Tuesday, 17 October 2017

ಬಿಡಿಗವಿತೆ

ನೀ ಕಚ್ಚದ ಕೆನ್ನೆ ಮೇಲೊಂದು ಮೊಡವೆ
ನೀ ಬಾರದ ಕನಸ ತುಂಬೆಲ್ಲ ಗೊಡವೆ
ಕಣ್ಣಲ್ಲೇ ಕಣಿ ಹೇಳು ನಾ ಕುಣಿದು ಬರುವೆ
ಅಲ್ಲೆಲ್ಲೋ ಹುಡುಕದಿರು ನಿನ್ನಲ್ಲೇ ಇರುವೆ!!

                                   
                                         - ರತ್ನಸುತ 










ಘೋರ ಕನಸು


ಮೊನ್ನೆ ಕನಸಲ್ಲಿ ತುಂಬ ಅತ್ತಿದ್ದೆ
ಕಂಬನಿ ಕಣ್ಣ ದಾಟಿ ಹೊರ ಬರಲಿಲ್ಲ
ಬಿಕ್ಕಳಿಸಿದ್ದು ಎದೆಗೊರಗಿ ಮಲಗಿದ್ದ
ನನ್ನ ಮನದನ್ನೆಗೂ ತಿಳಿದಿರಲಿಲ್ಲ...



ಗೆಳೆಯ ಕೈ ಜಾರಿ ಹೊರಟಿದ್ದಾನೆ
ಅವನಿಗೆ ಕೊಡಬೇಕಾದ ಬಾಕಿಯ
ಲೆಕ್ಕ ಹಾಕುತ್ತಲೇ ಅಳುತ್ತಿದ್ದೆ
ಒಮ್ಮೆಯಾದರೂ ತಡೆಯುತ್ತಾನೆಂದುಕೊಂಡು



ಚಟ್ಟ ಕಟ್ಟುವ ಬಿದಿರು ಸೀಳಿಗೆ
ಅವನ ಚರ್ಮ ಸಿಕ್ಕಿಕೊಂಡರೆ?
ಆ ಮೌನ ಯಾತನೆಯ ಶಂಖ-ಜಾಗಟೆ ಸದ್ದು
ನುಂಗಿ ಬಿಡಬಹುದೆಂಬ ಆತಂಕ



ಅವನಿಗೆ ಹೂವೆಂದರೆ ಪ್ರಾಣ
ಹಂಗಾಗಿ ಹೆಚ್ಚೆಚ್ಚು ಹೂವ ಎರಚಿ
ಹೋದ ಪ್ರಾಣ ಮತ್ತೆ ಬರಬಹುದು
ಅವನ ಬಣ್ಣನೆಗೆ ಮನಸೋಲಲು



ಗದ್ದಲದಲ್ಲಿ ಅವನಿರಲಾರ
ಸದಾ ಏಕಾಂತದೊಂದಿಗೇ ಪರಿಚಿತ
ಗೋರಿ ಕಟ್ಟುವ ಮುನ್ನ ಎಚ್ಚರ
ಸುತ್ತ ಒಂದು ಇರುವೆ ಗೂಡೂ ಸಲ್ಲ



ಗೆಳೆಯ ನಗುತ್ತಿದ್ದವ ಸತ್ತಿದ್ದಾನೆ
ಅಳಿದ ಹಣೆಬರಹಕ್ಕೆ ವಿಭೂತಿ ರಾಚಿ
ಕಂಪಿಸಿದ ಬೆರಳಚ್ಚು ಉಳಿಸಿದೆ
ಹಣೆ ಬೆಚ್ಚಗಾಗಿಸುವ ಆಸೆಯಿಂದ



ಎಚ್ಚರಗೊಳ್ಳದಷ್ಟೂ ವೇಳೆ
ಗೆಳೆಯ ಸತ್ತಿದ್ದ
ಈಗ ಉಸಿರಾಡುತ್ತಿದ್ದಾನೆ ನನ್ನ ಎಚ್ಚರಗೊಳಿಸಿ
ಕೆನ್ನೆ ಸವರಿದರೆ ಕಂಬನಿಯ ಕಾಣೆ...



ಛೇ..ಈ ಕನಸುಗಳು ನಿಜಕ್ಕೂ ಘೋರ
ನೂರು ಕಾಲ ಖುಷಿಯಿಂದ ಬಾಳು ಗೆಳೆಯ!!



                                         - ರತ್ನಸುತ 

ಎಡ-ಬಲ


ಎಡಗೈ ಹೊಲಸೆಂದ ಬಲಗೈ
ಸ್ವಾರ್ಥ ಬಲಗೈ ಎಂದ ಎಡಗೈ
ಕೈ ತಟ್ಟಿಕೊಂಡದ್ದ ಮರೆತಿತ್ತು
ಬೊಗಸೆ ಆಕಾರ ಮುರಿದಿತ್ತು
ಅಪ್ಪುಗೆಯ ಬಿಗಿ ಶಿಥಿಲಗೊಂಡಿತ್ತು

ಎಡಗಣ್ಣ ಬಲಗೈ, ಬಲಗಣ್ಣ ಎಡಗೈ
ತಾಕಿದ್ದು ಎಂದೋ ಜ್ಞಾಪಿಸಿಕೊಳ್ಳಿ
ತಾಕಿಲ್ಲವೆಂದಮಾತ್ರಕ್ಕೆ ತಪ್ಪೇ?
ಈಗಲೇ ತಾಗಿದರೆ ಮುಗಿಯಿತು
ನಿಷ್ಠುರ ಯಾರಿಗೆ ಒಳಿತು?

ತೋರ್ಬೆರಳುಗಳ ತಂದು ಸನಿಹ
ವಿಮುಖಗೊಳಿಸುವುದೆಂಥ ಮರುಳು
ಮನಸಲ್ಲಿ ಮನೆಯನ್ನು ಕಟ್ಟಿ
ಮನೆ ಬಾಗಿಲಲಿ ಬಿಡಲು ನೆರಳು,
ಅಳುವಾಗ ವ್ಯರ್ಥ ಗೋಳು

ದೂರುಳಿದ ಮಾತ್ರಕ್ಕೆ ಬೇಡೆಂದುಕೊಂಡು
ಹತ್ತಿರತ್ತಿರದಲ್ಲಿ ಛಿದ್ರಗೊಂಡು
ಉಳಿದ ಚೂರುಗಳಲ್ಲಿ ಕಂಡುಕೊಳ್ಳಲು ನಿಜವ
ಏನು ಹೇಳಬೇಕು, ಯಾರ ದೂರಬೇಕು

ಉಗುರ ಕಚ್ಚಿದ ಹಲ್ಲು ಲೆಕ್ಕಿಸಿತೇ ಬೆರಳನ್ನು
ಬಲಗೈಯ್ಯ ಹುಣ್ಣಿಗೆ ಎಡಗೈ ಕಣ್ಣು
ಕೆಂಡ ಬಿದ್ದ ಹಸ್ತ ಹಂಚಿಕೊಂಡಿತು ನೋವ
ಸಿಹಿಗಷ್ಟೇ ಬಲಹಸ್ತ ಸ್ವಹಿತ?

ಹೊಲಸು ಎಡಹಸ್ತವ ತಿಕ್ಕಲು ಬೇಕು ಬಲ
ಬೆನ್ನ ಮುಖಕೂ ತಾವೇ ಸಪ್ಪಳ
ವಿಭೂತಿಗೊಲಿದು ಮೈಥುನವ ಜರಿದರೆ ಹೇಗೆ?
ಕೇಸರ ಪೂಜೆಗೂ ಇರಲಿ ಬೆಂಬಲ!!

                                       - ರತ್ನಸುತ

Thursday, 28 September 2017

ಬನ್ನಿ ನನ್ನ ಮನೆಗೆ


ಬಿಡುವು ಮಾಡಿಕೊಂಡು ಬನ್ನಿ ನನ್ನ ಮನೆಗೆ
ದಾರಿ ಹಿಡಿದು ಬನ್ನಿ ಮನದ ತುತ್ತ ತುದಿಗೆ
ಕಲ್ಲು ಮುಳ್ಳ ಮೆಟ್ಟಿ, ಗುಡ್ಡಗಾಡು ದಾಟಿ
ಸೋತ ಮೋರೆ ಬೀರದಿರಿ ನನ್ನ ಕಡೆಗೆ



ಇಗೋ ಇಲ್ಲೇ ತಿರುವು ಕಾಣಿ
ಅಗೋ ಅಲ್ಲೇ ಹಾಯಿ ದೋಣಿ
ಮಣ್ಣ ದಾರಿ, ನೀರ ದಾರಿ
ಇಲ್ಲ "ಇಂಥದೇ" ದಾರಿ ನನ್ನ ಮನೆಗೆ



ವಿಳಾಸ ನನಗೂ ತಿಳಿದಿಲ್ಲ
ಪ್ರಯಾಸ ನಿಮಗೆ ತಪ್ಪಲ್ಲ
ಅಲ್ಲಲ್ಲಿ ಸಿಗಲುಬಹುದು ಕುರುಹು
ನನ್ನದೇ ಹುಡುಕಾಟದ ಹೆಜ್ಜೆ ಗುರುತು



ಸಿಕ್ಕರೋ ಸಂತೋಷ ಗುರುತಿಟ್ಟವರು
ದಾರಿ ತೋರುವವರು ಇಹರು ಈಗೆಲ್ಲೋ?
ಕಾಲು ದಾರಿ ಹಿಡಿದು ಬನ್ನಿ
ಮೇಲೆ, ಮೇಲೆ ಮತ್ತೂ ಮೇಲೆ ಹತ್ತಿ ಬನ್ನಿ
ನನ್ನ ಗುಡಿಸಲಾಚೆ ನಿಮಗೆ ಹೊಂಗೆ ಚಪ್ಪರ



ತಟ್ಟದಿರಿ ಇರದ ಬಾಗಿಲ
ಎಚ್ಚರ ಅದು ಹಸಿ ನೆಲ
ಹಚ್ಚಿಟ್ಟ ದೀಪವಿದೆ ಬೆಳಕ ಪಾಲಿಗೆ
ಗಡಿಗೆ ತುಂಬ ಸಿಹಿ ನೀರು ದಣಿದ ಕಣ್ಣಿಗೆ



ದಾರಿ ತಪ್ಪಿದವರೇ ಕ್ಷಮಿಸಿ
ಆದರೆ ಇನ್ನಷ್ಟು ಕ್ರಮಿಸಿ
ಅಲ್ಲೇ ಸಿಕ್ಕರೂ ಸಿಗುವೆ "ಅಲೆಮಾರಿ"
ಮನೆ ದೂರ, ಮರದಡಿಗೆ ಸರಿದಾಡಿ



ಬೆಂದು ಬಂದ ಬಾಂಧವರೇ
ನೊಂದು ಹಿಂದಿರುಗದಿರಿ
ನಿಮಗೂ ಪಾಲಿದೆ ಮನೆಯೊಳು
ಇದ್ದು ಬಿಡಿ ಅಲ್ಲೇ, ನೆನಪಿನ ಜೊತೆಯಲ್ಲೇ!!



                                     - ರತ್ನಸುತ

ಹ್ಯಾಪಿ ಮದುವೆ ಆನಿವರ್ಸರಿ ಹೆಂಡ್ತಿ 💑❤🎉🎊🎈


ಮಳೆಬಿಲ್ಲಿಗೆ ಆಸೆ ಪಟ್ಟವರು ಇರುಳಲ್ಲಿ
ಹೊಸ ಬಾಳಿಗೆ ಕನಸ ಕೊಟ್ಟವರು ಮಡಿಲಲ್ಲಿ
ಬಿಳಿ ಮೋಡದ ಮೇಲೆ ಗೀಚಿಟ್ಟ ಗುರುತೊಂದು...

ಹನಿಯಾಗಿದೆ ಕೆನ್ನೆ ಮೇಲೆ ಗುಟ್ಟಾಗಿ
ಖುಷಿಗೆಂದು ಬಿಡಿಸಿ ಹೇಳಬೇಕೆ?



ಬರಿಗಾಲಿಗೊಂದಿಷ್ಟು ಮುಳ್ಳುಗಳ ಗುರುತಿಟ್ಟು
ಅಂಗೈಯ್ಯಲಿ ಸಣ್ಣ ಪ್ರಣತಿಯನು ಬಚ್ಚಿಟ್ಟು
ಕಣ್ಣಂಚಲಿ ಮಿಂಚು ಮರೆಯಾಗದಂತಿರಿಸೆ
ನೆರಳೂ ನಾಚಿ ದೂರುಳಿದು ನಿಂತಾಗ
ಹತ್ತಿರ ನೀನಿದ್ದೆ ಅಂತನ್ನಬೇಕೆ?



ಮುನಿಸಲ್ಲೂ ಮನಸಲ್ಲೂ ನೀನಿದ್ದ ಹಿತವನ್ನು
ಜೊತೆಯಾಗಿ ನಿನ್ನಲ್ಲಿ ಹಂಚಿಕೊಳ್ಳೋ ಹಿತವ
ಅತಿಯಾಗಿ ಬಯಸುವುದು ಅಹಿತಕರವೆಂದೆನಿಸಿ
ಸ್ಥಿತಿಪ್ರಜ್ಞೆ ಕಳೆದಂತೆ ಮರುಳಾಗುವಾಗ
ಎಚ್ಚರಿಕೆಯ ಗುಳಿಗೆ ನೀಡಬೇಕೆ?



ದಾಟಿ ಬಂದವುಗಳಿಗೆ ನಮ್ಮ ನೆಪವಿಲ್ಲ
ಮೀಟಿ ನಿಂತವುಗಳಲಿ ನಾವೇ ಎಲ್ಲ
ಸೇತುವೆಯ ಕಟ್ಟಿದೆವು ದಾಟಲಷ್ಟಕೇ ಅಲ್ಲ
ಸೋತ ಮಾತುಗಳನ್ನು ಆಡಿಕೊಳಲು
ಜಾಹೀರಾತಿನ ಗೊಡವೆ ನಮಗೇಕೆ?



ಬೆನ್ನ ಹಿಂದಿನವೆಲ್ಲ ಬರಲಿ ಜೊತೆಗೆ
ಮುಂದೆ ಸಾಗುವ ನಾಳಿನೆಲ್ಲ ಕಥೆಗೆ
ರೆಪ್ಪೆ ಅಲುಗಿಸಬೇಡ ತಂಗುದಾಣವದು
ನಾ ಮರೆತ ನಗುವೊಂದರ ನಿಲುವಲ್ಲಿದೆ
ನಾ ಹಾರಲು ನೀ ಸಂದ ರೆಕ್ಕೆ!!



ಎಲ್ಲ ಕಾಲಕೂ ಸೊಲ್ಲು ಬೆಲ್ಲವಾಗಲೊಲ್ಲದು
ಬೇವಿಗೂ ಬೇಕು ಅದರಷ್ಟೇ ಪಾಲು
ಮೆಲ್ಲ ಜಾರುವೆ ನಿನ್ನ ಬಳಸಿ ಕೇಳುವೆ ಮುತ್ತು
ಎಲ್ಲವೂ ಮತ್ತೆ ಶೂನ್ಯಕ್ಕೆ ಮರಳಲು,
ಕಳುವಾದ ದಾರಿಯನು ಹುಡುಕಬೇಕೆ?

                                          
                                             - ರತ್ನಸುತ

ಶೂನ್ಯದಿಂದಿಲ್ಲಿತನಕ

ಶೂನ್ಯದಿಂದಲೇ ಕಟ್ಟು ಸೇತುವೆ
ಮೌನದಾಚೆಗೆ ಬಂದ ಕೂಡಲೆ
ಮಾತನಾಡಿಸು ಮೆಲ್ಲೆ ಮನಸನು
ಒಮ್ಮೆ ಗಿಲ್ಲುತ, ಒಮ್ಮೆ ಸೋಲುತ


 ಬತ್ತಲಾರದು ಎದೆಯ ತಂಬಿಗೆ...
ಮತ್ತೆ ಚುಂಬಿಸು, ಮತ್ತೆ ತುಂಬಿಸು

ಕೊಟ್ಟ ಉತ್ತರ ತಪ್ಪು ಅಂದರೂ
ಅಂಕ ಕೊಟ್ಟರೂ ಸೊನ್ನೆ ಸುತ್ತುವೆ


ನಿನ್ನ ಕಣ್ಣಿನ ಕಾಲು ದಾರಿಯ
ನೋಟದೊಂದಿಗೆ ಹೆಜ್ಜೆ ಹಾಕುತ
ಮತ್ತೆ ಸಿಕ್ಕುವೆ ಕಳೆದ ಹಾದಿಲಿ
ನೆಟ್ಟು ನೋಟವ, ಬಿಟ್ಟು ಎಲ್ಲವ



ಹಿತ್ತಲಲ್ಲಿದೆ ಅರಳು ಮಲ್ಲಿಗೆ
ಕಟ್ಟಿ ಕೊಡುವೆನು ನಿನ್ನ ಕುರುಳಿಗೆ
ಬೆರಳಿಗಂಟಿದ ಘಮಲು ಮಾದಕ
ಲಜ್ಜೆ ಕಾಣಲು ಮುಗಿಲು ಉತ್ಸುಕ


ಪ್ರಾಣ ಮುಷ್ಟಿಯ ಹಿಡಿತದಲ್ಲಿದೆ
ಅತ್ತ ತಿರುಗಿ ಬಾ, ಜೀವಕೆರಗಿ ಬಾ

ಬುಡ್ಡಿ ದೀಪಕೆ ಸಡ್ಡು ಹೊಡೆದಿದೆ
ಎತ್ತ ನೋಡಲೂ ತುಂಬು ಕತ್ತಲು


 ಗೀಚಬೇಡವೇ ಸೋತ ಹೃದಯವ
ಹೊತ್ತು ಉರಿವುದು ನಿನ್ನ ಹೊರುತಲೇ
ಕತ್ತಲಲ್ಲಿಯೇ ಕಂಡುಕೊಳ್ಳುವೆ
ನಿನ್ನ ನನ್ನೊಳು, ನನ್ನ ನಿನ್ನೊಳು...



                                     - ರತ್ನಸುತ

Tuesday, 25 April 2017

"ಮುಂದೇನಾಯಿತು?"


ಬೆರಗುಗಣ್ಣಿನ ಮುಗ್ಧ ಮುಖಗಳು
ಪುಣ್ಯಕೋಟಿಯ ಕಥೆ ನೋಡುತ
ಮತ್ತೆ ಮತ್ತೆ ಮಾರುಹೋದವು
ಸತ್ಯವಾಕ್ಯ ಪರಿಪಾಲನೆಗೆ


ಪುಣ್ಯಕೋಟಿ ತಾನು ತನ್ನ
ಕಂದನಿಗೆ ಹಾಲುಣಿಸುತಿರಲು
ನಾಲಗೆಯ ಚಪ್ಪರಿಸುತ ಅವು
ಹರ್ಷದಿಂದ ಕುಣಿದವು


ಹುಲಿಯ ಘರ್ಜನೆ, ಕ್ರೋಧ ಭಂಗಿ
ಅರಳಿಸಿದವು ಕಣ್ಣ ಚೂರು
ಹೆಜ್ಜೆ ಹೆಜ್ಜೆಗೆ ಕೌತುಕಕ್ಕೆ 
ನಾಂದಿ ಹಾಡಿತು ಹಾಡದು


ಪುಣ್ಯಕೋಟಿಯು ಹುಸಿಯನಾಡದೆ
ಹುಲಿಗೆ ತಾ ಶರಣಾಗುತಿರಲು
ಎಗರಿ ಇರಿದು ರಕ್ತ ಕುಡಿವುದು
ಎಂದು ಅವುಗಳು ಎಣಿಸಲು


ಹುಲಿಯು ಕಂಬನಿ ಹರಿಸಿ ಪ್ರಾಣವ
ಬಿಟ್ಟ ಕೂಡಲೆ ಕಥೆಯು ಮುಗಿಯಿತು
ಪುಣ್ಯಕೋಟಿಯ ಜೀವ ಉಳಿದಿದೆ
ಪ್ರಶ್ನೆ "ಮುಂದೇನಾಯಿತು?"


ಹುಲಿಗೂ ಇರಬೇಕಲ್ಲ ಮರಿಗಳು?
ಅವುಗಳಾರು ಸಲಹುವವರು

ಗಂಗೆ, ತುಂಗೆಯರಂತೆ ಅವಕೆ
ಉಣಿಸುವವರಾರು ಮಾಂಸವ?


ಮತ್ತೆ ಮೊಳಗಿತು ಅದೇ ಹಾಡು

ಮತ್ತೆ ಮತ್ತೆ ಹುಲಿಯೇ ಸತ್ತಿತು
ತಬ್ಬಲಿ ಹುಲಿ ಮರಿಗಳೆಷ್ಟೋ 
ಕಾಣದಾದವು ಕಣ್ಣಿಗೆ!!

                                - ರತ್ನಸುತ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...