ರ ಪ್ರವೀಣನೀತ!!

ವಾರಸುದಾರ ಸತ್ತು ಹತ್ತು ವರ್ಷ
ಮಡದಿ ಕೈ ಕೊಟ್ಟು ಇಪ್ಪ್ಪತ್ತು ವರ್ಷ
ನೆಂಟ-ಇಷ್ಟರೆಲ್ಲ ಎಂದಾದರೊಮ್ಮೆ
ಇವನ ಬೇಟಿಯಲ್ಲೇ ಕೊನೆಯಾಗುವರು;
ಮಣ್ಣು ಮುಕ್ಕುವ ಮುನ್ನ,
ಸುಟ್ಟು ಬೇಯುವ ಮುನ್ನ!!

                               -- ರತ್ನಸುತ

ಬೊಂಬಾಟ್ ಭಾನುವಾರ

ಮುಗಿಲೆಲ್ಲ ಕರಿ ಕಂಬಳಿ ಹೊದ್ದು
ದಿನವೆಲ್ಲ ತೂಕಡಿಸುತಿದೆ
ಸಂಜೆ ವೇಳೆಗೆ ಆಕಳಿಸೆದ್ದು
ಧರೆಗಿಳಿವ ಸೂಚನೆಗಳಿದೆ!!

ಒಣಗಲು ಹಾಕಿದ ವಾರದ ಬಟ್ಟೆಗೆ
ಬಿಸಿಲಿನ ಯೋಗ ಸಿಗುತಿಲ್ಲ
ಮೂದಲಿಸುತ್ತಿದೆ ಹಿತ್ತಲ ಹೂವು
ನಗುವಿಗೆ ಕಾರಣ ಇನ್ನಿಲ್ಲ!!

ಯಾವುದೋ ಸೋಗಲಿ ಬೀಸುವ ಗಾಳಿ
ಚಳಿಯಲಿ ಬೇಯಿಸಿ ಬಿಡುತಿತ್ತು
ಆಷಾಢದ ಏಕಾಂತದ ಹುಣ್ಣಿಗೆ
ನಿಂಬೆ ಹುಳಿ ಹಿಂಡುವ ಹೊತ್ತು!!

ಕೊಡೆಗಳು ಉಳಿದವು ಕೆಲಸಕೆ ಬಾರದೆ
ಬಾಗಿಲಲಿಗೋ-ಅಗೋ ಎಂದು
ರೆಪ್ಪೆಗಳೋ ಬಿಗಿದಪ್ಪಿವೆ ಕೂಡಲೆ
ವಿರಹದ ತಾಪಕೆ ಮನ ನೊಂದು!!

ಉಗುರು ಕತ್ತರಿಸಿದ ಕರಗಳಿಗೆ
ಬೆಳ್ಳುಳ್ಳಿಯ ಬಿಡಿಸುವ ಶಾಪ
ಕಣ್ಣೀರಿಗೆ ಕಾರಣವಾದವು
ಬೆಲೆ ಏರಿದ ಈರುಳ್ಳಿಯ ಕೋಪ!!

ನಾಟಿ ಕೋಳಿಯ ಬಸಿದ ಸಾರು
ನಾಲಿಗೆ ಸೊರಗುಟ್ಟಿತು ಹಾಗೆ
ಮುದ್ದೆ ಉಂಡು ಹೊಡೆದಲು ನಿದ್ದೆ
ಆ ಸುಖ ಬಣ್ಣಿಸಲಿ ಹೇಗೆ?!!

                              -- ರತ್ನಸುತ 

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...