Monday, 24 August 2015

ನಾನೇನೆಂಬುದು!!

ಹಿತ್ತಲ ಇರುವೆ ಗೂಡಿನ ಸುತ್ತ
ಸಕ್ಕರೆ ಚಿಲ್ಲಿ ಬಂದೆ
ಮನೆಯೊಳು ಗೆಜ್ಜೆ ಕಟ್ಟಿಬಂದವುಗಳ
ವಿಷವಿತ್ತು ಕೊಂದೆ


ಬೆಳಕಿಗೆ ದಾರಿ ಮಾಡಿ ಕೊಟ್ಟು
ಕಿಟಕಿ ಪರದೆಯನು ತೆರೆದೆ
ಗಾಳಿ, ಬೆಳಕು ನುಸುಳದಂತೆ
ಹಣತೆಗೆ ಬೀಗ ಜಡಿದೆ


ಮೇಲೆ ಚಿಗುರ ಕಂಡು
ಹಬ್ಬದಂತೆ ಮಗ್ನಗೊಂಡೆ
ಕೆಳಗೆ ಕೊರೆದು ಕೊರೆದು
ಬೇರ ಸಹಿತ ದೋಚಿಕೊಂಡೆ


ಮುಗಿಲು ಸುರಿಸಿಕೊಂಡ ಹನಿಗೆ
ಖುಷಿಯ ಅರ್ಥ ಕೊಟ್ಟೆ
ಕೆನ್ನೆ ಮೇಲೆ ಮೂಡಿ ಬಂದವಕೆ
ನೋವನಿಟ್ಟೆ


ಹೊರಗೆ ಹರಕಲಂಗಿ ತೊಟ್ಟು
ಮೈಯ್ಯ ಮುಚ್ಚಿಕೊಂಡೆ
ಒಳಗೆ ಬಣ್ಣ ಕಳಚಿಕೊಳದೆ
ಗೌಪ್ಯವಾಗೇ ಉಳಿದೆ


ಬಾಗಿಲಲ್ಲಿ ತಳಿರು ಕಟ್ಟಿ
ಬಾಡಿದವನು ತೂರಿ ಬಿಟ್ಟೆ
ಕ್ರೌರ್ಯ ಕಾರ್ಯದಲ್ಲೂ ಮಾನವೀಯತೆ
ಮುಖವಾಡ ತೊಟ್ಟೆ!!


                                         -- ರತ್ನಸುತ

ಬೂದಿ ಮತ್ತು ಕವಿತೆ

ಒಲೆಯ ಮೇಲೆ ಹಾಲಿರಿಸಿ
ಕವಿತೆ ಬರೆಯುತ್ತಾ ಕೂತೆ
ಅತ್ತ ಹಾಲೂ ಉಕ್ಕಲಿಲ್ಲ
ಇತ್ತ ಕವಿತೆಯೂ!!


ಒಲೆ ಹಚ್ಚಿದ್ದರೆ ತಾನೆ
ಹಾಲು ಕುದಿಯಲು ಅವಕಾಶ?!!
ಒಳಗೆ ಕಿಚ್ಚಿದ್ದರೆ ತಾನೆ
ಕವಿತೆ ತೆರೆದ ಆಕಾಶ?!!


ಹಾಲ ಬಟ್ಟಲ ಒಳಗೆ
ಬೆರಳೊಂದ ಅದ್ದಿದೆ, ಹಾಲು ಒಡೆಯಿತು
ಬೆರಳೊಲ್ಲದೆ ಲೇಖನಿಯ ಬಿಗಿ ಹಿಡಿದೆ
ಕವಿತೆ ಉಸಿರುಗಟ್ಟಿ ಸತ್ತಿತು!!


ಒಲೆ ಹಚ್ಚಲು ಬಾರದವನು
ಕಾದು ಅಲ್ಲೇ ಸತ್ತೆ
ಕವಿತೆ ಬರೆಯಲಾಗದೆ
ಬಿಕ್ಕಳಿಸುತ ಅತ್ತೆ!!


ಬೂದಿ ಕೆದಕಿದಾಗ ಬಯಲು
ಸಣ್ಣ ಉರಿ ಕೆಂಡ
ಬರೆಯಲಾಗದವನೂ
ಸ್ವಂತ ದಾರಿ ಕಂಡುಕೊಂಡ


ಒಲೆ ಉರಿದಂತೆಲ್ಲ ಹಾಲು
ಉಕ್ಕಿ ಹೊರ ಹರಿಯಿತು
ಮೊದಲಾಗದ ಕವಿತೆಯೊಂದು
ಅಲ್ಲಿಗೆ ಕೊನೆ ಮುಟ್ಟಿತು!!


                          -- ರತ್ನಸುತ

ಒಂದಷ್ಟು ದಿನಗಳೆದಂತೆ

ತಪ್ಪು ತಿಳುವಳಿಕೆಗಳೆಷ್ಟು ಆಹ್ಲಾದಕರ!!
ಸ್ಪಷ್ಟನೆಗಳ ನೀಡುತ್ತಿದ್ದಂತೆ ತೆರೆದುಕೊಳ್ಳುವ
ಮನಸು ಮನಸುಗಳ ನಡುವಿನಂತರ
ಇಂಚಿಂಚು ಕಡಿಮೆಯಾದಂತೆಲ್ಲ
ಒಮ್ಮನಸಿನ ನಿರ್ಧಾರಗಳು ಹುಟ್ಟಿಕೊಳ್ಳುತ್ತವೆ!!


ಜಗಳಗಳೇ ಎಷ್ಟೋ ಬಾರಿ
ಸಮಸ್ಯೆಗಳ ಪರಿಹಾರ ಮದ್ದಾದಾಗ
ದಿನಕ್ಕೊಮ್ಮೆಯಾದರೂ ಜಗಳವಾಡಬೇಕನಿಸುವುದಲ್ಲದೆ
ಬೇರೆ ತೀಟೆ ಕಾರಣದಿಂದಾಗಲ್ಲ!!


ಮಾತು ಮಾತಿಗೂ ಕೊಂಕು ಸಿಕ್ಕಿಸಿ
ಕಾಲೆಳೆತಕ್ಕೆ ಮುಂದಾದ ನಾಲಗೆ
ಮೌನದಲಿ ಪಾಡಿಕೊಂಡ ಕವಿತೆಗಳ ಸಾಲು
ಹೇಳದಿರುವುದೇ ಮೇಲು,
ಅವು ಅಜ್ಜಿ ಪೆಟ್ಟಿಗೆಯ ತಿನಿಸಿನ ರೀತಿ!!


ಸೋತೆವೆಂದಾಕ್ಷಣಕ್ಕೆ ಸೋತಂತಲ್ಲ
ಅರಿವಿಗೆ ಬಾರದ ಅದೆಷ್ಟೋ ಗೆಲುವುಗಳು
ಸಾಲುಗಟ್ಟಿ ನಮ್ಮದಾಗಲು ತುದಿಗಾಲಲ್ಲಿ ನಿಂತಿರುತ್ತವೆ;
ಅಲ್ಲಿ ಆಯ್ಕೆಗಳಿಗೆ ಸ್ಥಾನವುಂಟು,
ತಿರಸ್ಕಾರಗಳಿಗೂ!!


ಕಡಿಗೋಲು ಮಜ್ಜಿಗೆಯ ಕಡಿದಾಗ
ಗಡಿಗೆಯ ತಳದಿಂದ ಮೆಲೆದ್ದ ಬೆಣ್ಣೆಗೆ
ಮತ್ತೆ ಕೂಡುವ ಮನಸಾಗದಂತೆ,
ಒಲವಿಗೂ ಅಂಥದೇ ಕಡಿಗೋಲು ಬೇಕು
ತಳಮಳದ ತಳದಲ್ಲೂ ನೆಮ್ಮದಿಯ ಕಡಿಬಹುದು


ಸ್ವೀಕಾರಗಳಿರಲಿ, ಜೈಕಾರಗಳು ಸಲ್ಲ
ಹೆಜ್ಜೆಗೆ ಹೆಜ್ಜೆಯೇ ಸಂಗಾತಿ,
ಪಯಣದ ಹಾದಿ ಯಾವುದಾದರೇನ್
ಪಯಣಿಸುವ ಮನಸಿರಬೇಕಷ್ಟೇ!!
ಮುಟ್ಟಲಾಗದ ಗುರಿಗಳಿಗೆ
ಮುಟ್ಟಿಸಿಕೊಳ್ಳುವ ಯೋಗ್ಯತೆ ಇಲ್ಲವೆಂದುಕೊಳ್ಳೋಣ
ಮುಟ್ಟಿದ ಗುರಿಯನ್ನೇ ನಮ್ಮದಾಗಿಸಿಕೊಂಡು!!


                                                -- ರತ್ನಸುತ

ನಾನೊಂದು ಕನಸ ಕಂಡೆ

ನನ್ನ ಮನದ ಬೀದಿಯಲ್ಲಿ
ನೀವು ಸಾಗಿಸಿ ಹೊರಟ
ಹೂವ ತೇರು ಅದರ ಕಂಪು
ಇನ್ನೂ ಮಾಸದಾಗಿದೆ
ಬೀದಿ ತುಂಬ ಹೊಂಡ ಬಿದ್ದು
ಬಳುಕಿ ಬಿದ್ದ ಹೂವ ಹೆಕ್ಕಿ
ಕಣ್ಣಿಗೊತ್ತಿಕೊಂಡೆ ಹಾಗೇ
ಹಿಂದೆ ಮುಂದೆ ನೋಡದೆ


ದೂರ ತಿರುವಿನಲ್ಲಿ ತೇರು
ಕಾಣುವಷ್ಟೂ ಹೊತ್ತು ನಾನು
ಕಣ್ಣ ಮೇಲೆ ರೆಪ್ಪೆ ಸೋಕದಂತೆ
ನಿಂತೆ ನೋಡುತ
ಯಾವ ಮಾತೂ ಹೊರಡಲಿಲ್ಲ
ಬೆರಳೂ ಕೂಡ ಹೊರಳಲಿಲ್ಲ
ಮೌನ ರಾಗದಲ್ಲಿ ಮಿಂದು
ಕರಗಿ ಹೋದೆ ಹಾಡುತ


ಯಾವ ತೋಟಗಾರನಲ್ಲಿ
ಏನ ಕೊಟ್ಟು ತಂದ ಹೂವೋ?
ಬರೇ ಹೂವಲ್ಲ ಅವು
ಜೀವ ತಾಕೋ ಘಮಲಿದೆ
ಮಣ್ಣು ಕೂಡ ಎಷ್ಟು ಗೌಪ್ಯ-
ರಮ್ಯ ಕಲೆಯ ಒಡೆಯನಲ್ಲ?
ಬಿತ್ತಿದಲ್ಲಿ ಎಲ್ಲ ತಾನು
ಚಿತ್ರ ಕಾವ್ಯ ಬಿಡಿಸಿದೆ!!


ಎಷ್ಟೋ ಬಾರಿ ಹಿಂದೆ ಬಿದ್ದು
ನನ್ನ ಮನೆಯ ದಾರಿ ಮರೆತು
ಯಾರೋ ತಡೆದು ಕೈಯ್ಯ ಹಿಡಿದು
ಬಾಗಿಲಲ್ಲಿ ಬಿಟ್ಟರು
ಹೊನ್ನ ತೇರು, ಬೆಳ್ಳಿ ತೇರು
ಎಲ್ಲ ಹಾದು ಹೋದವಲ್ಲಿ
ಹೂವ ಗಂಧದಷ್ಟು ಚಂದ
ಯಾವೂ ಇಲ್ಲ ಆದರೂ


ನಾನೂ ಕೂಡ ಕಟ್ಟುತಿರುವೆ
ಒಂದು ಇಂಥದೇ ತೇರ
ಬೋಳು ಬೋಳಾಗಿ ಇನ್ನೂ
ಬೀದಿಗಿಳಿಸದಾದೆನು
ನೆನ್ನೆ ರಾತ್ರಿ ಕನಸಿನಲ್ಲಿ
ಮನಸಿನಿಂದ ಮನಸಿನೆಡೆಗೆ
ನನ್ನ ತೇರೂ ಹರಿದ ಹಾಗೆ
ಹಗಲುಗನಸು ಕಂಡೆನು!!


                      -- ರತ್ನಸುತ

ನಾನು ಕಂಡಂತೆ

ಬಣ್ಣ ಗುರುತಿಸಲೆಂದಷ್ಟೇ
ಬಣ್ಣವೇ ಗುರುತಾಗಿಬಿಟ್ಟರೆ?!!
ಒಂದು ಬದಿಯಲ್ಲಿ ಯುದ್ಧ
ಸರ್ವಾಧಿಕಾರಿಗಳ ತ್ರಾಣ
ಮತ್ತೊಂದು ಬದಿಯಲ್ಲಿ ದುಃಖ
ಶಾಂತಿದೂತರ ಧ್ಯಾನ!!


ಧರ್ಮ ಆಚರಣೆಯ ಗುರುತಷ್ಟೇ
ಧರ್ಮವೇ ಗಿರುತಾಗಿಬಿಟ್ಟರೆ?!!
ಒಂದು ಬದಿಯಲ್ಲಿ ಕಿಚ್ಚು
ಹೊಟ್ಟೆ ತುಂಬಿದವರ ತೇಗು
ಮತ್ತೊಂದು ಬದಿಯಲ್ಲಿ ಮೌನ
ಹಸಿವಿನಾಕ್ರಂದನದ ಕೂಗು!!


ವಿಜ್ಞಾನ ಜ್ಞಾನದ ಗುರುತಷ್ಟೇ
ವಿಜ್ಞಾನವೇ ಮಿಗಿಲಾಗಿಬಿಟ್ಟರೆ?!!
ಒಂದು ಬದಿಯಲ್ಲಿ ಅಸ್ಮಿತೆ
ನಾನೇ ಎಂಬ ವಿಪರೀತ ಬುದ್ಧಿ
ಮತ್ತೊಂದು ಬದಿಯಲ್ಲಿ ಕಗ್ಗತ್ತಲು
ಅಳುವ ಹಸುಗೂಸುಗಳಿಗಿಲ್ಲದ ಕೌದಿ!!


ಗಡಿ-ರೇಖೆ ಕೂಡಿಸುವ ಸೂತ್ರವಷ್ಟೇ
ತಾನೇ ಬೇಲಿಯಾಗಿಬಿಟ್ಟರೆ?!!
ಎರಡೂ ಬದಿಯಲ್ಲಿ ಸೇಡಿನ ಜ್ವಾಲೆ
ಅಂಧಕಾರದಲಿ ಸೋತ ಭಾವೈಕ್ಯತೆ
ಎರಡೂ ಬೆನ್ನು ಮುಖಾಮುಖಿ
ಮುಖ ಭಾವನೆಗಳ ಅರಾಜುಕತೆ!!


ಭಾಷೆ ಅಭಿವ್ಯಕ್ತಿ ಮಾಧ್ಯಮ
ಅಭಿಮಾನ, ಸ್ವಾಭಿಮಾನದ ಗುರುತು
ದುರಾಭಿಮಾನದಿಂದ ಅನ್ಯ ಭಾಷೆಗಳೆಡೆಗೆ
ಅಸೂಯೆಗೆ ನಾಂದಿಯಾದರೆ?!!
ಅನೇಕತೆಯ ನಡುವೆ ಏಕತೆಯ ಕಗ್ಗೊಲೆ
ಕಣ್ಣೀರ ಭಾಷೆಯಲ್ಲೇ ಕೋಟಿ ಕೋಟಿ ಪ್ರಶ್ನೆಗಳು,
ಸಿಗುವ ಉತ್ತರಗಳು ಅಸಮಾಧಾನಕರ!!


                                                  -- ರತ್ನಸುತ

ಎಚ್ಚರದ ನಿದ್ದೆಯಲ್ಲಿ

ಮುಖಬೆಲೆಯೇ ಇಲ್ಲದ ಕನಸುಗಳು
ಕಣ್ಣ ಮುತ್ತಿಕೊಳ್ಳುವ ಮುನ್ನ
ಸಣ್ಣ ಜ್ವರದಷ್ಟಾದರೂ ಹಿಂಸೆಯಾಗದಿದ್ದರೆ
ಕನಸಿನ ಬೆಲೆ ಅರಿವಿಗೇ ಬರಲಾರದು


ಮೈ ಸುಡುತಿಲ್ಲ, ಉಸಿರ ಶಾಖ ಮಾತ್ರ
ಮೀಸೆಗೆ ಬೇಗೆಯನ್ನೇ ಬಡಿಸುತ್ತಿದ್ದರೆ
ನಾಲಗೆ ಏನನ್ನೋ ಚಡಪಡಿಸುತ್ತಿದೆ
ರುಚಿಗೆಟ್ಟ ಕನಸುಗಳಿಗೆ ಬೀಗ ಜಡಿದೆ


ಹಗಲೆಲ್ಲ ಗುಳಿಗೆಯ ಏಟಿಗೆ ಪಲ್ಲಂಗಕ್ಕೆ ಅಂಟಿ ಸತ್ತು
ರಾತ್ರಿಯ ನಿದ್ದೆ ಎಚ್ಚರವಾಗಿದೆ
ಮನದ ಮಣ್ಣನು ಹದವಾಗಿ ಸಡಿಲಿಸಿ
ಬಿತ್ತಿ ಕಾದು ಕೂತೆ ಕುಕ್ಕರುಗಾಲಲ್ಲಿ
ಚಿಗುರುಗನಸುಗಳು ಕಣ್ತಪ್ಪಿಸಿ ಚಿಗುರಿಬಿಟ್ಟವು!!


ಅವಳಿಗಾಗಿ ಒಂದಷ್ಟು ಹಾಡು ಹಾಡಿ
ಮಲಗಿಸಿದ್ದೇ ದೊಡ್ಡ ಕೆಲಸ ಆದಂತೆ
ಈಗ ಕನಸಲ್ಲಿ ಅವಳೊಡನೆ ವಿಹರಿಸಬಹುದು
ನನ್ನಿಷ್ಟಕ್ಕನುಗುಣವಾಗಿ!!


ಪ್ರೀತಿ ಕನಸ ಕಾಣಲು ಅವಕಾಶಗಳ ಬಗಿಲುಗಳ ತೆರೆದಂತೆಲ್ಲ
ಕನಸುಗಳ ಮೇಲೆ ಪ್ರೀತಿ ಮೂಡುತ್ತಿದೆ
ಇಷ್ಟೋ, ಅಷ್ಟೋ ಕಸಿವಿಸಿಯೆನಿಸಿದರೂ
ಒಟ್ಟಾರೆಯಾಗಿ ನೋಡುವುದಾದರೆ ಎಲ್ಲಕ್ಕೂ ಮಾಫಿ!!


ಹೊತ್ತಾಯಿತು ಮಲಗೇಳುತ್ತೇನೆ,
ನಿದ್ದೆ ಮಾಡುವುದರ ಕುರಿತು ಖಾತರಿಯಿಲ್ಲ
ಆದರೆ ಮಂಪರುಗಣ್ಣಲ್ಲಾದರೂ
ಕನಸುಗಳು ಸ್ಪಷ್ಟವೆನಿಸದ ಪಕ್ಷದಲ್ಲಿ
ಓರೆ ಕೋರೆಗಳ ಹದವಾಗಿಸಿ
ನನ್ನಿಷ್ಟಕ್ಕೆ ತೂಗಿಸಿಕೊಳ್ಳಬಹುದು,
ಕನಸುಗಳು ಮತ್ತಷ್ಟು ಜೀವಂತವಾಗಬಹುದು!!


                                                 -- ರತ್ನಸುತ

ಹೂ ಅಂತೀಯಾ?!!

ಅದ್ಯಾವುದೋ ಗೆಜ್ಜೆ ಸದ್ದು ಸಳೆಯಿತು
ನೀ ತೊಡಲಿಲ್ಲವೆಂದರಿತು ಮೆಚ್ಚಲಿಲ್ಲ
ಅದೇತಕೋ ನೂರು ಬಾರಿ ನೆನೆದರೂ
ನೀ ಬರಹಗಾರಿಕೆಯ ಹಿಂದೆ ಮೂಡಲಿಲ್ಲ


ಅದೆಲ್ಲಿಯೋ ಕಳೆದು ಹೋದೆ ಸುಖದಲಿ
ನೀ ಹಿಂದೆ ಬಂದ ಸಂಗತಿ ತಿಳಿಯಲಿಲ್ಲ
ಅದೆಂಥದೋ ಅಮೃತವ ಸವಿದೆ ನಾ
ನೀ ಕಚ್ಚದಿರಲು ಬಟ್ಟಲಿಗೂ ಸಾವಿಲ್ಲ


ಅದಾಗದೇ ಮಾತು ಮೂಡಿ ಬಂದಿತು
ನೀ ಕೂಡದೆ ಯಾವೂ ಅರ್ಥವಾಗಿಲ್ಲ
ಅದೇನದು ಮರೆಸಿ ಇಟ್ಟೆ ತುಟಿಯಲಿ?
ನೀ ನಕ್ಕ ಮೇಲೂ ಉಸಿರಾಟ ನಿಂತಿಲ್ಲ


ಅದೇ ಮುಖ, ಅದೇ ಗುಳಿ, ಅದೇ ಸವಿ
ನೀ ಏನೇ ಅನ್ನು ನಿನ್ನ ಹೊರತು ಯಾರಿಲ್ಲ
ಅದು-ಇದು, ಇದು-ಅದು ನೂರೆಂಟು
ನೀ ಜೊತೆಗಿದ್ದರೆ ಯಾವೊಂದು ಬೇಕಿಲ್ಲ!!


                                         -- ರತ್ನಸುತ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...