Wednesday, 9 April 2014

ಕಳೆದ ಮನಸಿಗೆ

ಕನಸುಗಳ ಬೆನ್ಹತ್ತಿ ಎಲ್ಲಿ ಕಳೆದೆ ಮನವೇ?!!
ನಿನ್ನವನು ನಾನಿಲ್ಲಿ ಒಂಟಿ ಜೋಡು;
ತಕ್ಷಣಕೆ ಹೊಳೆಯದ ಮುನಿದ ಸಾಲುಗಳಿವೆ
ಬೇಗ ಅಂದರೆ ಹೇಗೆ ಬರೆವೆ ಹಾಡು?!!

ಬಿತ್ತ ಬೀಜಗಳೆಲ್ಲ ಬೆಚ್ಚಗುಳಿದವು ಮಣ್ಣ-
-ಲ್ಹೂತುಕೊಂಡವು ಚಿಗುರಿನ್ಹಂಗು ತೊರೆದು;
ಹರಿಸಿಕೊಂಡರೂ ಸಾಲುತಿಲ್ಲ ಕಣ್ಣಿನ ಹನಿಗ-
-ಳೆಲ್ಲ ಬತ್ತಿದವಲ್ಲಿ ಅತ್ತು ಕರೆದು!!

ಗಲ್ಲಿ-ಗಲ್ಲಿಗಳಲ್ಲಿ ಬಿಟ್ಟ ಗುರುತುಗಳನ್ನು
ಪತ್ತೆ ಹಚ್ಚುವ ಗೋಜಲಾಟದಲ್ಲಿ
ಗೆದ್ದರಿಲ್ಲದ ಗಮ್ಯ, ಸೋತರಿಲ್ಲದ ಶೂಲ
ನೋವ ಹುಣ್ಣನು ಇರಿದು ಕೆದಕುವಲ್ಲಿ!!

ಕೆಟ್ಟು ನಾರುವ ಬೆವರ ಎಷ್ಟು ಹರಿಸಲಿ ಹೇಳು?!!
ಚಟ್ಟ ಕಟ್ಟುವ ಕಲೆಗೆ ಪಳಗಲಿಲ್ಲ;
ಸತ್ತ ನೆನಪಿನ ತುಂಬು ಶೋಕದಾಚರಣೆಯನು
ಇದ್ದ ಚೂರು ಮಾಡಗೊಡುತಲಿಲ್ಲ!!

ಏನು ಕಾರಣ ಕೊಡಲಿ ಕಾದ ಎದೆ ಮೇಗಡೆ
ಸುಡುಗಾಡಿನಂತೊಂದು ಮೌನವಿಹುದು?!!;
ಹರಿದ ಉಸಿರಿಗೆ ಒಂದು ಮಧ್ಯಂತರ ನೀಡಿ
ಆನಂತರ ಸಲಹೆ ಕೇಳಬಹುದು!!

ಮತ್ತೂ ಮಾಗಲಿ ಗಾಯ, ಎಲ್ಲೆ ಮೀರಲಿ ಸಹನೆ
ಆಗಿಸಲಿ ನನ್ನೊಡಲಲೊಂದು ಗುರುತು;
ಎಲ್ಲ ಮುಗಿದರೆ ಮತ್ತೆ ಹೊಸತು ಹುಡುಕಾಡುವೆ
ಆಳ ಯೋಚಿಸುತಲಿ ಮನದ ಕುರಿತು!!

                                              -- ರತ್ನಸುತ

Sunday, 6 April 2014

ನನ್ನ ಪ್ರೀತಿಯ ತಾತ

ಹೆಜ್ಜೆ ಗುರುತುಗಳ ಬಿಟ್ಟು
ಸಾಗು ದೇವ ಮಾನವ
ಮೃದು ಮೊಳಕಾಲು, ಪಾದಗಳು
ಇನ್ನು ಅದೆಷ್ಟೋ ಇವೆ
ನಿನ್ನ ಹಿಂಬಾಲಿಕೆಗೆ ಕಾದು

"ಮುಳ್ಳು ಚುಚ್ಚೀತು ಹುಷಾರು"
ಅದಾವ ಲೆಕ್ಕ ನಿನಗೆ?!!
ಬಿರುಕು ಬಿಟ್ಟ ಬೆರಳುಗ-
-ಳೊಂದೊಂದೂ ಸಾಹಸ ಗಾಥೆ,
ಸವರಲೂ ಸಹಿಸಲಾಗದ ನಾನು
ನಿನ್ನ ಶ್ರಮವ ಊಹಿಸಲಿಕ್ಕೂ
ಅನರ್ಹನು!!

ನೆರೆ ತೋಟಗಳಲ್ಲಿ
ಕಳೆ ಚಿಗುರು ಕಣ್ಣಿಗೆ ಬಿದ್ದರೂ
ಚುವುಟಿಹಾಕುವ ನಿನ್ನ ಮನಸಿನ ತೂಕ
ಅದಾವ ಶಿಖರಕ್ಕೆ ಸಾಟಿ?!!
ಮಾತನಲ್ಲಗಳೆದವರೆಡೆ ಬೀಸುವೆ
ಅಸಮಾದಾನದ ಚಾಟಿ!!

ಬಿಳಿ ಕುರುಚಲು ಗಡ್ಡಕ್ಕೆ
ಮುತ್ತಿಕ್ಕಿಸಿಕೊಳ್ಳಲಿಕ್ಕೆ ನೀ ಪಡುತಿದ್ದ ಸಾಹಸ
ಆ ಬಗವಂತನ ಹೊಟ್ಟೆಗೂ
ಚುರುಕು ಮುಟ್ಟಿಸುವಂತದ್ದಾಗಿತ್ತು;
ಕೊನೆಗೂ ಸಿಕ್ಕರೆ ಅದೇ ಖುಷಿ
ಕಾಸಿನ ವಿಚಾರದಲ್ಲಿ ಕಂಡೇ ಇಲ್ಲ
ಮಾಡಿದ್ದು ಚೌಕಾಶಿ!!

ಎಷ್ಟು ಸರಳ ಕಣಯ್ಯ ನೀನು?!!
ನೆನಪಿಗೆ ಬಂದಾಗಲೆಲ್ಲ
ಅದೇ ಪಟಾಪಟ್ಟಿ ಚಡ್ಡಿ,
ಬನೀನು, ಟವಲ್ಲು
ಕಣ್ಣಲ್ಲಿ ಅಂಟಿದ ಗೀಜು
ಅದೇ ಮೆರಗು!!
ಎದೆ ಮೇಲೆ ಮಲಗಿದರೆ
ಕಿವಿಗೆ ಹೃದಯದ ಪಾಠ
ಮೂಗಿಗೆ ಬೆವರಿನ ಪಾಠ
ಕಣ್ಣಿಗೆ ಕನಸಸಿನ ಪಾಠ!!

ಸಣ್ಣವನಾಗಿದ್ದಾಗ ಕೈ ಹಿಡಿದು
ಇಡಿ ಬೆಂಗಳೂರು ಸುತ್ತಿಸಿದ್ದೆ,
ಒಂದೊಂದು ಊರಿಗೂ
ಒಂದೊಂದು ನೆನಪು ಮೆಲಕು ಹಾಕುತ್ತ
ಇಬ್ಬರು ಆಗಲೇ ಕೂತಿದ್ದ
ಬಸ್ಸಿನ ಇಕ್ಕಟ್ಟು ಸೀಟಿನಲ್ಲಿ ನನಗೊಂದಿಷ್ಟು
ಜಾಗ ಹೊಂದಿಸಿದ್ದು ಇನ್ನೂ ನೆನಪಿದೆ!!

"ಎಷ್ಟೆಲ್ಲ ಬದಲಾವಣೆ
ಜಾಗತೀಕರಣ, ಖಾಸಗೀಕರಣ
ಅಭಿವೃದ್ಧಿಗಳ ಹೆಸರಲ್ಲಿ;
ಬದಲಾದ ಹಳ್ಳಿಗಳ ಗುರುತಿಗೆ
ಹಳೆ ಹೆಸರುಗಳು ಓಳ್ಡ್ ಫ್ಯಾಷನ್,
ಯಾವೊಂದೂ ನಾಲಗೆಗೆ ಹೊರಳೊಲ್ಲ" ಎಂದು
ನೀ ನಗುವಾಗಿನ ಹಿಂದೆ
"ನಮ್ಮ ಕಾಲ ಅದೆಷ್ಟು ಚೆಂದ" ಅನ್ನುವ
ನಿಟ್ಟುಸಿರ ಭಾವ!!

ನನ್ನ ಎತ್ತಿ ಆಡಿಸಿದ ಕೈಗಳು
ಈಗ ನನ್ನ ಬೆನ್ನು ಸವರಿ
ತಲೆಯನ್ನು ನೀವುತ್ತಿದ್ದಂತೆ
ಕಣ್ಣುಗಳು ಆಸೆ ಪಡುತ್ತಿವೆ
ಮೊಮ್ಮಗನ ಮದುವೆಗೆ
ಮರಿ ಮೊಮ್ಮಗನ ಕನಸಿಗೆ!!

ತಾತ,
ನಿನ್ನಾಸೆಗಳೆಲ್ಲವೂ ನಿಜವಾಗುತ್ತವೆ
ಪ್ರಾಮಿಸ್!!

                             --ರತ್ನಸುತ

Saturday, 5 April 2014

ಹಾಳಾದ ಬೇಸಿಗೆ

ಬಿಸಿಲು ಸಾಕಷ್ಟಿದೆ ಹೊರಗೆ
ಮೈ ಬೆವರನ್ನು ಹಿಂಡಲಿಕ್ಕೆ;
ಬಿಡುವಿಲ್ಲದೆ ಒಂದೇ ಸಮನೆ 
ತಿರುಗುವ ಫ್ಯಾನಿಗೆ ಹೊಟ್ಟೆ ಉರಿ
ತನ್ನುಸಿರಿನಾಟಕ್ಕೆ ಕರ್ಟನ್ನುಗಳು
ಎಡಬಿಡದೆ ಬಳುಕುತ್ತ 
ಅತ್ತ ಕಿಟಕಿಯ ಬಿಸಿಯನ್ನೂ
ಇತ್ತ ಗಾಳಿಯ ಸವಿಯನ್ನೂ ಸವಿದು
ಸುಖಿಸುತ್ತಿರುವುದ ಕಂಡು!!

ದಾರಿ ಹೋಕರೆಲ್ಲ ಹಿಡಿದಿದ್ದಾರೆ
ಕಪ್ಪು ಛತ್ರಿಗಳ ತಲೆಯ ಮೇಲೆ,
ಮಂಜುಗಣ್ಣಿಗೆ ಕಾಣುತ್ತಿತ್ತು;
ಬೆಚ್ಚೆದೆಯ ಸುಂದರಿಯರು
ತಮ್ಮ ಮುಖ ಮರೆಸಿ ಓಡಾಡುವುದು
ಎಷ್ಟು ಸರಿ?
ನೆರವಿಗೆ ಮಧ್ಯಂತರ ಮೋಡವಾದರೂ
ಬರಬೇಕಿತ್ತು ನೆರಳಾಗಿ!!

ತಲೆದಿಂಬು ಒದ್ದೆಯಾಗಿದ್ದು
ಕನಸುಗಳು ಕಾವೇರಿ,
ಇನ್ನು ಎಲ್ಲೆಲ್ಲೋ ಒದ್ದೆ-ಒದ್ದೆ
ಒಂದೊಳ್ಳೆ ತಣ್ಣೀರ ಸ್ನನವ ಬಯಸಿ;
ತುರಿಕೆ ತರಿಸಿದ ಬೆನ್ನು ಎಟುಕುತ್ತಿಲ್ಲ
ಹಾಳಾದ ಕೈಗಳಿಗೆ,
ಹಿಂದಿನ ದಿನವಷ್ಟೇ 
ಉಗುರು ಕತ್ತರಿಸಿದ್ದು ಬೇರೆ!!

ಐಸ್ ಕ್ಯಾಂಡಿ ಮಾರುತ್ತಿದ್ದವನಂತೂ
ಪೂರ್ತಿ ನೆಂದೇ ಹೋಗಿದ್ದ!!
ಆಗಾಗ ಒಂದು ಚೀಪಿಕೊಂಡರೆ
ಅವನಿಗೇನು ದರ್ದು?
ಆ ಅಜ್ಜನ ಕಾಲದ ಐಸ್ ಪೆಟ್ಟಿಗೆ ಮೇಲೆ
ಬಣ್ಣ ಮಾಸಿದ ಚಿತ್ರಗಳು,
ಅದು ಅವನ ಪೂರ್ವಿಕರ ಪಾಡು
ಅವನದ್ದೂ ಸಹಿತ !!

ನೀಲಾಕಾಶದಿ ಬಿಡಿಸದ ರಂಗೋಲಿಯ
ಅಲ್ಲಲ್ಲಿ ಇಟ್ಟ ಚುಕ್ಕಿಗಳ ಹಿಂಡು,
ಸುಡುವ ಸೂರ್ಯನಿಂದೊಂದಿಷ್ಟು ದೂರ
ತಪ್ಪಿಸಿಕೊಂಡು;
ಕಾಣುತ್ತಲೇ ಕುತ್ತಿಗೆ ಮೀರಿದೊಂದು ಹನಿ
ಮೆಲ್ಲ ಜಾರಿದ್ದು
ದಿಂಬಿನ ಮಡಿಲಾಚೆ ಪೋಳಾಗಲೆಂದು
ಒಣ ನಾಲಗೆಯ ಚಪ್ಪರಿಕೆ ನಡುವೆ!!

ಬೇಸಿಗೆಗಳು ಹೀಗೇಕೆ?
ಹಗಲು-ಇರುಳೆಂದು ನೋಡದೆ
ಸ್ಖಲಿಸುತ್ತವೆ ಉಪ್ಪು ನೀರನ್ನು;
ಹಿಂದೆಯೇ ಬಿಟ್ಟುಗೊಡುತ್ತ 
ಸುಕ್ಕು ಗುರುತುಗಳನ್ನು!!

ವಯಸ್ಸು ದಾಟಬೇಕು
ಒಂದೆರಡು ಮೈಲಿ ದೂರ
ಮರಳಿ ಹಿಂದಿರುಗಿ ಬರುವಂತೆ;
ನಾಳೆಗಳು ಹೇಗೋ 
ಎಂಬ ಅರಿವಾಗಿಸಿಕೊಂಡು
ಇಂದಿನವುಗಳ ಅನುಭವವಿಸಬೇಕು
ಇಕ್ಕಟ್ಟಿನಲ್ಲೊಂದು ಸುಖವ ತಡಕಿ 

                              --ರತ್ನಸುತ

Friday, 4 April 2014

ಮಿಣುಕು

ಮೂಗುತ್ತಿ ಕಳಕೊಂಡು
ಕಿಂಚಿಷ್ಟೂ ಚಿಂತಿಲ್ಲ
ಯಾವ ದೆವ್ವ ಮೆಟ್ಟಿಕೊಂತು
ಬಿನ್ನ ನಡತೆಗೆ
ಮೂರ್ಹೊತ್ತೂ ಸಳೆಕೊಂಡು
ಬೆನ್ನ ಹಿಂದೆ ಬೀಳುತೀಯೆ
ಸಬೂಬು ಏನ ನೀಡಬೇಕು
ದೇಹ ಜಡತೆಗೆ

ಕೆಂಪೆದ್ದ ನಾಲಗೆಯಲಿ
ನನ್ನ ಕೋಪ ಬಿಂಬಿಸುತ್ತ
ಮತ್ತೂ ಸುಣ್ಣಗಾಯಿ ತೀಡಿ
ಸುಟ್ಟುಕೊಳ್ಳುವೆ
ಇರಲಿಯೆಂದು ಚೂರು-ಪಾರು
ಘದರು ಗಾಂಭೀರ್ಯದಲಿ
ಅಂಗಿ ಕೊನೆಗೆ ನಿನ್ನ ಸೆರಗ
ಕಟ್ಟಿಕೊಳ್ಳುವೆ

ಮೊನ್ನೆ ತಂದ ಕೆಂಗುಲಾಬಿ
ಹಾಳೆ ನಡುವೆ ವ್ಯರ್ಥವಾಗಿ
ಮರು ಹುಟ್ಟಿನ ಹಕ್ಕಿನಲ್ಲೇ
ಸಿಟ್ಟು ಬೀರಿದೆ
ಸಂತೆಯಲ್ಲಿ ಕೊಡಿಸದಂಥ
ಮಣಿಯ ಸರಕೆ ಮುನಿಸಿಕೊಂಡೆ
ಹಠವ ಜೊತೆಗೆ ಹೊತ್ತು ತಂದೆ
ಬಿಟ್ಟು ಬಾರದೆ

ಘಾಟು ನುಡಿಯ ಕೊಂಕಿನಲ್ಲಿ
ದಾಟಿ ಬರುವೆ ಎಲ್ಲ ವಾದ
ಸೋತ ದಿನದಿ ಮಾತ್ರ ನೀನು
ಸತ್ಯ ಸುಂದರಿ
ಹೇಳಿ ತೀರದಂಥ ಮಾತು
ಪಳಗಿತಲ್ಲ ಸೋತು-ಸೋತು
ಹೊಗಳಿಬಿಟ್ಟರಲ್ಲಿ ಮುಗಿಯದಲ್ಲ
ವೈಖರಿ

ಮೂಗುತ್ತಿ ಹುಡುಕಾಟಕೆ
ನನ್ನ ಸಂಗ ಕರೆದು ನೋಡು
ಸಿಗದ ಅದಕೆ ಹೊಸತು ರೂಪ
ಮತ್ತೆ ನೀಡುವೆ
ಕಳ್ಳತನದ ಅರಿವಿನಲ್ಲೂ 
ಅರಿಯದಂತೆ ನಟಿಸುತೀಯೆ
ಮೌನ ವಹಿಸಿದಾಗ ಮುಷ್ಠಿ
ಬಿಡಿಸಿಕೊಳ್ಳುವೆ

                         --ರತ್ನಸುತ

Thursday, 3 April 2014

ಕಾವ್ಯ ಕನ್ನಿಕೆ

ಕಣ್ಣರಳಿದರಚ್ಚರಿ
ಮೂಗರಳಲು ಮುನಿಸು
ತುಟಿ ಜಗ್ಗುವುದೇ ಸ್ಮಿತ 
ಮೊಗ ಸುಂದರ ಕನಸು
ಗುಟ್ಟಿನ ಶ್ರವಣೇಂದ್ರಿಯ
ಸುತ್ತ ಕುರುಳ ತೀರ
ಗಲ್ಲವ ನಂಬಿದ ಮಚ್ಚೆಗೆ
ಕಳ್ಳ ನಗೆಯ ಭಾರ

ಬಾಜು ಎಳೆಯ ಕಂದು
ಬೆರಳು ಗರಿಯ ಕುಣಿತ
ಎದೆಯ ಶಂಖದೊಳಗೆ
ಪ್ರಣಯ ಪವನ ಮೊರೆತ
ಎಡಕೆ ಬಲದ ಸಾಟಿ
ಬಲ ಎಡಗಡೆ ಬಿಂಬ
ಮಥಿಸಿ ದಣಿಯುವಲ್ಲಿ
ಮಧುರಾಮೃತ ಕುಂಭ 

ನಡುವ ರಸ್ತೆ ಮೇಗಡೆ
ಮಡತೆಗಿಲ್ಲ ಉಳಿವು
ಹೊತ್ತು ಗೊತ್ತು ನೋಡದೆ
ಅರಳಲೊಲ್ಲ ಹೂವು
ನೇರ ಹೋದರಲ್ಲಿಗೆ
ಅಧಿಕೃತ ಅಪರಾಧ
ಮೀರಿ ಮುಂದುವರಿದರೆ
ಕಾವ್ಯದೆದೆಯ ಛೇದ

ತೆಳು ರಾಗಿ ಪೈರಿನ
ಮೊದಲ ದಿನದ ಇಣುಕು
ಕರವ ಮುತ್ತಿ ನಿಮಿರಿದ
ರೋಮಾಂಚನ ಪಲುಕು
ಪುಷ್ಕರಿಣಿ ಕಣ್ಣಿನಲ್ಲಿ
ನೂರಾಸೆಯ ತೆಪ್ಪ
ನಾಜೂಕು ನುಡಿಯಿಂದ
ಕಿವಿಗೆ ಜೇನ ತುಪ್ಪ

ಪಾದವಿಟ್ಟ ಕಡೆಯಲೆಲ್ಲ
ಪದಗಳ ಪಾಂಡಿತ್ಯ
ಹೆಬ್ಬೆರಳು ಗೀರಿದಲ್ಲಿ
ಕಿರುಗಾತ್ರದ ಚಿತ್ರ
ಒಡಲ ಬಯಲ ಉಬ್ಬು-ತಗ್ಗು
ಮತ್ತೊಂದು ಭೂಮಿ
ಹೇಮಂತದ ಚಂದ್ರನಂತೆ
ನಾ ಅದುರಿದ ಪ್ರೇಮಿ!! 

                        -- ರತ್ನಸುತ

Wednesday, 2 April 2014

ಬೆಳಕನ್ನೂ ಕತ್ತಲಾಗಿಸಿ

ನಡುರಾತ್ರಿ ಕರೆಯಲ್ಲಿ
ಇಡಿ ರಾತ್ರಿಗೆ ಖಾಲಿಯಾಗದಷ್ಟು
ಮಾತುಗಳ ಆಡಿಕೊಂಡದ್ದು
ತಾಮಸಕ್ಕೂ ಅಸಹನೀಯವಾದಂತಿದೆ!!

ಬೆಳಕನಿಷ್ಟಕೆ ಬಿಟ್ಟು 
ಚೇತರಿಕೆ ಕಾಣಹೊರಟ 
ಮನಸುಗಳ ಬೇರಾಗಿಸುವ ಅದನು
ಕಣ್ಮುಚ್ಚಿಕೊಳ್ಳುತಲೇ ಬಿಗಿದಪ್ಪಬೇಕಿದೆ!!

ಕಣ್ಣೆವೆಯ ಕಾವಲನು ದಾಟಲಾಗದ ಕಿರಣ
ಬಾಗಿಲಲ್ಲೇ ಉಳಿದು ಸೋಲೊಪ್ಪದಾಗಿರಲು
ಹಠವೆಂಬ ಜಡ ಖಾಯಿಲೆಯ
ಖಯಾಲಿಯನು ಮೈಗೂಡಿಸಿಕೊಂಡು
ಮುಚ್ಚಿದವು ಮುಚ್ಚಿದಂತೆಯೇ ಇದ್ದವಲ್ಲಿ
ಬೆಳಕಿಗೆ ಗಡಿಪಾರು;
ಒಳಗೆ ಕತ್ತಲ ಜಾತ್ರೆ!!

ಅಂತರಗಳ ಪರಿಚಯದ ಪರಿವೇ ಇಲ್ಲದೇ
ಕೂಡಿಸುವ ಮಬ್ಬು
ಹಿಂದೊಮ್ಮೆ ನನ್ನ ನನ್ನೆದುರೇ ನಿಲ್ಲಿಸಿ
ಬೆದರಿಸಿದ್ದ ನೆನೆದು ನಕ್ಕು ಬಿಕ್ಕಾಗ
ಬೇಳಕಿಗೂ ಇಣುಕುವ ಕಾತರ 
ತನ್ನ ಮಧ್ಯಸ್ಥಿಕೆ ತೋರುವ ತುಡಿತ!!

ಅದೆಷ್ಟು ವಿನಿಮಯಗಳು
ರಾತ್ರಿಯ ವಹಿವಾಟಿನಲ್ಲಿ!!
ಸೋತರೂ ಸಿಹಿಯೇ
ಗದ್ದರಂತೂ ಲಾಟರಿ ಹೊಡೆದಂತೆ!!

ಕದಲದ ತುಟಿಗಳ ಕೇಳಬೇಕು,
ಹಚ್ಚಿದ ಕೆಂಪು ಸೀದಾ ಲಜ್ಜೆಗೆ
ನುಣುಪಾಗಿ ಬಳಿವುದೇ ಸೊಗಸು;
ಕಾಣಲು ಕಣ್ಣಿನ ಜರೂರತ್ತಿದೆ
ಬೆಳಕೇ ಬೇಕೆಂಬುದು ಸಣ್ಣತನವಾದೀತು!!

ಮಾತುಗಳು ಮುಗಿದಾಗ 
ಮುಗುಳುನಗೆಯೊಪ್ಪಿಗೆ;
ಅಡಗಿಸಿಟ್ಟವುಗಳು ಥಟ್ಟನೆ ಎಚ್ಚೆತ್ತು
ಸಜ್ಜಾಗುತಾವೆ ಸಮರಕ್ಕೆ
ತಮ್ಮ ನಕಲು ಬಣ್ಣವ ಒರೆಸಿ
ಅಸಲಿಗೆ ಮರಳಲು !!

                                -- ರತ್ನಸುತ 

ನಾನು, "ನಾನು"

ನಿನ್ನ ಮರೆತದ್ದು ನಾನಲ್ಲ 
ನನ್ನೊಳಗ "ನಾನು";
ನಾನೆಷ್ಟೇ ಬೇಡಿಕೊಂಡರೂ
ತನ್ನಂತೆ ತಾನು!!

"ನಾನು" ನನ್ನನ್ನ ಎಂದೂ
ನಂಬಿದವನಲ್ಲ;
ನಾ ನಂಬದೆ
ಬೇರೆ ದಾರಿಯಿರಲಿಲ್ಲ!!

ನಾನೊಲ್ಲದ ನನ್ನೊಡನೆ
ಏಕಿರಬೇಕು?
ಯಾರೋ ಸಾಕಿರಬೇಕು
ಒಂದೇ ತೊಟ್ಟಿಲ ತೂಗಿ?

ನಾನಿರುವಂತೆ ಇರಿಸದೆ
ಇರಿದಿರಿದು ಕಾಡುವುದು
ಇರುವಿಗೋ?
ಅರಿವಿಗೋ?
ಹರಿವಿಗೋ?!!

ನಾನಾಗಿ ನನ್ನನ್ನ
ದೂರುವುದು 
ನನ್ನತನಕ್ಕೂ ಪೆಟ್ಟು
ನನಗೂ ಸಹಿತ!!

ನನಗೇ ಗೊತ್ತಿಲ್ಲದಂತೆ
ಗುಟ್ಟಾಗಿ ಬರೆದೆ;
"ನಾನು" ಸಿಕ್ಕರೀಕುರಿತು
ಕೇಳಬೇಡಿ!!

ನಾ ಬರುವ ಹೊತ್ತಾಯ್ತು
ನನ್ನ ತಡೆಯಲು ಬೇಡ 
"ನನ್ನ" ತಪ್ಪಿಗೆ
ನನ್ನ ಗುರಿ ಮಾಡಬೇಡ!!

                   --ರತ್ನಸುತ 

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...