Thursday, 30 January 2020

ಪಿಸ್ತೂಲಿನ ಸ್ವಗತ

ಕೊಂದವನ ಮತ್ತು ಸತ್ತವನ ನಡುವೆ ಪಿಸ್ತೂಲು 
ಒಂದೆರಡು ಗುಂಡು ಹಾರಿ ಋಣ ಭಾರ 
ಕೊಂದವನ ತೂಕ ಹೆಜ್ಜೆ, ಸತ್ತವನ ಮೌನ 
ಇನ್ನುಳಿದ ಗುಂಡುಗಳ ಸ್ವಗತ 

ಸತ್ತವ ಕೆಟ್ಟವನೋ, ಒಳ್ಳೆಯವನೋ?
ಕೊಂದವನು ಕೈ ಬಿಡದ ತನಕ 
ಅವನೇ ಒಳಿತು, ಒಳಿತಿಗಾಗಿ
ಚಿಮ್ಮಿದ ರಕ್ತವು ಕೈಗಂಟಿದೆ 
ವಿಚಲಿತಗೊಳ್ಳದೆ ಹಿಡಿಯ ಬಿಗಿದಿಟ್ಟ
ಭಾರಿ ಘಟ್ಟಿಗನೇ ಸರಿ 

ಇನ್ನೂ ಮೂಡದೇ ಆಕ್ರಂದನ?
ಒಂದು, ಸತ್ತವ ನೀಚನಾಗಿರಬೇಕು 
ಇಲ್ಲವೇ ಆಳುವವರ ಉಸಿರು ಬಿಗಿದಿರಬೇಕು 
ಪಾದಗಳು ಇನ್ನೂ ಒದರಾಡುತ್ತಲಿವೆ 
ನಿಮಿಷ ನಿಂತು ನೋಡೋಣ..... 

ಆ ಎರಡು ಸುತ್ತಿನ ಬಳಿಕ 
ಯಾವೊಂದು ಪ್ರತಿ ದಾಳಿಯಿಲ್ಲ?
ಅಸ್ತ್ರಗಳಿಲ್ಲದ ಶಾಂತ ತೋಟಕೆ ನುಗ್ಗಿ 
ಪ್ರತಾಪ ಮೆರೆದನೇ ಮಾಲೀಕ?
ಇಲ್ಲ, ಇಲ್ಲ.. ಹೇಡಿಯಾಗಿರಲಾರ 
ಹೇಡಿಗೆ ಪಿಸ್ತೂಲು ಹಿಡಿವ ಸ್ಥೈರ್ಯ?
ನಮ್ಮ ಸಂಗ ಮಾಡುವವ ಪರಾಕ್ರಮಿ... 
ಎದುರಾಳಿ ಸಂಚು ರೂಪಿಸುತ್ತಿರಬೇಕು 
ಇವ ಎದೆ ಹಿಗ್ಗಿಸಿ ನಿಂತಿರಬೇಕು!

ಯಾರದ್ದೋ ಅಂತಿಮ ಯಾತ್ರೆ
ಸಣ್ಣ ಮರುಕದ ಕೂಗು 
ಹೂವು, ಗಂಧ, ಕಣ್ಣೀರ ಕಂಪು ದಾಟಿ ಸಾಗಿದೆ ಮುಂದೆ
ಕೊಂದವನ ಎದೆಯಲ್ಲಿ ಕ್ರಮೇಣ ಆರಿದ ಕಿಚ್ಚು...  

ಅರೆ.. ಈಗ ಈತನೂ ಉದ್ರೇಕಕ್ಕೊಳಗಾದನಲ್ಲ?
ಮತ್ತಾರೋ ಇವನಿಗೆ ಹೆಗಲು ಕೊಟ್ಟು ಸಂತೈಸುತ್ತಿದ್ದಾರೆ 
ಅವನೆದೆಯಲ್ಲಿ ನಮ್ಮೆದೆಯ ಮಾರ್ದನಿ 
ಕೊಲ್ಲಲ್ಪಟ್ಟವನೇ ಆಗಿರಬಹುದೇ? ಓ.. ಅವನೇ!
ಇತ್ತ ಮತ್ತಾರೋ ಇವನಿಂದ ಪಿಸ್ತೂಲು ಕಸಿದು ಓಡುತ್ತಿದ್ದಾರೆ 
ಮತ್ತಷ್ಟು ಹೆಣಗಳುರುಳುವ ಸಂಭವ... 

ಯಾರ ಹೆಸರು ಬರೆದಿದೆ ನಮ್ಮಗಳ ಮೇಲೆ?
ಕೂಡಲೇ ಅಳಿಸಿ ಹಾಕಬೇಕು 
ಕೊಲ್ಲುವವರಿರುವ ತನಕ ಸಾಯುವವರು 
ಕೊಂದು ಉಳಿಸುವುದಾದರೂ ಏನನ್ನ?

ಮತ್ತೊಂದು ಗುಂಡು.. ಢಮ್!!
ಮತ್ತೆರಡು..ಮತ್ತೆ ....  ಢಮ್!! ಢಮ್!!
ಕಾಲ ಕಾಲಕ್ಕೆ ಸದ್ದಿಗೆ ಸದ್ದು ಸೆಡ್ಡು ಹೊಡೆದು 
ನಿಗ್ರಹಿಸುತ್ತಿದೆ ಎದ್ದ ದನಿಗಳ 
ನಮ್ಮಂಥ ಪಾಪದ ಗುಂಡುಗಳಿಗೆ ಬೇರೆ ಆಯ್ಕೆಯೆಲ್ಲಿ?
ಪಿಸ್ತೂಲಿನಿಂದ ಪಿಸ್ತೂಲಿಗೆ 
ಮನುಷ್ಯನಿಂದ ಮನುಷ್ಯನಿಗೆ 
ವರ್ಗಾವಣೆಯಾಗುತ್ತಲೇ ಸಾಯುತ್ತಿದ್ದೇವೆ... 

Wednesday, 29 January 2020

ಅಲೆಯ ಹೊಡೆತಕೆ ಸಿಕ್ಕ ಚಿಪ್ಪು

ಅಲೆಯ ಹೊಡೆತಕೆ ಸಿಕ್ಕ ಚಿಪ್ಪು 
ಕಡಲ ತೀರದಿ ಅವಿತು ಕುಂತು
ಮರಳ ಮನೆಯ ಕಟ್ಟೋ ಗಳಿಗೆ 
ಅಂಗೈಯ್ಯೇರಿ ಕುಳಿತುಕೊಂತು 
ತಡವಲು ಮೈ ಇದ್ದ ಮರಳು 
ನೀರ ಸಹಿತ ಜಾರಿಕೊಂಡು 
"ಒಯ್ಯಿ ನನ್ನ ನಿನ್ನ ಮನೆಗೆ 
ನೆನಪಿನ ಗುರುತಾಗಿ" ಅಂತು 

ಚಿಪ್ಪು ಚಿಪ್ಪಲೂ ಭಿನ್ನ ಕತೆಗಳು 
ಇಟ್ಟು ಆಲಿಸೆ ಕಿವಿಯ ಹತ್ತಿರ 
ಒಂದು ಹಾಡಿತು ಮನವ ಕಾಡಿತು 
ಒಂದು ಕಣ್ಮನ ಸೂರೆಗೊಂಡಿತು 
ಸಾಗಿ ಸವೆದು ಸವಕಲಾಗಿ 
ಸೋಕಿದಲ್ಲೇ ಛಿದ್ರಗೊಂಡಿತು 
ಮಿಕ್ಕ ಕೆಲುವು ಬೆರಳ ನಡುವೆ 
ತೂರಿ ಮತ್ತೆ ಕಡಲ ಸೇರಿತು 

ದಿಕ್ಕು ಕಾಣದೆ ಅಲೆದು ಬಂದು 
ದಿಕ್ಕುಗೆಟ್ಟವರನ್ನು ಸೇರಿ 
ದಕ್ಕುವ ಮಡಿಲಲ್ಲೇ ಸುಖವ 
ಕಾಣುವಂತೆ ನಿಲುವು ತಾಳಿ 
ಸಿಕ್ಕ-ಸಿಕ್ಕವರಡಿಗೆ ಸಿಕ್ಕಿ 
ಪಾದ ಗುರುತುಗಳಲ್ಲಿ ಬಿಕ್ಕಿ 
ಉಪ್ಪು ಕಣ್ಣೀರೇತಕೆಂದು 
ನಿರ್ಭಾವುಕವಾಯಿತು  

ಆಳ ಹೊಕ್ಕು ಮೇಲೆ ಜಿಗಿದು 
ತೇಲಿ, ಮುಳುಗಿ, ಬೇಲಿ ಹಾರಿ 
ಯುಗ ಯುಗಗಳ ಯಾನ ಮುಗಿಸಿ 
ಬೆನ್ನು ಕೊಟ್ಟಿತು ಮಣ್ಣಿಗೆ 
ಚಂದಗಂಡು ಹೊತ್ತು ಹೋದರು 
ತೋಚಿದಂತೆ ಕೊರೆದು ಬಿಟ್ಟರು 
ಗುಟ್ಟು ಗುಟ್ಟಾಗಿರಿಸಲೆಂದು 
ಬಚ್ಚಿ ಇಟ್ಟರು ಕಿಸೆಯಲಿ 

ಮುತ್ತು ಕಸಿದು ಚಿಪ್ಪ ಎಸೆದು 
ಮಾಲೆ ಮಾಡಿ ಕೊರಳಿಗೆರಗಿ 
ಇರುಳ ಉರಿಸಿ ಪ್ರೇಮ ಉತ್ಸವ 
ಮಾಡ ಹೊರಟರು ಮುಕ್ತಿಗೆ 
ಎಲ್ಲ ಕಂಡೂ ಕಳ್ಳರಂತೆ 
ಎಲ್ಲ ಅರಿತೂ ಮಳ್ಳರಂತೆ 
ಮುತ್ತು ಮುತ್ತಲೂ ಮೈಯ್ಯ ಮರೆಯಲು 
ಮಾಲೆ ಚೆದುರಿತು ಒಮ್ಮೆಗೆ...!

ಬಿಡುವಾದರೆ ಹೇಳು ಬಿಡಿಸಿ ಹೇಳುವೆ

ಬಿಡುವಾದರೆ ಹೇಳು ಬಿಡಿಸಿ ಹೇಳುವೆ 
ತಡ ಮಾಡದೆ ಹೃದಯ ನೀಡಿ ಮುಗಿಸುವೆ 
ಗಡಿಯಾರವು ಗಡುವು ನೀಡಿ ಕಾದಿದೆ 
ಸಮಯ ಮೀರದ ಹಾಗೆ ಚಿತ್ತ ವಹಿಸುವೆ 

ಕಡೆಗೋಲಿಗೆ ಗಡಿಗೆ ತೆರೆದ ತೋಳಲಿ 
ಕಡಿದ ಮಜ್ಜಿಗೆಯ ಬೆಣ್ಣೆ ಮುದ್ದೆಯೇ 
ಕೊಡದೇ ಹೋಗದೆ ನೀ ಕಡೆಗೆ ಸಮ್ಮತಿ
ಕರಗೋ ಕಾಡಿಗೆಯ ಹೇಗೆ ತಡೆಯುವೆ?

ಬೆಳಗು ಮೂಡುವುದೇ ನಿನ್ನ ನೆನಪಲಿ 
ಮುಗುಳು ಮಾಸದೆಲೆ ಇದ್ದ ಹುರುಪಲಿ 
ಕದ್ದು ನೋಡುವುದು ಸಾಕೆಂದನಿಸಿರಲು 
ಖುದ್ದು ಹಾಜರಿಯ ಕೊಟ್ಟೆ ಕನಸಲೂ 

ಬಿತ್ತಿ ಚಿತ್ರಗಳ ಬಿಡಿಸಿ ಬಂದೆ 
ಮನೆಯ ಸುತ್ತ ಮನದ ಬಣ್ಣ ಹಚ್ಚಿ
ಹಿತ್ತಲಲ್ಲಿ ಮಲ್ಲೆ ಗಿಡವ ನೆಟ್ಟೆ 
ನೀ ತಾಕಿ ಹೂವು ಬಿರಿಯಲೆಂದು ಗರಿಯ ಬಿಚ್ಚಿ 

ಪೋಷಾಕಿನಲ್ಲೂ ಕಂಡು ಹಿಡಿವೆ 
ಆಗದಂಥ ಮೋಸಕ್ಕೂ ನೀ ಸುಂಕ ಪಡೆವೆ 
ಉಪವಾಸ ಕೆಡವಿ ಬಿಡುವೆ ನನ್ನ 
ಮಾತಿಗವಕಾಶ ಕೊಟ್ಟಂತೆ ಕಸಿದು ಬಿಡುವೆ 

ತೆರೆದೋದು ಸರಣಿ ಲೇಖನವನ್ನ 
ಪ್ರೇಮವಲ್ಲದೆ ಬೇರೇನೂ ಬರೆದವನಲ್ಲ 
ಸಹಮತದ ಸಹಿ ಹಾಕಿ ಸುತ್ತೋಲೆಯನು
ಕಳಿಸು ಮನಸಿಗೆ ಮಾಹಿತಿ ಸಿಕ್ಕಂತಿಲ್ಲ.... 

Monday, 27 January 2020

ಒಂದು ನೂರಾದರೂ ಹೊಮ್ಮುವುದು ಎದೆಯಲಿ

**ಪಲ್ಲವಿ**
ಒಂದು ನೂರಾದರೂ ಹೊಮ್ಮುವುದು ಎದೆಯಲಿ
ಹಚ್ಚೆಯ ರೂಪ ತಾಳಿದವು ಒಂದೆರಡು ಸಾಲು
ಒಂದು ಸಾಗರವೇ ಅಡಗಿರಲು ಕಣ್ಣಿನಲ್ಲಿ
ಭಾವಕೆ ಮಣಿದು ಹರಿಯುವುದು ಒಂದೆರಡು ಹನಿಯು
ಒಂದು ಇರುಳು ದಾಟಿ ಎಷ್ಟೆಲ್ಲ ಕನಸು
ಕಾಡಿ ಕಂಗೆಡಿಸಿದವು ಒಂದೆರಡು ಮಾತ್ರ
ಒಂದು ಬದುಕಿನ ಮಡಿಲಲೆಷ್ಟೊಂದು ಬಣ್ಣ
ಹಚ್ಚಿ ಸಾಗಿಸ ಬೇಕು ನಮಗೊಲಿದ ಪಾತ್ರ

ಒಂದೆರಡು ನೆನಪುಗಳೇ ಸಾಕು, ನಗು ಮೂಡಿಸೋಕೆ.. ಅಳಿಸೋಕೆ.. 


**ಚರಣ ೧**
ಒಂದೊಂದೇ ಹೆಜ್ಜೆ ದಾರಿ ತಿರುವನಕ
ನಂತರದ ದಾರಿಗಳು ಹತ್ತು ಹಲವು
ಮಿಂದೆದ್ದು ಖುಷಿಗೆ ಮರು ಗಳಿಗೆ ಬಿದ್ದು
ಸೋಲು ಕಂಡಾಗ ಮತ್ತಷ್ಟು ಬಲವು
ಹಲವಾರರ ಪೈಕಿ ನಮಗಷ್ಟೇ ಅವಕಾಶ
ಸಿಕ್ಕಂತೆ ಬದುಕಬೇಕು ಬದುಕ ಪೂರ
ಯಾರೂ ಕೈ ಹಿಡಿಯದಿರೆ ಮೇಲೊಬ್ಬ ಇರುತಾನೆ
ಬೇರೇನನೋ ಬರೆಯುತ ಮೋಡಿಗಾರ..

ಹಿಡಿಗೊಂದು ಬೆರಳಿರಲೇ ಬೇಕು, ಕಳುವಾದ ದಾರಿ ತೋರೋಕೆ.. 

ಒಂದು ಕಿಡಿ ಸೋಕಿದ ಎಲೆ ಹೊತ್ತು ಉರಿದು
ಬೆಟ್ಟ ಗುಡ್ಡಗಳ ನುಂಗುವುದು ಪ್ರಕೃತಿಯ ನೇಮ
ಒಂದು ಕಾರ್ಮುಗಿಲು ಓಲೈಸಿ ಕರಗಿದಾಗ
ಅಲ್ಲಿ ಹೊಸ ಚಿಗುರು ಮೂಡುವುದೇ ನಿಜವಾದ ಪ್ರೇಮ

**ಚರಣ ೨**
ಮನವೆಂಬ ಕೊಳದಲ್ಲಿ ಕಲ್ಲೊಂದು ಬಿದ್ದಾಗ 
ಎದ್ದ ಅಲೆಗಳು ಮತ್ತೆ ಕೂಡುವಂತೆ 
ಅವಲಂಬಿಸಿ ಬಳ್ಳಿ ಮರವನ್ನು ತಬ್ಬಿರಲು 
ಹೂವು ಬಿಟ್ಟು ಚಂದಗೊಳಿಸಿದಂತೆ 
ಇದ್ದಂತೆ ಇರುವಾಗ ಇಬ್ಬಂದಿ ಇರದಂತೆ
ಮತ್ತೊಬ್ಬರನುಕರಣೆಯಿಂದಾಗಿ ಗೋಳು
ಕನ್ನ ಹಾಕುವ ಮನೆಯ ಕನ್ನಡಿಯ ಮೊಗದಲ್ಲಿ
ಕಾಣಬಹುದು ನಮ್ಮ ಬಿಂಬ ಅದರಲ್ಲೂ 

ಒಂದಷ್ಟು ಸೋಲುಗಳು ಬೇಕು, ಸರಿ ತಪ್ಪು ಕಲಿಸಿ ನಡೆಸೋಕೆ.. 

ಒಂದು ನೂರಾದರೂ ಹೊಮ್ಮುವುದು ಎದೆಯಲಿ
ಹಚ್ಚೆಯ ರೂಪ ತಾಳಿದವು ಒಂದೆರಡು ಸಾಲು
ಒಂದು ಸಾಗರವೇ ಅಡಗಿರಲು ಕಣ್ಣಿನಲ್ಲಿ
ಭಾವಕೆ ಮಣಿದು ಹರಿಯುವುದು ಒಂದೆರಡು ಹನಿಯು
ಒಂದು ಇರುಳು ದಾಟಿ ಎಷ್ಟೆಲ್ಲ ಕನಸು
ಕಾಡಿ ಕಂಗೆಡಿಸಿದವು ಒಂದೆರಡು ಮಾತ್ರ
ಒಂದು ಬದುಕಿನ ಮಡಿಲಲೆಷ್ಟೊಂದು ಬಣ್ಣ
ಹಚ್ಚಿ ಸಾಗಿಸ ಬೇಕು ನಮಗೊಲಿದ ಪಾತ್ರ.... 

ಒಂದೆರಡು ನೆನಪುಗಳೇ ಸಾಕು, ನಗು ಮೂಡಿಸೋಕೆ.. ಅಳಿಸೋಕೆ.. 

****ಹಾಡು***

https://soundcloud.com/bharath-m-venkataswamy/uxbd6ob3weru

Thursday, 23 January 2020

ರೋಜಾ ತೋಟ ದಾಟಿದಂತೆ ನಿನ್ನ ಮನೆ

ರೋಜಾ ತೋಟ ದಾಟಿದಂತೆ ನಿನ್ನ ಮನೆ 
ತಾಜಾ ನೋಟ ಬೀರಿದಂತೆ ನಿಂತೆ ಸುಮ್ಮನೆ 
ಸಿಟ್ಟಿನಲ್ಲಿ ಸಿಕ್ಕಿಸುತ್ತ ದಾವಣಿ ನಡುವಿಗೆ 
ಆಹಾ ಲಟ್ಟಣಿಗೆ ಹಿಡಿದು ನಿಂತೆ ಮೋಹಿನಿ 

ಎಲ್ಲರೆದುರು ಅಷ್ಟು ಸದ್ದು ಮಾಡೋ ಕಿಂಕಿಣಿ 
ಒಂಟಿ ದಾರಿಯಲ್ಲಿ ಸಿಕ್ಕರಂತೂ ಕರಗೋ ಹಿಮ ಮಣಿ 
ತಲೆ ಎತ್ತಿ ನಡೆಯುತೀಯ ನಿನ್ನ ಊರಲಿ 
ಎಲ್ಲ ಸೊಕ್ಕ ಭಾರ ಹೊತ್ತುಕೊಂಡು ಟೊಂಕದಲಿ 

ದುಂಬಿ ಹಿಂಡು ಸಾಗುತಾವೆ ನಿನ್ನ ಹಿಂದೆ 
ರೋಜಾ ಹೂವ ಜೇನ ಹೀರೋ ನೆವದಲಿ 
ನಾನು ಸಗಟು ಖರೀದಿಗೆ ಬರುವೆನು 
ದಿನವೂ ಬೇರೆ ಗ್ರಾಹಕನ ಸೋಗಿನಲ್ಲಿ 

ನೆನ್ನೆಗಿಂತ ಕೆಂಪೇರಿದಂತಿದೆ ಅನ್ನುವೆ 
ನಿನ್ನ ಚಿತ್ತ ಹಬ್ಬಿದಾಗ ತೋಟದಿ 
ಅಚ್ಚರಿಯ ರಂಗು ಹರಿದು ಗಲ್ಲಕೆ 
ಕೆಂಗುಲಾಬಿ ಬಿತ್ತು ಅಲ್ಲೇ ನನ್ನ ಕಣ್ಣಿಗೆ 

ವ್ಯಾಪಾರ ಮುರಿದರೂ ಸಂಬಂಧ ಕುದುರಿತು 
ಮನಸ್ಸೆಂಬ ತೋಟದಲ್ಲಿ ಅನುರಾಗ ಅರಳಿತು 
ಬಳಿ ಬಳ್ಳಿಯಲ್ಲೂ ನಾಳೆಗೊಂದು ಹೊಸ ಮೊಗ್ಗು 
ದುಂಬಿಯ ಪರಾಗ ಸ್ಪರ್ಶವಾಗಿ ದಳಕೆ ಸಿಗ್ಗು

ಇನ್ನೂ ತೋಟ ಕಾಯೋ ಕೆಲಸ ನನ್ನದು
ನನ್ನ ಪ್ರೀತಿ ಮಾಡೋ ಕೆಲಸ ಮಾತ್ರ ನಿನ್ನದು 
ನಮ್ಮದೊಂದು ಪುಟ್ಟದಾದ ಲೋಕ ಬೇಲಿ ಒಳಗಿದೆ 
ಅದರ ಆಚೆ ಹೊತ್ತು ಉರಿವ ಜನರ ಹೊಟ್ಟೆ ಕಿಚ್ಚಿದೆ... 

ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು

*ಪಲ್ಲವಿ*
ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು
ಬೇಕಂತಲೇ ಸತಾಯಿಸಿ, ನನ್ನೆಲ್ಲ ಭಾವ ಹೊರುವನು
ವಿನೋದದ ವಿನಂತಿಯ, ವಿನಮ್ರವಾಗಿ ಓದುವ  
ವಿಷಾದವ ವಿಚಾರಿಸಿ, ವಿಶೇಷ ಪ್ರೀತಿ ತೋರುವ 
ಹೇಗಾದರೂ ಒಂದಾಗುವ, ನೀ ಚೂರು ತಾಳೆಯಾ!

ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು
ಬೇಕಂತಲೇ ಸತಾಯಿಸಿ, ನನ್ನೆಲ್ಲ ಭಾವ ಹೊರುವನು

*ಚರಣ ೧*
ಅಂಗೈಯ್ಯಲಿ ಈ ಕೆನ್ನೆಯ ಮುದ್ದಾಗಿ ಸೋಕುತ
ದಿನ ಹೊಸ ಕತೆಯ ಹೊತ್ತು ಹೇಳಿ ಕೂರುವ  
ಉಯ್ಯಾಲೆಯು ತೂಗೋ ಥರ ಸಮೀಪ ಸಾರುತ 
ಮರು ಕ್ಷಣ ತೆರೆ ಮರೆಗೆ ಜಾರಿ ಹೋಗುವ 
ನಿರಂತರ ತರಂಗವಾಗಿ ನನ್ನಲೇ ಉಲಿದರೂ 
ಮಧ್ಯಂತರ ಮೌನ ತಾಳಿದ 
ಅವಾಂತರ ಸೃಷ್ಟಿ ಮಾಡಿ ದೂರ ನಿಂತೇ ನಗುವವ 
ನಿರುತ್ತರ ರೂಢಿ ಮಾಡಿದ...  
ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು
ಬೇಕಂತಲೇ ಸತಾಯಿಸಿ, ನನ್ನೆಲ್ಲ ಭಾವ ಹೊರುವನು

*ಚರಣ ೨*
ದಿನಂಪ್ರತಿ ದಿಗಂತಕೆ ನನ್ನನು ಒಯ್ಯುತ
ಅನಂತದಲ್ಲಿ ನನ್ನ ಅವನ ಪಾತ್ರ ಬಿಡಿಸುವ
ಅಲಂಕೃತ ಕಲಾಕೃತಿ ನಾನೆಂದು ಬಣ್ಣಿಸಿ
ಪರೋಕ್ಷವಾಗಿ ನನ್ನ ಮನಕೆ ಗಾಳ ಹಾಕುವ
ನಿರೀಕ್ಷೆಗೊಂದು ನಕ್ಷೆ ಗೀಚಿ ತಣಿಸುವ ಚೋರನು
ಪರೀಕ್ಷೆಯಲ್ಲೂ ಅಂಕ ಗಳಿಸಿದ
ಮೂರಕ್ಷರಕ್ಕೆ ನೂರು ಅರ್ಥ ಕಲ್ಪಿಸಿ ನಿರೂಪಿಸಿ
ತಟಸ್ಥನಾಗಿ ಮನವ ಸೇರಿದ

ನಿಧಾನಿಸು ನಿನಾದವೇ, ಇನ್ನೇನು ಇನಿಯ ಬರುವನು
ಬೇಕಂತಲೇ ಸತಾಯಿಸಿ, ನನ್ನೆಲ್ಲ ಭಾವ ಹೊರುವನು
ವಿನೋದದ ವಿನಂತಿಯ, ವಿನಮ್ರವಾಗಿ ಓದುವ  
ವಿಷಾದವ ವಿಚಾರಿಸಿ, ವಿಶೇಷ ಪ್ರೀತಿ ತೋರುವ 
ಹೇಗಾದರೂ ಒಂದಾಗುವ, ನೀ ಚೂರು ತಾಳೆಯಾ!

ನಾನು ನೀರು ನೀನು ಬಣ್ಣ

ನಾನು ನೀರು ನೀನು ಬಣ್ಣ
ಬೆರೆತು ಹೋಗು ನನ್ನಲಿ
ನಾನು ನೀರು ನೀನು ಹರಿವು
ತ್ರಾಣವಾಗು ನನ್ನಲಿ
ನಾನು ನೀರು ನೀನು ಆವಿ
ಹಬ್ಬುವಾಸೆ ಜಗವನು 
ನಾನು ನೀರು ನೀನು ಅಲೆಯು
ತಲ್ಲಣಿಸು ಕ್ಷಣದಲಿ..!

ನಾನು ಮಣ್ಣು ನೀನು ಹೊನ್ನು 
ಹುದುಗಿ ಹೋಗು ಕಾಣದೆ 
ನಾನು ಮಣ್ಣು ನೀನು ತೇವ 
ಬಿರುಕು ಬಿಟ್ಟ ಬಾಳಿಗೆ 
ನಾನು ಮಣ್ಣು ನೀನು ಬೇರು 
ಆಸೆ ಬಳ್ಳಿ ಚಿಗುರಲು 
ನಾನು ಮಣ್ಣು ನೀನು ಜಾಡು 
ಪ್ರೇಮ ಪಯಣ ಸಾಗಲು!

ನಾನು ಗಾಳಿ ನೀನು ಕೊಳಲು 
ಜೋಡಿ ನಾದ ಹೊಮ್ಮಲು 
ನಾನು ಗಾಳಿ ನೀನು ಉಸಿರು 
ಒಂದೇ ಆಗಲಿಬ್ಬರೂ 
ನಾನು ಗಾಳಿ ನೀನು ತಂಪು 
ತಂಗಾಳಿ ತಳಿರಿಗೆ 
ನಾನು ಗಾಳಿ ನೀನು ತೆನೆ 
ಮಾಗಿ ತೂಗಿ ತೊನೆಯಲು 

ನಾನು ಕಿಚ್ಚು ನೀನು ಹೊಸೆ 
ಹೊತ್ತುಕೊಂಡ ಒಲವಲಿ 
ನಾನು ಮಿಂಚು ನೀನು ಹುಳು 
ಸುತ್ತುವರಿದ ಇರುಳಲಿ 
ನಾನು ಕಿಡಿ ನೀನು ಗರಿಕೆ 
ಸಿಟ್ಟು ಸೆಡವು ಮಸೆದರೆ
ನಾನು ಹಣತೆ ನೀನು ಉರಿ 
ಬಾಳೇ ಬೆಳಕು ಬೆರೆತರೆ 

ನಾನು ಮುಗಿಲು ನೀನು ಹನಿ 
ಕೂಡಿ ಕಟ್ಟು ನನ್ನನು 
ನಾನು ನಕಲಿ ನೀನು ನೀಲಿ 
ಅಸ್ತಿತ್ವಗೊಂಡೆನು  
ನಾ ಬಾನು ನೀ ಬಾನುಲಿ
ಒಂಟಿತನ ಅಸಂಭವ 
ನಾ ಅನಂತ ನೀ ದಿಗಂತ 
ಗುಟ್ಟು ನಮ್ಮ ಸಂಭವ... 

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...