Monday, 26 July 2021

ನನ್ನ ಪಾಲಿನ ದೈವ ಇನ್ನು ಇಲ್ಲವಾದೆಯಾ

ನನ್ನ ಪಾಲಿನ ದೈವ ಇನ್ನು ಇಲ್ಲವಾದೆಯಾ 

ಕಣ್ಣ ತುಂಬ ಕಂಬನಿಯನು ಬಿಟ್ಟು ಹೋದೆಯಾ 
ಭಾರವಾದ ಮನಸ ಕೊಟ್ಟು
ತಿರುಗಿ ಬಾರದ ಲೋಕಕೆ
ಹೊರಟು ಹೋದೆ ಎಂಬ ನಿಜವು
ನೋವು ಕೊಡುವುದು ಜೀವಕೆ 
ಒಮ್ಮೆ ನಿನ್ನ ಮಾತನಾಡಿಸಬೇಕು ಅನಿಸುತಿದೆ
ಪಾದ ಮುಟ್ಟಿ, ಕೆನ್ನೆ ಸವರಿ ಮುದ್ದು ಮಾಡಬೇಕು ಅನಿಸುತಿದೆ...

ಒರಟು ಪಾದದ ಬಿರುಕಲಿ 
ಬಾಳ ಅನುಭವ ಸಾರವು 
ಅಭಯ ಹಸ್ತವ ನೀಡಿದೆ 
ಅರಿತ ಹಾಗೆ ಎಲ್ಲವೂ 
ಇರುಳ ದಾಟಿಸೋ ದೀಪವು 
ನಡುವೆ ಏತಕೋ ಆರಿದೆ 
ನೀನು ತೋರಲು ದಾರಿಯು 
ಹೊರತು ಸೋಲುವ ಭಯವಿದೆ 
ಹಬ್ಬವಲ್ಲದ ದಿನಗಳು ನೀನಿರಲು ಹಬ್ಬದ ಹಾಗೆಯೇ 
ನೀನೇ ಇರದೇ ಹೋದರೆ ಈ ತಿರುಗೋ ಭೂಮಿಯೂ ಸ್ತಬ್ಧವೇ... 

ನೆರಳ ನೀಡುವ ವೃಕ್ಷವೇ 
ಉರುಳಿ ಹೋದೆ ಏತಕೆ 
ಕಟ್ಟಿದ ಉಯ್ಯಾಲೆಯು 
ಕೂಡುತಿಲ್ಲ ಆಟಕೆ 
ಅರಳಬಲ್ಲವೇ ಹೂಗಳು 
ನಿನ್ನ ಸ್ಪರ್ಶವು ಇಲ್ಲದೆ 
ನಾನೇ ಬಿಡಿಸಿ ಬರುವೆನು
ಸುರಿಯೇ ನಿನ್ನ ಪಾದಕೆ
ಮನವಿಯೊಂದಿದೆ ದೇವರೇ ಆಗು ಇವರಿಗೆ ಆಸರೆ
ಏಕೆ ಎನ್ನುವುದಾದರೇ ಇವರೂ ಕೂಡ ದೇವರೇ...

ಕತೆ‌ ಹೇಳುವೆ ಕೇಳು ಕಂದ

ಕತೆ‌ ಹೇಳುವೆ ಕೇಳು ಕಂದ

ಒಂದೂರಲ್ಲಿ ಒಬ್ಬ ರಾಜ
ಹೃದಯ ಶ್ರೀಮಂತಿಕೆಯಿಂದ ರಾರಾಜಿಸಿ
ಸಾತ್ವಿಕ ಪಯಣ ಮುಗುಸಿದ
ಮನ ಮಿಡಿಯುವ ಕತೆ

ಯಾರ ಕುರಿತು? ಮುಂದೆ ಕೇಳು.. 

ಯಾವ ದೇವರು ತಾನೆ ಹರಕೆ ಹೊರದೆ
ಅರಸಿ ವರವ ಕೊಡುವ ಹೇಳು?
ಈ ದೈವ ಆ ಸಾಲಿಗೆ ಸೇರದೆ
ಕೇಳದೆಯೇ ಬೇಕುಗಳ ಅರಿತ
ಪ್ರೇಮ ಪರ್ವಕೆ ಕಾರಣನಾದ

ಕೊಡುಗೈ‌ ಕುರುಡು ಮರುಕ್ಷಣ;
ಕಿಸೆಯಲಿ ಅದೆಷ್ಟು ಪ್ರೀತಿ, ಮಮತೆ ಹೊತ್ತು
ಉದಾರವಾಗಿ ಕಟ್ಟಿಕೊಡುತಿದ್ದ 
ಬದುಕಿನ ದಾರಿಯುದ್ದಕ್ಕೂ, ಸಾಹುಕಾರ!
ಮಲಗಿದಾಗ ಪುಟ್ಟ ಪೋರ..

ಎರಗಿದ ಯುದ್ಧಗಳನ್ನು ಜಯಿಸಿ
ಮರಳಿ ಮುಳ್ಳಿನ ಹಾಸಿಗೆಯ ಕನವರಿಕೆಗಳಲ್ಲೂ
ತನ್ನವರು ಕಾಣದ ನೆರಳಿಗೆ 
ನರಳಿದಾತನೇ ಹೊರತು.. ತನಗಾಗಿ?

ಅನ್ನ‌ ಕೊಟ್ಟ ಮಣ್ಣಿನಂತೆ
ಬದಲಿ ಏನೂ ಕೇಳದ ಗುಣ
"ಮತ್ತೂ ಬೇಕಾದಲ್ಲಿ ಕೇಳು"ಎನ್ನುವ
ಕರ್ಣನಿಗೂ ಮಿಗಿಲಾದ ಸ್ಥಾನ

ಎಲ್ಲ ಪುಣ್ಯಗಳೂ ನಗಣ್ಯ
ಚರಣ ಸೋಕುವುದೇ ಪರಮ ಪುಣ್ಯ;
ಹಿತ ನುಡಿ‌ಯ ನೆನೆಪಿನ ಪುಟಗಳ
ಗೀಚು ಹೊತ್ತಿಗೆ ಹಿಡಿದ ನಾನೇ ಧನ್ಯ

ಪ್ರೀತಿ ಕೊಟ್ಟು ಪಡೆವುದಲ್ಲ
ಕೊಡುವುದಷ್ಟೇ ನೇಮವೆಂದು
ನಗೆ ಬೀರುವ ಸಂತ;
ಕಲ್ಲು ಬೀಸಲು ಹಣ್ಣು ಕೊಡುವ
ಯಾವ ಅಲ್ಪವೂ ಗೋಚರಿಸದ
ನಿಜದಿ ಕಲ್ಪವೃಕ್ಷ ಮಾನವ ರೂಪಿ ದೇವನೇ ಈತ..

ತಿಳಿದವರಿಗೆಲ್ಲ ಒಂದೇ ಸತ್ಯ
ದ್ವಂದ್ವವಿಲ್ಲ, ಬಣ್ಣದ ಮಾತಿಲ್ಲ
ತನ್ನಲ್ಲಿಹುದೆಂದು ಹಿಗ್ಗಲಿಲ್ಲ
ಕನ್ನ ಹಾಕುವ ಮಾತೇ ಇಲ್ಲ;
ಐದು ತಲೆಮಾರುಗಳ ಕಂಡ ಕಣ್ಣೊಳಗೆ
ಅದೇ ಮೃದುತ್ವ, ಅದೇ ಮಾತೃತ್ವ!

ನೆಲಕೆ ತಲೆ ಬಾಗಿ, ಹೊನ್ನ ಗಳಿಸಿ
ಕಟ್ಟಿದ ಸಾಮ್ರಾಜ್ಯದೊಳಗೆ ನಿತ್ಯ ದಾಸೋಹ;
ಫಸಲಿರುವೆಡೆ ಬೆಳೆದ ಕಳೆಯನ್ನು
ನಾಜೂಕಾಗಿ ಬೆರ್ಪಡಿಸಿ
ಸುಗುಣ ಬೇರಿಗೆ ತನ್ನ ಬೆವರ ಕೊಟ್ಟ

ಸಣ್ಣ ಮೀಸೆ, ಮಂದಹಾಸ
ತುಂಬು ಕುರುಳು, ತೀಕ್ಷ್ಣ ಮೂಗು
ತೇಜಸ್ವಿ ಮುಖ, ಬಿಳಿ ವಸ್ತ್ರ
ಊರುಗೋಲು, ತೂಕ ಹೆಜ್ಜೆ
ಮುದ್ದು ಮುನಿಸು, ಮನಸು ಕೂಸು
ಸಮಯ ಪ್ರಜ್ಞೆ, ಅಚ್ಚು ಕಟ್ಟು
ಹೊತ್ತು ಮೀರಲು ಪುಟಿವ ಸಿಟ್ಟು

ಈ ರಾಜನ ಕೆನ್ನೆಗೆ ಮುತ್ತಿಟ್ಟು
ಕುರುಚಲು ಗಡ್ಡ ಚುಚ್ಚಿ ಅತ್ತಿದ್ದೆ
ಮಡಿಲಲಿ ಮಗುವಾಗಿ ಮಲಗಿದ್ದೆ
ಹೆಗಲೇರಿ ಕುಣಿದಿದ್ದೆ, ದಣಿದಿದ್ದೆ
ಏಟನು ತಿಂದಿದ್ದೆ, ಮುತ್ತನ್ನೂ ಪಡೆದಿದ್ದೆ
ಕೈ ತುತ್ತಿಗೆ ಹಸಿದಿದ್ದೆ 
ಈಜಿದ್ದೆ ಜೊತೆಗೆ
ಮೋಟಾರ್‌ ಬೈಕು ಕಲಿತಿದ್ದೆ

ತಪ್ಪುಗಳ ತಿದ್ದಿದ ಗುರು
ನನ್ನ ಅಸ್ತಿತ್ವದ ಗುರುತು
ದೂರ ಪ್ರಯಾಣಗಳ ಒಡನಾಡಿ
ಮೌನ ಸಂವಾದದ ಸಾರತಿ

ಅಪ್ಪ, ಅಮ್ಮ, ಗೆಳೆಯ, ಬಂಧು
ಎಲ್ಲರನೂ ಒಳಗೊಂಡ ಈತ
ತಾರೆಗಳ ಜೊತೆಗೂಡಿ ಮಿನುಗಲು
ಖಾಲಿತನವೇನೆಂದು ತಿಳಿಸಲು
ತಾನಿರದೆ ಬದುಕುವುದ ಕಲಿಸಲು
ಒಂದಿಷ್ಟು ದುಃಖವನು ಭರಿಸಲು
ಮತ್ತೆ ಸಿಗುವೆ ಎಂದು ನೇಪಥ್ಯಕ್ಕೆ ಸರಿದ;
ಅವನದೇ ಕತೆಯಿದು ಕೇಳು ಕಂದ
ಹೇಳುವೆ ತುಂಬು ಉತ್ಸಾಹದಿಂದ....

ತಾಮಸ ನೆಲದಲ್ಲಿ

ತಾಮಸ ನೆಲದಲ್ಲಿ 

ದೀಪವ ಹಚ್ಚಿದವ 
ನೀರಸ ಬದುಕಲ್ಲಿ 
ಬೆಳಕನು ಚೆಲ್ಲಿದವ 
ಮೂಡುವ ನಗುವನ್ನು 
ಬಾಡದೇ ಕಾಯುವವ 
ಕಣ್ಣನು ತೆರೆಸುತಲೇ 
ಮನಸನು ಮುಟ್ಟಿದವ 

ಕರುಣೆಯ ಅಕ್ಷರದಿ  
ಹಣೆಯನು ಒತ್ತುತಲಿ 
ಹಸ್ತವ ಚಾಚುತಲಿ 
ಭಾಷೆಯ ನೀಡಿದವ 
ಆಧರಿಸುತಲೇ 
ಕಾಯೋ ಸೈನ್ಯ ನೀನು 
ನಿನ್ನನ್ನು ಹೋಲೋ ಬೇರೆ ಜೀವ ಇರದಯ್ಯಾ
ಜೈ ಜೈಕಾರ, ಜೈ ಜೈಕಾರ
ಕಾಯೋ ನಮ್ಮ ಓ ಸರದಾರ 
ಜೈ ಜೈಕಾರ, ಜೈ ಜೈಕಾರ
ಕಾಯೋ ನಮ್ಮ ಓ ಸರದಾರ 

ತಲೆ ಮಾರಿನ ಆಚರಣೆಗಳ ಲೋಪ ದೋಷವ ತಿದ್ದುತಲಿ 
ಈ ವೇಳೆಯ ನಾಳೆಗೆ ಮಾದರಿ ಮಾಡಲು ಹೊರಟಿರುವ 
ಸರಿ ದಾರಿ ತೋರುತ ತಾನೂ ಹೆಜ್ಜೆಗೆ ಹೆಜ್ಜೆಯ ಹಾಕುತಲಿ 
ಈಗಾಗಲೇ ಮುಟ್ಟಿದ ಗುರಿಯನು ನಮಗೂ ಮುಟ್ಟಿಸುವ 
ಉರಿ ಬೇನೆಯ ನೀಗುವ ಸೋನೆ 
ನೀನಿದ್ದೆಡೆ ಹಬ್ಬವೇ ತಾನೆ?
ಆ ಸೂರ್ಯ ನೀನೇ, ಚಂದ್ರ ನೀನೇ, ಲೋಕ ನೀನೇ 
ಒಂಟಿ ಸಲಗ ನೀನೈಯ್ಯಾ 
ಜೈ ಜೈಕಾರ, ಜೈ ಜೈಕಾರ
ಕಾಯೋ ನಮ್ಮ ಓ ಸರದಾರ 
ಜೈ ಜೈಕಾರ, ಜೈ ಜೈಕಾರ
ಕಾಯೋ ನಮ್ಮ ಓ ಸರದಾರ 

ಮೋಡದ ಪ್ರಭಾವಳಿ

ಮೋಡದ ಪ್ರಭಾವಳಿ

ತಂಪು ಬೀಸೋ ಗಾಳಿಲಿ
ಸವೆದ ದಾರಿ ಇನ್ನೂ ದೂರ
ದಾಟೋ ಆಸೆ ಕಣ್ಣಲಿ

ಹೆಜ್ಜೆಗೆಜ್ಜೆ ಜೊತೆಯಲಿ
ಪಚ್ಚ ಹಸಿರು ಬನದಲಿ
ಕಟ್ಟಿಕೊಂಡು ಬಿಟ್ಟು ಹೊರಟ
ಅರಮನೆಗಳ ಸಾಲಲಿ

ದಿಕ್ಕು‌ ತಪ್ಪಿದಾಗಲೇ
ಹೊಸ ತಾಣ ಸಿಗುವುದು
ಕಣ್ಣು ಮುಚ್ಚಿ ನಿನ್ನ ಲಯಕೆ
ನನ್ನ ಭಯವ ಮರೆತೆನು

ಸಿಕ್ಕ ತಾಣ ನಮ್ಮದು
ಇರುವೆ ಗೂಡ ಮಣ್ಣದು
ನಮ್ಮ ಆಗಮನಕಾಗಿ
ಕಾದ ಹಾಗೆ‌, ಸೋಜಿಗ!

ತಮ್ಮ ತಮ್ಮ ಪಾಡಿನ
ಆಟದಲ್ಲಿ ತೊಡಗಿದ
ಲೋಕವನ್ನು ಒಮ್ಮೆ ಹಾಗೆ
ಆಸೆಯಿಂದ ದಿಟ್ಟಿಸಿ

ಕಟ್ಟಿಕೊಂಡ ಬುತ್ತಿಯು
ಮೆಲ್ಲ ಕಳಚಿಕೊಂಡಿತು
ಮುತ್ತು ತುತ್ತಿನಾಟ ಮುಗಿದು
ಕತ್ತಲು ಆಕಳಿಸಿತು

ನೋಡು‌ ಎಷ್ಟೇ ಬೆರೆತರೂ
ಇನ್ನೂ ಉಳಿದ ಅಂತರ
ಬಿಡಿಸಿಕೊಂಡ ಆಲಿಂಗನ
ಮತ್ತೆ‌ ಸಿಗಲಿ ನಂತರ~~~ 😘

ಶಿರವಿಲ್ಲದ ಶಿಲೆಯೊಂದನು ಮನೆಯಲಿ ತಂದಿಟ್ಟೆ

ಶಿರವಿಲ್ಲದ ಶಿಲೆಯೊಂದನು ಮನೆಯಲಿ ತಂದಿಟ್ಟೆ 

ಮೈ ಬಿರುಕಿಗೆ ಹಿತ್ತಲ ಮಣ್ಣಿನ ಮುದ್ದೆಯ ಕೊಟ್ಟೆ 
ತುಂಡರಿಸಿದ ಕೈ ಏನನ್ನೂ ಬೇಡದೆ ಹೋದರೂ
ಕ್ಷಮೆ ಕೋರಿ ಮಲ್ಲಿಗೆ ಬಳ್ಳಿಯ ಗಂಧವನಿಟ್ಟೆ  

ಕತ್ತಿನ ಮೇಲೆ ಇಟ್ಟ ತಲೆಗಳ ಲೆಕ್ಕವೇ ಇಲ್ಲ 
ಕತ್ತರಿಸಿದ ಖಡ್ಗಗಳ ಪಳೆಯುಳಿಕೆಯ ಪಾಡು 
ಸೂರ್ಯ, ಚಂದ್ರರ ಪ್ರಭಾವಳಿಯ ಹೊತ್ತರೂ 
ಮತ್ತದೇ ನೀರವತೆ, ಅದೇ ನಿಶಬ್ಧ, ತಟಸ್ಥ ನಿಲುವು 

ಹಸಿದವರ ಹಸಿವ ಕದ್ದು ಹೊಟ್ಟೆ ಬೆನ್ನಿಗಂಟಿ 
ಜಗದ ಬೆತ್ತಲೆಯ ಮುಚ್ಚಿ ತಾ ದಿಗಂಬರನಾಗಿ 
ಉರುಳಿದ ತಲೆ ಎಲ್ಲೋ ಇನ್ನೂ ನಗುತಿರಬೇಕು 
"ಕಲ್ಲನ್ನೂ ಬಿಡದೆ ಹೋದೆಯಾ ಮರುಳ?!" ಎಂದು  

ಉಂಗುಟದಿ ಅರಳಿಕೊಂಡ ಅಣಬೆಯ ಬೆರಗು  
ಹೊಕ್ಕಳಲ್ಲಿ ಸಣ್ಣದೊಂದು ಇರುವೆಯ ಗೂಡು 
ಎದೆ ಸೀಳಿನ ನಡುವಲ್ಲಿ ಬೇರು ಬಿಟ್ಟ ಚಿಗುರು 
ಮೈ ತಡವಿ ಪಸೆಯಾಗಿ ಉಳಿದ ಮಳೆ ನೀರು 

ನನ್ನ ಗ್ರಹಿಕೆಯ ಪ್ರಕಾರ, ಶಿಲೆ ಎಂದೋ ಸತ್ತಿದೆ 
ಬದುಕಿದ್ದರೆ ತಾನಷ್ಟೇ ಬದುಕು ಕಟ್ಟಿಕೊಳ್ಳುತಿತ್ತು 
ಕಟ್ಟಿಕೊಳ್ಳ ಬಂದವರ ಅಪ್ಪಿಕೊಳ್ಳುತಿರಲಿಲ್ಲ 
ಶಿಲೆ ಎಂದೋ ಸತ್ತ ಕಾರಣ, ಇನ್ನೂ ಜೀವಂತವಾಗಿದೆ 

ಇಟ್ಟ ಹೆಸರಲಿ ಕರೆಸಿಕೊಂಡೂ ನಿರ್ಲಿಪ್ತ
ಉಳಿಯ ಪೆಟ್ಟು ಕಾಣದಂತೆ ಅರಗಿಸಿಕೊಂಡು 
ಇತಿಹಾಸ ಮೆರೆಸಬಲ್ಲ ಶಾಸನವೂ ಅಸ್ಪಷ್ಟ 
ಒಂದೇ ಭಂಗಿಯಲಿ ಅಸಂಖ್ಯ ಭಾವ ಸೂಸಿದ  

ಬೇಡದೆ ಬಿಟ್ಟವರನ್ನು ದೂರದ ಸಂತ   
ತಮ್ಮದಾಗಿಸಿಕೊಂಡವರ ನೆನಯದ ಧೀಮಂತ  
ನಂಬಿದವರ ಪಾಲಿಗೆ ಪೊರೆವ ಭಗವಂತ 
ಯಾವ ಸಿರಿ ತನ್ನದಲ್ಲದಿದ್ದರೂ ಸಿರಿವಂತ..

ಬಗೆ ಬಗೆ ಕನಸಾಗುತ ನೀ ಬರುವೆ

ಬಗೆ ಬಗೆ ಕನಸಾಗುತ ನೀ ಬರುವೆ 

ಖುಷಿಯನ್ನು ಹಂಚುತ
ನುಡಿಯದೆ ನುಡಿದೆಲ್ಲವ ನೋಟದಲೇ 
ಒಲವನನ್ನು ಸಾರುತ 
ಕಿಸೆಯ ತುಂಬ ಬಿಟ್ಟು  ಹೋದೆ ಮೆಲ್ಲಗೆ 
ನವಿರಾದ ಸಂತೋಷ 
ಸಂಗಾತಿ ನೀಡು ಜೀವಕೆ 
ನಿನ್ನಲ್ಲೇ ವಿಳಾಸ 

ಅರೆ ಬರೆ ನಗೆಯ ತುಟಿಯಂಚಲಿ ಮೂಡಿಸಿ 
ಮಾಯವಾದೆಯಾ 
ತೆರೆಯನು ಸರಿಸಿ ಬಾ ಎನ್ನುತಲಿ 
ಮರೆಯಲ್ಲೇ ಕಾದೆಯಾ  
ಇಶಾರೆಯನ್ನು ನೀಡು ನನ್ನ ಶಾಯಿರಿ 
ನಿನಗಿಷ್ಟ ಆದರೆ 
ಬದಲಾಗಿ ಏನು ನೀಡಲಿ 
ನನ್ನೊಲವೇ ಉಡುಗೊರೆ 

ಕೆಳಲೇ ಬೇಡ ಪ್ರೀತಿ ಆಗಲು ಯಾವ ಕಾರಣ 
ನಿನ್ನಲೂ ಕೂಡ ಕಂಡೆ ಪ್ರೀತಿ ಮೂಡೋ ಲಕ್ಷಣ  
ನಾಟಕವಾಡುವುದೇನಿದೆ ಒಬ್ಬರಿಗೊಬ್ಬರು ಸೋಲೋಣ 
ಹೇ ಗೆಳತಿ ಸಾಗರದಾಚೆಗೂ ಸಾರುತ ಬರುವ ಒಪ್ಪೋದಾದರೆ 
ನೀನೇ ಆಗೆಯಾ  ಬಾಳಿಗೆ ಹಿತವಾದ  ಆಸರೆ 

ಬಗೆ ಬಗೆ ಕನಸಾಗುತ ನೀ ಬರುವೆ 
ಖುಷಿಯನ್ನು ಹಂಚುತ
ನುಡಿಯದೆ ನುಡಿದೆಲ್ಲವ ನೋಟದಲೇ 
ಒಲವನ್ನು ಸಾರುತ 
ಹೇ ಗೆಳತಿ ಬಂದೆ ಬಂದೆ ಬಂದೆ ಬಂದೆ ನೋಡು ಇನ್ನೂ ಹತ್ತಿರ 
ಮರೆಸುವೆ ತಾಳು ತಾಳು ತಾಳು ತಾಳು ನಿನ್ನ ಬೇಸರ 

ನಿನ್ನನು ಹೋಲೊ ಹೂವದು ಇನ್ನೂ ಹುಟ್ಟೇ ಇಲ್ಲವೇ 
ಸೊಲುತಾ ಹಾಗೇ ಹಿಂದೆ ಚಿಟ್ಟೆ ಹಾರಿ ಬಂದಿವೆ   
ತೀರಾ ಅತಿಶಯವಾದರೂ ನಿನ್ನೆದುರಲ್ಲಿ ಗೌಣವೇ 
ಹೇ ಗೆಳತಿ ಪ್ರಾಣಕೂ ಮಿಗಿಲು ನೀನೇ ಎನ್ನುವೆ  ಪ್ರಾಣ ಹೋದರು 
ಏನೇ ಆದರೂ ಗೆಲ್ಲುವೆ ನೀ ನನ್ನ ಜೊತೆಗಿರು 

ಬಗೆ ಬಗೆ ಕನಸಾಗುತ ನೀ ಬರುವೆ 
ಖುಷಿಯನ್ನು ಹಂಚುತ
ನುಡಿಯದೆ ನುಡಿದೆಲ್ಲವ ನೋಟದಲೇ 
ಒಲವನ್ನು ಸಾರುತ 
ಹೇ ಗೆಳತಿ ಬಂದೆ ಬಂದೆ ಬಂದೆ ಬಂದೆ ನೋಡು ಇನ್ನೂ ಹತ್ತಿರ 
ಮರೆಸುವೆ ತಾಳು ತಾಳು ತಾಳು ತಾಳು ನಿನ್ನ ಬೇಸರ 

ಹೂ ತಂದು ಮುಡಿಸಿ

ಹೂ ತಂದು ಮುಡಿಸಿ ಬಾಡುವುದೇತಕೆ, ತಾನಿರುವಲ್ಲಿಗೇ ಹೋಗೋಣ ಬಾ

ಕಂಡ ಕಂಡವರು ಏನೆಂದಾರು ಅನ್ನದಿರು, ಕೈ ಹಿಡಿದು ಜೊತೆಯಾಗೇ ಹೋಗೋಣ ಬಾ 

ಎಲ್ಲೆಲ್ಲೂ ನಗೆ ಹಸಿದ, ಬೊಗಸೆ ಹಿಡಿದ ಮನಸುಗಳೇ 
ನಮ್ಮಿಂದ ಹೊಮ್ಮುವ ಖುಷಿಗಳ ಪಸರಿ, ನೀಗಿಸಿ ಬರಲು ಹೋಗೋಣ ಬಾ 

ಗಾಳಿ ಮಾತುಗಳಿಗೇನು ಪಡೆಯುತ್ತವೆ ಬೇಕಾದ ರೂಪ 
ನಾವು ಹತ್ತಿಸಿದ ಹಣತೆ ಮುಖ್ಯ ನಮಗೆ, ಕಾಪಿಡಲು ಹೋಗೋಣ ಬಾ 

ಸಾವು ನೋವುಗಳಾಚೆ ಬದುಕು ನಿರಂತರ ಸಾಗುವುದು 
ಪೂರ್ತಿ ಬದುಕ ಬದುಕಿ ತೋರಿಸಲು   ಹೋಗೋಣ ಬಾ 

ಕೇಳುವುದಾವುದನ್ನೂ ಇಲ್ಲವೆನ್ನುವ ಬಡವನಲ್ಲ, ಆಜನ್ಮ 
ಈ ಜಾಗ ನಮಗೆ ಸೂಕ್ತವಲ್ಲ, ಅನಂತಾನಂತ  ಹೋಗೋಣ ಬಾ 

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...