Friday, 15 March 2013

ಗುಳ್ಳೆ ಪಟಾಕಿ (ಮೌನ ಮುರಿದ ಪುಟಾಣಿ ಸದ್ದು)






ಹಾಲ ಬಟ್ಟಲ ತುಂಬು ಅದ್ದಿಗೆ, ಮಿಂದು ಎದ್ದ ಮುದ್ದು ಕೂಸೇ
ಎತ್ತಿ ನಿನ್ನ ಅಪ್ಪಿಕೊಂಡು ಬಿಡದೆ ಹಾಗೆ ಮುದ್ದಾಡುವಾಸೆ
ಕತ್ತಲಲ್ಲಿ ತುಂಬು ಚಂದಿರ, ಬೆಳಕಿಗೆ ನೀ ನೆರಳ ಮಿತ್ರ
ಕಲಾರಾಧಕ ತಪಿಸಿ ಬಿಡಿಸಿದ ವರದ ರೂಪಕ ನಿನ್ನ ಚಿತ್ರ  ।೧।

ಹೆಣೆದ ಸಾಲಿಗೆ ಒಲಿದ ಭಾವನೆ, ನಿನ್ನ ಪುಟ್ಟ ಕಣ್ಣುಗಳ ಕಂಡು
ನಾನೂ ಮಗುವಾಗುವಾಸೆ ನಿನ್ನ ಮೂಖ ಭಾಷೆಯ ಕಲಿತುಕೊಂಡು
ಅತ್ತು ಜಾರಿಸಬೇಡ ಕಂಬನಿ ಮುತ್ತುಗಳು ಮುನಿದಾವು ಪಾಪ
ಮಲಗೋ ಮುನ್ನ ಹಠವ ಮಾಡಿ ತರಿಸು ಜನನಿಗೆ ಕೊಂಚ ಕೋಪ  ।೨।

ಬೇಗ ಬಲಿತು, ಮಾತು ಕಲಿತು, ಕರೆಯೋ ನನ್ನ "ಮಾಮಾ" ಎಂದು
ಖಾಲಿ ಪುಟಗಳು ತೆರೆಯುವುದು ಆಗ ಅಮೃತಾಪದ ರಚಿತಗೊಂಡು
ನಿನ್ನ ಕಾಂತಿ ಹೆಚ್ಚಿಸಲಿ ವಾತಾವರಣದ ಮಂದ ಹೊಳಪ
ಕಿಸೆಯ ತುಂಬಲಿ ನಿನ್ನ ಬಾಳನು ಚಂದಗೊಳಿಸೋ ಹೊನ್ನ ಬಳಪ  ।೩।

ಪುಟ್ಟ ಹೆಜ್ಜೆಯನಿಟ್ಟೆಡೆ ನೀ ಬಿಟ್ಟ ಪಾದ ಗುರುತುಗಳೂ ಕೂಡ
ನಿನ್ನ ಹಿಂದೆಯೇ ಬರುವುದೇನೋ, ಹಿಂಬಾಲಿಸುವಂತೆ ಮೋಡ
ಕೊಟ್ಟ ಆಟಿಕೆ ಕೆಡವಿ ಮತ್ತೆ ಹೊಸ ಬೇಡಿಕೆ ಇಟ್ಟು ನೋಡು
ಮೌನವಹಿಸಿಯೂ ಸ್ಪೂರ್ತಿಯಾಗು ಹೊಮ್ಮಿಸಲು ಅನನ್ಯ ಹಾಡು  ।೪।

ಶಿಳ್ಳೆ ಹಾಕಿ ಚೀರು ಸಿಡಿಸಿ ಮನೆಯ ತುಂಬ ಗುಳ್ಳೆ ಪಟಾಕಿ
ಪ್ರಶಾಂತತೆಯ ನಡುವೆ ಪರಿಚೆಯಿಸು ರಮಿಸುವ ನಗೆ ಚಟಾಕಿ
ಕೊಟ್ಟ ಉತ್ತರ ನನ್ನದು, ಕೂಡಿಟ್ಟ ಪ್ರಶ್ನೆ ನಿನ್ನದು
ನಿನ್ನ ಗೆಲ್ಲಿಸುವ ಸಲುವೇ ಬೇಡಿ ಪಡೆಯುವೆ ಸೋಲಿದು.......... ।೫।


                                                                      -ರತ್ನಸುತ

Tuesday, 19 February 2013

ಹಣೆ ಬರಹ

ಬೆವರ ಹಣೆಯ  ವಿವರಣೆಯ
ಕೇಳಲಿ ಮಸಿಯಾದ  ಬೆರಳು
ನೊಂದಿರುವುದು ಕೇವಲ ಬೆರಳಲ್ಲ
ಸುಮ್ಮನೆ  ಸಹಕರಿಸಿದ ಒಡಲೂ

ಬೆರಳ ಮಸಿ ಅಂಟದೇ ಇರಲಿ
ಬೆವರ ವೊರೆಸುವ ಅವಸರದಲಿ
ಮುಖವು ಹೇಗೆ ಬೇಡವೆನುವುದು
ಮುಂದಾದ ಬೆರಳದು ಸಹಜದಲಿ

ಕಣ್ಣು ಕಂಡಿತು ಬೆರಳ ಮಸಿಯ
ಹೇಗೆ ಕಾಣ್ವುದು ಹಣೆಯ ಬೆವರ?
ಗುರುತನಿಡುವುದು ಬೆರಳ ನೋವಿಗೆ
ಮರೆತೇ ಬಿಡುವುದು ಹಣೆಯ ಹೆಸರ

ಏನು ಧೋರಣೆ ಮನಸಿನದ್ದು
ಕಣ್ಣ ಸಾಕ್ಷಿಗೆ ಮಿಡಿಯುತಿರುವುದು
ನೊಂದ ಗಾಯಕೆ ಮತ್ತೆ ಪೆಟ್ಟು
ಹಣೆಯ ಬರಹವೇ ಇಂಥದ್ದು

ತಿದ್ದಲಾಗದ ಹಣೆಯ ಅಕ್ಷರ
ಹರಿಯಿತು ಬೆರಳ ತುದಿಯಿಂದ ಹಾಳೆಗೆ
ಒಂದು(ಬೆರಳು) ಇದ್ದಂತಿದ್ದು ನೊಂದಿತು
ಮತ್ತೊಂದು(ಹಣೆ) ಬಳಲಿತು ಬದಲಾವಣೆಗೆ.....

                                 --ರತ್ನಸುತ

Friday, 28 December 2012

ನಾ ಕಂಡ ಇಬ್ಬನಿಯ, ಕಾಣದ ಕಥೆ





















ಹೂಗಳ ಕಣ್ಗಳ ದಳಗಳ ತುದಿಗೆ
ಏಕೆ ಜಾರದೆ ಉಳಿದೆಯೇ ಇಬ್ಬನಿ!!?
ನವಿರು ಒಡಲ ಜರಿದೆ ನೀರಾಗುತ
ಹೊಸ್ತಿಲಲುಳಿದೆಯಾ ಚಿಂತಿಸಿ ನೀ!!?

ತಡೆಯಿತು ಪಾಪ ಹಿಡಿಯುತ ದಳವು
ಬಿಟ್ಟ ಗುರುತುಗಳ ಅಳಿಸುತಲಿ
ಜಾಡಿಸಿ ಒದ್ದೆ ಕೋಮಲ ಮಡಿಲ,
ಅಳಿಸದ ಗುರುತನ್ನಿಡಿಯುತಲಿ

ಹುಟ್ಟಿಸಿ ತಪ್ಪಿಗೆ, ಬಿಕ್ಕಲು ಕೊಡದೆ
ಹಿಡಿದಿಟ್ಟಿತು ದುಃಖದ ಹೊರೆಯ
ಒರಟಿಗೆ ನೀನು ಸಿಕ್ಕಿದರೆ
ಶಪಿಸುತಲಿ ತಡೆಗಟ್ಟಿದ ಪೊರೆಯ

ವಾಲಾಡುವೆ ತುಸು ಮೆಲ್ಲನೆ ಗಾಳಿಗೆ
ಹಿಂಗುವ ಅವಸರವೇ ನಿನಗೆ?
ಮಿಟುಕಿಸದೆ ಕಣ್ತೆರೆದು ನೋಡಿವೆ
ದಳಗಳು ನಿನ್ನನು ಕೊನೆಗಳಿಗೆ

ಜಾರಿದವೆಷ್ಟೋ ಮಣ್ಣಿನ ಒಡಲಿಗೆ
ಹಾರಿದವೆಷ್ಟೋ ಪಕ್ಕದ ಮಡಿಲಿಗೆ
ನೀನಾದರು ಮಿನುಗಿ, ಸಿಂಚನವಾಗುವೆಯಾ,
ಅಂಜನವಾಗುತ ಹೊತ್ತವುಗಳಿಗೆ?

ಮತ್ತೇ ಹೊಸದಾಯಿತು ಮುಂಜಾನೆ
ಮತ್ತೇ ಬಸಿರಾದವು ತರು ಲತೆಗಳು
ಮತ್ತೆ ಸಂದಿಸುವ "ಋಣವಿದ್ದರೆ"
ಮಂಜಿನ ಮುಸುಕಿನ ಬೆಳಕಿನೊಳು........

                                  --ರತ್ನಸುತ

Friday, 21 December 2012

ಹೆಣ್ಣೇ!!!....... ಕವಿಯಾಗಿಸಿದೆ ನನ್ನ??


























ಬೆನ್ನುಡಿಯಾಗುವೆ ಏಕೆ ಬಾಲೆ?
ನನಗಿಲ್ಲ ಮುಂದೊಂದು, ಹಿಂದೊಂದು ಕಣ್ಣು
ಬರೆಯಿಸಿಕೊಳ್ಳಲು ನನಗಿಲ್ಲ ಚಿಂತೆ
ಬೇಸರ ಇಷ್ಟೇ, ಓದಲಾಗದಲ್ಲ ಅದನ್ನು !!

ಆಟವಾಡುವೆ ಸರಿ, ಬಾರಿ ಘಟಿ ನೀ
ಅದರಲ್ಲೂ, ಕಣ್ಣಾ-ಮುಚ್ಚಾಲೆಯಲಿ ಫಟಿಂಗಿಣಿ
ಕಟ್ಟಿರುವೆ ಬಟ್ಟೆಯ ಕಣ್ಮುಚ್ಚಿಸಿ ನನಗೆ
ಪರಿಣಿತ ನಾನಲ್ಲ, ಸೋಲುವುದು ಖಂಡಿತ, ಕೇಳೆ ತರುಣಿ!!

ಮೆಚ್ಚಿ ನಾ ಬರೆದ, ಒಂದೊಂದು ಪದವೂ
ಚುಚ್ಚು ನಿಂದನೆಯ ಹೊತ್ತು ಛೆಡಿಸಿವೆ ನನ್ನ
ನಿನ್ನ ನೆರಳೆನಾದರೂ ಸೋಕಿತೇ ಅದಕೆ,
ಹಾಗೆ ಸ್ವಭಾವಿಸಲು ಹೋಲುತ ನಿನ್ನ ??!!

ಹಾಗೊಮ್ಮೆ ಬಿಟ್ಟ ಗುರುತನ್ನೂ ಅಳಿಸಿ ಹಾಕುವೆ
ಯಾವುದೇ ಸೂಕ್ಷ್ಮ ಸುಳಿವನ್ನೂ ನೀಡದೆ
ಮೈ ತುಂಬ ಕಣ್ಣು, ಕಿವಿ, ಮೂಗನ್ನು ಇರಿಸಿದೆ
ಹೇಗಾದರೂ ನಿನ್ನ ಸ್ಪರ್ಶಿಸುವ ಸಲುವೇ

ಪಾದ ಕಿರು ಬೆರಳಿಗೆ, ಹೆಬ್ಬೆರಳ ಕಾಟ
ರಂಗೋಲಿ ಬಿಡಿಸಲಾರಂಬಿಸಲು ಪೀಕಲಾಟ
ಹಿಂಬಾಲಕನಾಗುವುದು ಅದಕಿಡದ ಮೀಸಲು
ಗಂಡಸ್ತಿಕೆಯ ಪ್ರಶ್ನಿಸುವ ಗೊಂದಲಾಟ

ಉದುರಿದೆ ಕೇಶ, ವಯಸ್ಸನು ಹೆಚ್ಚಿಸಿ
ಮುದುಡಿದೆ ಅದರವು ಮೌನವನು ಸೂಚಿಸಿ
ಸಂಕೋಚದ ಅಲೆಗಳು ಮನವ ತಟ್ಟಿವೆ
ತೀರದಲಿ ಗೀಚಿದ ಬಯಕೆಗಳ ಅಳಿಸಿ

ಇನ್ನಾದರು ತುಂಬು ಬಾ, ಮುನ್ನುಡಿಯ ಹಾಳೆ
ನಾನಾಗುವೆ ಫಲಕ,ನೀ ಪ್ರಣಯ ಶಾಲೆ
ಕೈಯ್ಯಾರೆ ತಿದ್ದು ನೀ ನನ್ನ ಮಡಿಲಕ್ಷರವ
ಕವಿಯೇ ನಾ, ನೀ ಮೆಚ್ಚುಗೆಯ ಕವಿತೆ ಮಾಲೆ......


                                               --ರತ್ನಸುತ

Tuesday, 11 December 2012

ಹೊಸತಾಗಲಿ ಕನ್ನಡಕೆ ಹೊಸ ವರುಷ

ಹೊಸ ವರುಷದ ಹೊಸ ಕನಸಿನ ಕವನ
ಹೊಸತನ ತರುವುದೇ ಹೊಸಬರ ಮಿಲನ?
ಹೊಸ ಬರವಸೆಯಲ್ಲಿ, ಹಸಿರಾಗಿ, ಚಿಗುರಲಿ ನಮ್ಮತನ
ಹೊಸ ಆಲೋಚನೆಯ, ಆಚರಣೆ, ಆಗಿಸುವ ಸುದಿನ

ಹೊಸ ವರುಷದ ಹೊಸ ಹಸಿವಿನ ಕವನ
ಕನ್ನಡಿಗರೇ ಇರಲಿ ನುಡಿ ಗಮನ!!


ಅಭಿರುಚಿಗಳ ಬೆಳೆಸಿ
ನವರಸಗಳ ಬೆರೆಸಿ
ಸವಿಯಾದ ನುಡಿಯ ಹಿರಿಮೆ ಸಾರೋಣ
ಅನುಬಂಧವ ಬಿಗಿಸಿ
ಅಭಿಮಾನವ ತೋರಿಸಿ
ಕನ್ನಡಿಗರು ನಾವು ಒಂದೇ ಅನ್ನೋಣ

ಒಂದೇ ನಾಡಿನ, ಒಂದೇ ಹಾಡಿನ, ಪದಗಳ ಹೂರಣ
ನಾನು ನೀನು ನಾವಾಗೋಣ, ನೋವೋ ನಲಿವೋ ಜೊತೆಯಾಗೋಣ
ತನು, ಮನಗಳ ತುಂಬಿಸೋಣ

ಹೊಸ ವರುಷದ ಹೊಸ ಕದನದ ಕವನ
ಗೆಲುವಿಗೆ ಬೇಕಿದೆ ಸ್ವಾರ್ತದ ಮರಣ
ಒಲವಿನ ಬಲವನ್ನ, ಛಲವನ್ನ, ಎಲ್ಲೆಡೆ ಹಂಚೋಣ
ನಾಳೆಯ ನಮ್ಮವರ, ನಮ್ಮೆದೆಯ ಮೇಲ್ಗಡೆ ಮೆರೆಸೋಣ

ಹೊಸ ವರುಷಕೆ ಹರಿಯಲಿ ಹೊಸ ಕಿರಣ
ಆಗಲಿ ಕನ್ನಡತನದ ಹೊಸ ಜನನ...................

                                         --ರತ್ನಸುತ

Saturday, 8 December 2012

ಹೀಗೂ ಒಂದು ಕವನ!!!??

























ಮೌನವೇ ರಾಗ, ಏಕಾಂತವೇ ಭಾವ
ನಡುವೆ ಒದ್ದಾಟವೇ ಒಂದು ಹಾಡು 
ಗೀಚುವುದೇ ಸಾಲು, ತೋಚುವುದೇ ಪದ್ಯ 
ಹೀಗಿದೆ ಏಕಾಂಗಿ ಕವಿಯ ಪಾಡು 

ಕಂಡದ್ದೇ ಸ್ಪೂರ್ತಿ, ಅಂದುಕೊಂಡದ್ದೇ ಅರ್ಥ 
ತಾನಾಗೆ ಹರಿದ ಅಕ್ಷರದ ಕಾಲುವೆ 
ಮಿಂದಷ್ಟೇ ಖುಷಿ, ಸಹಿಸಿಕೊಂಡಷ್ಟೇ ಸಹನೆ 
ತೂಗಾಡಿ ಕಟ್ಟಿಕೊಂಡ ಪದಗಳ ಸೇತುವೆ 

ಬಂದಷ್ಟೇ ನಿದ್ದೆ, ತಿಂದಷ್ಟೇ ಹಸಿವು 
ಬಾರದ ನೆನಪುಗಳ ಕಣ್ಣಾ ಮುಚ್ಚಾಲೆ 
ಸಿಕ್ಕಷ್ಟೇ ಗೆಲುವು, ಸಾಕಷ್ಟು ಸೋಲು 
ಒಂದಿಷ್ಟು ತಿದ್ದುಪಡಿ ಹಾಳೆ ಮೇಲೆ 

ಒತ್ತಾಯದ ಸಮಯ, ಅದೇ ಹಳೆ ವಿಶಯ 
ಮಂಕಾದ ವಿಸ್ತಾರದಾವರಣ ಸುತ್ತ
ಮಾಡೆಂದು ಬಿಟ್ಟದ್ದ; ಬಿಟ್ಟು ಬೇರೆಲ್ಲ-
-ಯೋಚನೆಯ ಸೂಚನೆ ನೀಡುವ ಚಿತ್ತ

ಅಲ್ಲೊಂದು ಸದ್ದು, ಆ ಕಿವಿಯ ವೊದ್ದು 
ಗಮನವ ಸೆಳೆಯುವ ಧುಸ್ಸಾಹಾಸ ಯತ್ನ 
ಕವಿ ಕಿವುಡನಲ್ಲ, ಆದರೂ ಸ್ಪಂದಿಸದೆ 
ಮುಂದುವರಿಸಿದ ಅವನ ನಿರಾಕಾರ ಸ್ವಪ್ನ 

ಮುಗಿದಿತ್ತು ಬರಹ, ಮಳೆ ಹನಿಯ ತರಹ 
ಭೂಮಿಯ ದಾಹವ ನೀಗಿಸದ ಹಾಗೆ 
ಹಣೆಯಿಟ್ಟು ಬೆವರ, ಜಾರಲು ಬಿಡದೆ 
ಒಡಲಲ್ಲೇ ಕೂಡಿಟ್ಟುಕೊಂಡರೆ ಹೇಗೆ?
ಜಾರಲು ಬಿಡಿ ಯಾವುದಾದರು ರೂಪ ತಾಳಲಿ, ಈ ಕವಿತೆ ಹಾಗೆ......

                              --ರತ್ನಸುತ 

Friday, 7 December 2012

ಆಸೆಯ ಭಾವ ಒಲವಿನ ಜೀವ {ನಕಲು ಪದ್ಯ}

























ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ
ಹಾಡುತ ಸೋಲಿಸುವವಳೆಲ್ಲೆಂದು ಕೇಳಿದೆ


ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ    {೧}


ಆಸೆಯ ದೋಣಿಯಲಿ ಹೂವಿನ ಹಾಸಿಗೆಯ
ಮಡಿಲಲಿ ಕನಸಿಗೆ ಜಾಗವು ಎಲ್ಲಿದೆ
ಒಂಟಿ ಯಾನದಲಿ ಪ್ರಾಯದ ಬಿಂದಿಗೆಯು
ಅರೆ-ಬರೆ ತುಂಬಿದೆ, ಕುಲುಕಲು ಚೆಲ್ಲದೇ?
ಕಡಲಿಗೂ ಇಂಥ ಒಂಟಿ ದೋಣಿ ಯಾನ ಬೇಡವಾಗಿದೆ.......

ಕಾಣದ ಶಾಂತಿ, ಕಾಮನೆ ಮೀಟಿ
ಮೀನಾಗಿ ಹೋಗಿದೆ
ಮನದ ಸರೋವರವು ಈಜುಗೊಡದೆ ತೆರೆದಿದೆ


ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ     {೨}


ಕಲ್ಲಿಗೆ ಸ್ಪರ್ಶಗಳ ಸ್ಪಂದನೆಯಾಗಿರಲು
ಸೋಕದ ಬೆರಳಿಗೆ ಕಾಯುತ ನಿಂತಿದೆ
ನಾಚುವ ಕಲೆಯನ್ನು ತಾ ಕಲಿತಾಗಿರಲು
ನಿನ್ನಯ ಸೋಕಿಗೆ ಕರಗಿ ನೀರಾಗಿದೆ
ಹೆಸರಿಗೆ ಮಾತ್ರವಲ್ಲಿ ಕಲ್ಲು ಶಿಲೆಯ ಗುರುತು ಉಳಿದಿದೆ.....

ನೆರಳಿಗೆ ನಾಟಿ, ನನ್ನನೆ ದಾಟಿ
ನಿನ್ನಲ್ಲಿ ಸೇರಿದೆ
ಸವಿದ ಜೆನಿಗೂ ಸಿಹಿ ನೀನೆಂದು ಸಾರಿದೆ.....


ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ     {೩}



                                --ರತ್ನಸುತ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...