Thursday, 30 November 2017

ದುಃಖ ಹೆಚ್ಚಾದಾಗ ಪ್ರಸವಿಸುವುದು ಕವಿತೆ


ದುಃಖ ಹೆಚ್ಚಾದಾಗ ಪ್ರಸವಿಸುವುದು ಕವಿತೆ
ಪೋಲಿ ಪದಗಳ ಕೂಡಿ ಗಾಂಭೀರ್ಯತೆ ಬೇಡಿ
ಯಾವ ಯೋಚನೆಗೂ ನಿಲುಕದ ಒಂದು ಕವಿತೆ
ಯಾರದ್ದೋ ಮೆಚ್ಚುಗೆ ಪಡೆದು ಸ್ತಬ್ಧ



ಸೂಜಿ ಚುಚ್ಚಲು ಹೃದಯ ಚಿಮ್ಮಿಸಿತು ನೆತ್ತರ
ಇನ್ನೂ ಮುಂದಕ್ಕೆ ಬರೆದರೆ ಬಲು ಘೋರ
ರಾತಿ ಪಾಳಿಯ ಚಂದ್ರ ಹಿಡಿದ ಬುಡ್ಡಿ ದೀಪ
ಹತ್ತಿರತ್ತಿರ ಬರಲು ನೆರಳಿಗೆ ಎಚ್ಚರ



ಸುಂದರ ಸಂಜೆಯನು ಮೊದಲ ಪುಟದಲಿ ಕಟ್ಟಿ
ಅಕ್ಷರದ ಮೆಟ್ಟಿಲನು ಏರಿ ತಾರೆಯ ದಾಟಿ
ಪ್ರೇಮ ಕವಿತೆಗೆ ಚೂರು ಕೆಮ್ಮು ಜಾಸ್ತಿ
ಬೆತ್ತಲಾಗಿಸಲೆಲ್ಲ ಮುಳ್ಳು ತಂತಿ



ಬೆಟ್ಟ ಕರಗಿಸೋ ಆಸೆ ಚಿಟ್ಟೆ ಕನಸು
ನಿದ್ದೆ ಇಲ್ಲದ ಇರುಳ ದೀರ್ಘ ಪಯಣ
ಮಂಚದ ನಿಲುವಿಗೆ ಕಾಲುಗಳೇ ಇಲ್ಲ
ಇದ್ದ ಕಾಲಿನ ಪಾದ ಸದಾ ಒದ್ದೆ..



ಕೋಳಿ ಕಾಳಗದಲ್ಲಿ ಗೆದ್ದ ಕೋಳಿ ಸೋತು
ಸೋತ ಕೋಳಿ ಗೆದ್ದಿತು ನಾಲಗೆಯ
ಬುದ್ಧಿ ಇದ್ದವನಿಗೆ ಇಲ್ಲದವರ ಚಿಂತೆ
ಇಲ್ಲದವರೊಡಗೂಡಿ ಚಿಂತೆ ಬೀಟ್ಟೆ



ಮುಗಿಸುವ ಮುನ್ನ ಕೊನೆಯ ಮಾತು
ನಿಮ್ಮ ಪ್ರಶ್ನೆಗೆ ಇಲ್ಲಿ ಜಾಗವಿಲ್ಲ
ಹಣ್ಣು ತಿಂದು ಸಿಪ್ಪೆ ರಸ್ತೆಯಲೇ ಎಸೆದೆವು
ನಮ್ಮ ತಂಟೆಗೆ ದಾರಿ ಸುಲಭವಲ್ಲ..



                                           - ರತ್ನಸುತ 

ಬಣ್ಣ


ಬೆರಳೆಣಿಕೆಯಷ್ಟು ಬಣ್ಣಗಳ ತಂದು
ಬೆರೆಸಿ ಕೂತರೆ ಅಲ್ಲಿ ಅದೆಷ್ಟು ಬಣ್ಣಗಳು?
ಒಂದಕ್ಕೆ ಮತ್ತೊಂದು, ಮತ್ತೆರಡು, ಮತ್ತಷ್ಟು
ಬಣ್ಣದ ಅಂತ್ಯವಾದರೂ ಯಾವುದು?



ಕೊಂಚದಲ್ಲಿಯೇ ಕುಂಚ ಮೋಸಕ್ಕೆ ಸಿಲುಕಿತು
ಕಪ್ಪು ಹೆಚ್ಚಾಯಿತು ಕಗ್ಗತ್ತಲಿಗೆ
ಬಿಳುಪು ಹೆಚ್ಚಾಯಿತು ಹಾಲ್ಗಡಲಿಗೆ
ಹಸಿರು ಇನ್ನಷು ಹಸಿರು, ಕೆಂಪು ಕಡುಗೆಂಪು



ನೇರಳೆಯ ನೇರಕ್ಕೆ ಹಳದಿಯ ಹೂ ಅರಳಿ
ರೋಜಾ ಮುಳ್ಳಿಗೂ ಬಂತು ನಾಚಿಕೆ ಮೆರಗು
ಬೆರಳ ಗುರುತಿನ ಒಳಗೆ ಬಣ್ಣ ಬಣ್ಣದ ವ್ಯೂಹ
ಏಕಕ್ಕೆ ಸಾಲದೇ ಅನೇಕ ಸೋಗು!!



ತೊಗಲ ಬಣ್ಣವ ಎಂದು ಲೆಕ್ಕಿಸಿತು ಹಾಳೆ?
ಬಿಡಿ ರೇಖೆಗಳೇ ಹೊರಡಿಸಲಿ ಸುತ್ತೋಲೆ
ಗೀಚಿಕೊಂಡವರೆದೆಯ ಬಡಿತಗಳೇ ಏರಿಳಿತ
ಆತ್ಮ ಸ್ವರೂಪವೇ ಒದಗುವ ಚಿತ್ರ



ಇಲ್ಲದ ಬಣ್ಣದಲೂ ಇದೆ ನೂರು ಬಣ್ಣ
ತೆರೆದು ಕಂಡರೆ ಮಾತ್ರ ಒಳಗಣ್ಣ
ಬಣ್ಣ ಎಲ್ಲವ ಕೂಡಿ ಸಮವಾದ ತಾಣ
ನಿಜ ಬಣ್ಣವೆಂಬುದೇ ಇಲ್ಲ ಕಾಣ...



                            - ರತ್ನಸುತ 

ಕಲ್ಲಾಗಿ ಉಳಿದ ನನಗೆ

ಕಲ್ಲಾಗಿ ಉಳಿದ ನನಗೆ
ನೂರೆಂಟು ಉಳಿ ಪೆಟ್ಟು ಕೊಟ್ಟೆ
ಕಡೆಗೊಂದು ಹೂವನಿಟ್ಟೆ
ತಪ್ಪುಗಳ ಕ್ಷಮಿಸೆಂದು ಪೂಜೆಗೈದೆ...


ತೊರೆಯಲ್ಲಿ ಹರಿದ ನನ್ನ
ಬೊಗಸೆಯೊಡ್ಡಿ ಸೆರೆಹಿಡಿದೆ
ಕಣ್ಣಿಗೊತ್ತಿದೆ ಅಲ್ಲಿ ನಾ ಪುನೀತ
ತೀರ್ಥವಾಗಿಸಿಕೊಂಡು ನನ್ನ ಸವಿದೆ




ಕತ್ತಲಲ್ಲಿಯ ಹಣತೆಯಾಗುಳಿದಿದ್ದೆ
ಅಟ್ಟದಲ್ಲಿಟ್ಟರೆನ್ನ ಮೂಟೆ ಕಟ್ಟಿ
ಬಿಡಿಸಿ ಬಂಧನವ ವಿಮುಕ್ತನಾದೆ
ಬೆಳಗಿದೆ ನನ್ನ, ನಿನ್ನ ಅಸ್ತಿತ್ವಕ್ಕಾಗಿ




ಬೆಳಕಿನ ಆಕಾರ ನಾನೆಂದೆ
ಒಲವಿನ ಸೂತ್ರ ನನದೆಂದೆ
ನನಗಾವ ಹೆಸರಿಲ್ಲವೆಂದೆ
ಹೆಸರಿಟ್ಟೇ ನನ್ನೊಲಿಸಿಕೊಂಡೆ ಎಂದೆ




ನೀ ಮಾನವ, ನಾ ದೇವರು
ನೀನೆಟ್ಟ ಅಂತರವೇ ನಮ್ಮ ನಡುವೆ
ನೀ ನನ್ನೊಳು, ನಾ ನಿನ್ನೊಳು
ಹೊರಗಿಟ್ಟು ನೋಡುವುದೇ ನಿನ್ನ ಗೊಡವೆ




ನಾನು ನಾನಾಗಿರದೆ
ನೀನು ನೀನಾಗಿರದೆ
ನಾನೂ ಕಲ್ಲು
ನೀನೂ ಕಲ್ಲು...!!


                       - ರತ್ನಸುತ 

Tuesday, 17 October 2017

ಕಣ್ಣೂ, ಕನಸೂ


ಒಂದು ಕಣ್ಣ ಕಿತ್ತಿಟ್ಟು
ಮತ್ತೊಂದು ನೋಡುತಿದೆ
ಒಂದ ಬಿಟ್ಟು ಮತ್ತೊಂದು
ಕಂಡ ಕನಸ ಕೆದಕುತಿದೆ
ಮೋಸವಿಲ್ಲ ನೋವಿಗೆ...

ಪಸೆಯೊಂದು ಕಣ್ಣೀರಿಗೆ



ಅನುಮಾನದ ಕಣ್ಣು ಅದು
ಸ್ವಚ್ಛಗಣ್ಣ ಅನುಮಾನಿಸಿ
ರಕ್ತದ ಮಡುವಿನಲಿ ತನ್ನ ತಾನೇ
ಹೆಣವಾಗಿಸಿದೆ
ರೆಪ್ಪೆ ಬಡಿತಕರ್ಥವಿಲ್ಲ
ಪಸೆಯೊಂದು ನೆತ್ತರಿಗೆ



ಆ ಕೆನ್ನೆಯೂ, ಈ ಕೆನ್ನೆಯೂ
ಮೊದಲಿಂದಲೂ ಎಂದೂ ತಾವು
ಮುಖಾ-ಮುಖಿ ಆಗಿರದೆ
ತಮ್ಮ ತಮ್ಮ ಬಾಷ್ಪಗಳ
ಹೊಂದಿಸಿಕೊಳುತಿದ್ದವು
ವಿಮುಖದಲ್ಲೇ ನಿಟ್ಟುಸಿರು



ನೆತ್ತರು ಹರಿದ ಕೆನ್ನೆ
ಕಣ್ಣೀರು ಅಂಟಿದ್ದಕ್ಕೆ
ಕಣ್ಣೀರು ಹರಿದ ಕೆನ್ನೆ
ನೆತ್ತರು ಅಂಟಿದ್ದಕ್ಕೆ
ಅಲ್ಪದೂರದಲ್ಲೇ ಪಾಪ
ಸೂಚಿಸಿವೆ ಸಂತಾಪ



ಕನಸಿನ ವಿಚಾರದಲ್ಲಿ
ಸ್ಪಷ್ಟವಾಯ್ತು ಇದ್ದ ಕಣ್ಣಿಗೆ
ಬೇರೆ ಬೇರೆಯಲ್ಲ
ಕನಸೊಂದೇ ಕಣ್ಣಿಗೆ...
ಸತ್ತ ಕಣ್ಣು ಮರುಗಿತು
ಇದ್ದ ಕಣ್ಣು ಕರಗಿತು



ಆ ರಾತ್ರಿ ಬೀಳದ ಕನಸಿಗೆ
ನಿದ್ದೆಗೆ ಜಾರಿತು ಕಣ್ಣು
ಮತ್ತೆ ತೆರೆಯದಂತೆ
ಅತ್ತು, ಅತ್ತು ಹಣ್ಣಾಗಿ
ರೆಪ್ಪೆಯೊಳಗೆ ಮಣ್ಣಾಗಿ...



                    - ರತ್ನಸುತ

ಬಿಡಿಗವಿತೆ

ನೀ ಕಚ್ಚದ ಕೆನ್ನೆ ಮೇಲೊಂದು ಮೊಡವೆ
ನೀ ಬಾರದ ಕನಸ ತುಂಬೆಲ್ಲ ಗೊಡವೆ
ಕಣ್ಣಲ್ಲೇ ಕಣಿ ಹೇಳು ನಾ ಕುಣಿದು ಬರುವೆ
ಅಲ್ಲೆಲ್ಲೋ ಹುಡುಕದಿರು ನಿನ್ನಲ್ಲೇ ಇರುವೆ!!

                                   
                                         - ರತ್ನಸುತ 










ಘೋರ ಕನಸು


ಮೊನ್ನೆ ಕನಸಲ್ಲಿ ತುಂಬ ಅತ್ತಿದ್ದೆ
ಕಂಬನಿ ಕಣ್ಣ ದಾಟಿ ಹೊರ ಬರಲಿಲ್ಲ
ಬಿಕ್ಕಳಿಸಿದ್ದು ಎದೆಗೊರಗಿ ಮಲಗಿದ್ದ
ನನ್ನ ಮನದನ್ನೆಗೂ ತಿಳಿದಿರಲಿಲ್ಲ...



ಗೆಳೆಯ ಕೈ ಜಾರಿ ಹೊರಟಿದ್ದಾನೆ
ಅವನಿಗೆ ಕೊಡಬೇಕಾದ ಬಾಕಿಯ
ಲೆಕ್ಕ ಹಾಕುತ್ತಲೇ ಅಳುತ್ತಿದ್ದೆ
ಒಮ್ಮೆಯಾದರೂ ತಡೆಯುತ್ತಾನೆಂದುಕೊಂಡು



ಚಟ್ಟ ಕಟ್ಟುವ ಬಿದಿರು ಸೀಳಿಗೆ
ಅವನ ಚರ್ಮ ಸಿಕ್ಕಿಕೊಂಡರೆ?
ಆ ಮೌನ ಯಾತನೆಯ ಶಂಖ-ಜಾಗಟೆ ಸದ್ದು
ನುಂಗಿ ಬಿಡಬಹುದೆಂಬ ಆತಂಕ



ಅವನಿಗೆ ಹೂವೆಂದರೆ ಪ್ರಾಣ
ಹಂಗಾಗಿ ಹೆಚ್ಚೆಚ್ಚು ಹೂವ ಎರಚಿ
ಹೋದ ಪ್ರಾಣ ಮತ್ತೆ ಬರಬಹುದು
ಅವನ ಬಣ್ಣನೆಗೆ ಮನಸೋಲಲು



ಗದ್ದಲದಲ್ಲಿ ಅವನಿರಲಾರ
ಸದಾ ಏಕಾಂತದೊಂದಿಗೇ ಪರಿಚಿತ
ಗೋರಿ ಕಟ್ಟುವ ಮುನ್ನ ಎಚ್ಚರ
ಸುತ್ತ ಒಂದು ಇರುವೆ ಗೂಡೂ ಸಲ್ಲ



ಗೆಳೆಯ ನಗುತ್ತಿದ್ದವ ಸತ್ತಿದ್ದಾನೆ
ಅಳಿದ ಹಣೆಬರಹಕ್ಕೆ ವಿಭೂತಿ ರಾಚಿ
ಕಂಪಿಸಿದ ಬೆರಳಚ್ಚು ಉಳಿಸಿದೆ
ಹಣೆ ಬೆಚ್ಚಗಾಗಿಸುವ ಆಸೆಯಿಂದ



ಎಚ್ಚರಗೊಳ್ಳದಷ್ಟೂ ವೇಳೆ
ಗೆಳೆಯ ಸತ್ತಿದ್ದ
ಈಗ ಉಸಿರಾಡುತ್ತಿದ್ದಾನೆ ನನ್ನ ಎಚ್ಚರಗೊಳಿಸಿ
ಕೆನ್ನೆ ಸವರಿದರೆ ಕಂಬನಿಯ ಕಾಣೆ...



ಛೇ..ಈ ಕನಸುಗಳು ನಿಜಕ್ಕೂ ಘೋರ
ನೂರು ಕಾಲ ಖುಷಿಯಿಂದ ಬಾಳು ಗೆಳೆಯ!!



                                         - ರತ್ನಸುತ 

ಎಡ-ಬಲ


ಎಡಗೈ ಹೊಲಸೆಂದ ಬಲಗೈ
ಸ್ವಾರ್ಥ ಬಲಗೈ ಎಂದ ಎಡಗೈ
ಕೈ ತಟ್ಟಿಕೊಂಡದ್ದ ಮರೆತಿತ್ತು
ಬೊಗಸೆ ಆಕಾರ ಮುರಿದಿತ್ತು
ಅಪ್ಪುಗೆಯ ಬಿಗಿ ಶಿಥಿಲಗೊಂಡಿತ್ತು

ಎಡಗಣ್ಣ ಬಲಗೈ, ಬಲಗಣ್ಣ ಎಡಗೈ
ತಾಕಿದ್ದು ಎಂದೋ ಜ್ಞಾಪಿಸಿಕೊಳ್ಳಿ
ತಾಕಿಲ್ಲವೆಂದಮಾತ್ರಕ್ಕೆ ತಪ್ಪೇ?
ಈಗಲೇ ತಾಗಿದರೆ ಮುಗಿಯಿತು
ನಿಷ್ಠುರ ಯಾರಿಗೆ ಒಳಿತು?

ತೋರ್ಬೆರಳುಗಳ ತಂದು ಸನಿಹ
ವಿಮುಖಗೊಳಿಸುವುದೆಂಥ ಮರುಳು
ಮನಸಲ್ಲಿ ಮನೆಯನ್ನು ಕಟ್ಟಿ
ಮನೆ ಬಾಗಿಲಲಿ ಬಿಡಲು ನೆರಳು,
ಅಳುವಾಗ ವ್ಯರ್ಥ ಗೋಳು

ದೂರುಳಿದ ಮಾತ್ರಕ್ಕೆ ಬೇಡೆಂದುಕೊಂಡು
ಹತ್ತಿರತ್ತಿರದಲ್ಲಿ ಛಿದ್ರಗೊಂಡು
ಉಳಿದ ಚೂರುಗಳಲ್ಲಿ ಕಂಡುಕೊಳ್ಳಲು ನಿಜವ
ಏನು ಹೇಳಬೇಕು, ಯಾರ ದೂರಬೇಕು

ಉಗುರ ಕಚ್ಚಿದ ಹಲ್ಲು ಲೆಕ್ಕಿಸಿತೇ ಬೆರಳನ್ನು
ಬಲಗೈಯ್ಯ ಹುಣ್ಣಿಗೆ ಎಡಗೈ ಕಣ್ಣು
ಕೆಂಡ ಬಿದ್ದ ಹಸ್ತ ಹಂಚಿಕೊಂಡಿತು ನೋವ
ಸಿಹಿಗಷ್ಟೇ ಬಲಹಸ್ತ ಸ್ವಹಿತ?

ಹೊಲಸು ಎಡಹಸ್ತವ ತಿಕ್ಕಲು ಬೇಕು ಬಲ
ಬೆನ್ನ ಮುಖಕೂ ತಾವೇ ಸಪ್ಪಳ
ವಿಭೂತಿಗೊಲಿದು ಮೈಥುನವ ಜರಿದರೆ ಹೇಗೆ?
ಕೇಸರ ಪೂಜೆಗೂ ಇರಲಿ ಬೆಂಬಲ!!

                                       - ರತ್ನಸುತ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...